ಆಯೋಧ್ಯೆ(ಜ.21) : ಕೋಟ್ಯಾಂತರ ಹಿಂದೂಗಳ ಶ್ರದ್ಧಾ, ಭಕ್ತಿ ಹಾಗೂ ಆಸ್ಮಿತೆಯ ಕೇಂದ್ರವಾಗಿದ್ದ ಆಯೋಧ್ಯೆ ರಾಮ ಮಂದಿರದ ಪ್ರಾಣಪ್ರತಿಷ್ಠೆಯಾಗಿದೆ. ರಾಮಜನ್ಮಭೂಮಿಯಲ್ಲಿ ಭಗವಾನ್ ಶ್ರೀರಾಮನ ಮಂದಿರ ಲೋಕಾರ್ಪಣೆಯಾಗಿದೆ. 1991ರಿಂದ ಬರೋಬ್ಬರಿ 33 ವರ್ಷಗಳ ಕಾಲ ಬಿಜೆಪಿ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹೋರಾಟ ಮಾಡಿತ್ತು. ತನ್ನ ಪ್ರಣಾಳಿಕೆಯಲ್ಲಿ ಮಂದಿರ್ ವಹೀ ಬನಾಯೇಂಗೆ ಅನ್ನೋ ಭರವಸೆಯನ್ನು ನೀಡಿತ್ತು. ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಬಿಜೆಪಿಯ ದಿಗ್ಗಜ ನಾಯಕರು ರಾಮ ಮಂದಿರಕ್ಕಾಗಿ ಹೋರಾಟ ಮಾಡಿದ್ದಾರೆ. ಆದರೆ ಮೋದಿ ಪ್ರಧಾನಿಯಾದ ಬಳಿಕ ಹಾಗೂ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಬಳಿಕ ಹೋರಾಟದ ಸ್ವರೂಪ ಬದಲಾಯಿತು. ಇದರ ಪರಿಣಾಮ ಬಿಜಿಪಿಯ 33 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಪ್ರಧಾನಿ ಮೋದಿ ಇಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಿಸುವ ಮೂಲಕ ಭವ್ಯ ರಾಮ ಮಂದಿರವನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಮುಖರ ಸಮ್ಮುಖದಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆ ನೆರವೇರಿದೆ. ಈ ಹಿಂದೆ ಪೂಜಿಸಲ್ಪಡುತ್ತಿದ್ದ ರಾಮನ ವಿಗ್ರಹವನ್ನೂ ಗರ್ಭಗುಡಿಯಲ್ಲಿ ರಾಮ ಲಲ್ಲಾನ ಹೊಸ ಮೂರ್ತಿಯ ಎದುರು ಇರಿಸಲಾಗಿದ್ದು ಪ್ರಾಣ ಪ್ರತಿಷ್ಠೆ ಸಂಬಂಧಿತ ಧಾರ್ಮಿಕ ಪ್ರಕ್ರಿಯೆಗಳು ನಡೆದಿವೆ. ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆ ನೆರವೇರುತ್ತಿದ್ದಂತೆ ಎಲ್ಲೆಡೆ ರಾಮನಾಮ ಮುಗಿಲುಮುಟ್ಟಿತ್ತು ಹಾಗೂ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ಗಳು ರಾಮ ಮಂದಿರದ ಮೇಲೆ ಪುಷ್ಪವೃಷ್ಟಿಗರೆದವು.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಧಿಕಾರಕ್ಕೇರಿದ ಬೆನ್ನಲ್ಲೇ ರಾಮ ಮಂದಿರದ ಭರವಸೆಗಳು ಹೆಚ್ಚಾಯಿತು. ಸಾಂವಿಧಾನಿಕ, ಕಾನೂನಾತ್ಮಕ ದಾರಿಗಳ ಮೂಲಕ ಪ್ರಯತ್ನ ನಡೆಸಿತು. ಆದರೆ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದ್ದ ಕಾರಣ ಮಂದಿರ ನಿರ್ಮಾಣ ಸಾಧ್ಯವಾಗಲಿಲ್ಲ. ಇತ್ತ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ರಾಮ ಮಂದಿರ ಆದ್ಯತೆಯನ್ನಾಗಿ ತೆಗೆದುಕೊಂಡಿತ್ತು.ಸಂವಿಧಾನದ ಚೌಕಟ್ಟಿನೊಳಗೆ ಇರುವ ಎಲ್ಲ ಸಾಧ್ಯತೆಗಳನ್ನು ಅನ್ವೇಷಿಸಿ, ಅದಕ್ಕೊಂದು ನೀಲನಕ್ಷೆ ಸಿದ್ಧಪಡಿಸಿತು. 2019ರ ಸುಪ್ರೀಂ ಕೋರ್ಟ್ ತೀರ್ಪು ಬಿಜೆಪಿಯ ಪ್ರಯತ್ನಕ್ಕೆ ಪುಷ್ಠಿ ನೀಡಿತು. ಅಲ್ಲಿಂದಲೇ ಮಂದಿರ ನಿರ್ಮಾಣ ಕಾರ್ಯ ಆರಂಭಗೊಂಡು ಇದೀಗ ಭವ್ಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೇರವೇರಿದೆ. ಬಿಜೆಪಿ 33 ವರ್ಷಗಳ ಹೋರಾಟವನ್ನು ಪ್ರಧಾನಿ ನರೇಂದ್ರ ಮೋಡಿ ಈಡೇರಿಸುವ ಮೂಲಕ ತನ್ನ ಬದ್ಧತೆಯನ್ನು ಎತ್ತಿ ಹಿಡಿಯಿತು.
Discussion about this post