ಮಂಗಳೂರು: ಕೃತಕ ಬುದ್ಧಿಮತ್ತೆ (AI) ಮತ್ತು ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಭಾರತೀಯ ಶೈಕ್ಷಣಿಕ ಕ್ಷೇತ್ರ ಕೇವಲ ಪಠ್ಯಪುಸ್ತಕದ ಬೋಧನೆಗೆ ಸೀಮಿತವಾಗಿಲ್ಲ ಎಂಬುದನ್ನು ಕರಾವಳಿಯ ಯುವ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತೆ ಸಾಬೀತುಪಡಿಸಿದ್ದಾರೆ.
ಮಂಗಳೂರಿನ ಮುಕ್ಕದ ಶ್ರೀನಿವಾಸ್ ಯೂನಿವರ್ಸಿಟಿಯ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ತಂಡ ಯಾವುದೇ ಚಾಲಕನ ಹಸ್ತಕ್ಷೇಪವಿಲ್ಲದೆ ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಚಾಲಕರಹಿತ ಕಾರುಗಳು ಕೋಟ್ಯಂತರ ರೂಪಾಯಿ ವೆಚ್ಚದ್ದಾಗಿದ್ದರೆ, ಈ ಯುವ ವಿಜ್ಞಾನಿಗಳ ತಂಡವು ತೀರ ಕಡಿಮೆ ವೆಚ್ಚದಲ್ಲಿ 4 ಲಕ್ಷದಲ್ಲಿ, ಸಾಮಾನ್ಯ ಅಥವಾ ಹಳೆಯ ವಾಹನಗಳಿಗೂ ಅಳವಡಿಸಬಹುದಾದ ಸ್ವಯಂಚಾಲಿತ ತಂತ್ರಜ್ಞಾನವನ್ನು ಆವಿಷ್ಕರಿಸಿ ಎಲ್ಲರ ಗಮನ ಸೆಳೆದಿದೆ.
ಎಐ ಆಧಾರಿತ ಸ್ವಯಂಚಾಲಿತ ವಿದ್ಯುತ್ ವಾಹನ “ಶ್ರೀ ವಾಹನ್”; ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಲಾದ ಎಐ ಆಧಾರಿತ ಸ್ವಯಂಚಾಲಿತ ವಿದ್ಯುತ್ ವಾಹನದಲ್ಲಿ ಲಿಡಾರ್, ಎಐ ವಿಷನ್ ಸಿಸ್ಟಮ್, ಜಿಪಿಎಸ್ ಆಧಾರಿತ ಮಾರ್ಗಸಂಚಲನ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಸಿಸ್ಟೆಂಟ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಪ್ರಸ್ತುತ ಈ ವಾಹನ ಪೂರ್ವನಿರ್ಧರಿತ ಮಾರ್ಗದಲ್ಲಿ ಸಂಪೂರ್ಣ ಸ್ವಯಂಚಾಲಿತವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಸುರಕ್ಷತೆ ಮತ್ತು ಕಾರ್ಯಾಚರಣೆಯ ಅನುಕೂಲತೆಗಾಗಿ ರಿಮೋಟ್ ಕಂಟ್ರೋಲ್ ಓವರ್ರೈಡ್ ವ್ಯವಸ್ಥೆ ಸಹ ಒದಗಿಸಲಾಗಿದೆ. ಭವಿಷ್ಯದಲ್ಲಿ ಯಾವುದೇ ಪೂರ್ವ ನಕ್ಷೆ ಇಲ್ಲದ ಪ್ರದೇಶಗಳಲ್ಲಿಯೂ ಸಹ ಸ್ವಯಂ ಮಾರ್ಗ ಪತ್ತೆಹಚ್ಚಿ ಸಂಚರಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಶೋಧನೆ ಮುಂದುವರಿದಿದೆ.
ಸ್ವಯಂಚಾಲಿತ ವಿದ್ಯುತ್ ವಾಹನವು ಆರು ಆಸನಗಳ ಸಾಮರ್ಥ್ಯ ಹೊಂದಿದ್ದು, ಅಗತ್ಯವಿದ್ದಲ್ಲಿ ರೋಗಿಗಳನ್ನು ಸಾಗಿಸಲು ಅನುಕೂಲವಾಗುವಂತೆ ಪರಿವರ್ತಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ದಟ್ಟ ವಾಹನ ಸಂಚಾರವನ್ನು ತಪ್ಪಿಸಲು ಆಂಬುಲೆನ್ಸ್ ರೀ-ರೌಟಿಂಗ್ ಆಪ್ ಜೊತೆ ಕಾರ್ಯನಿರ್ವಹಿಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.
ಈ ವಾಹನದಲ್ಲಿ 5 ಕಿಲೋವ್ಯಾಟ್ ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿ ಅಳವಡಿಸಲಾಗಿದ್ದು, ಸುಮಾರು ಒಂದೂವರೆ ಗಂಟೆಗಳ ಬ್ಯಾಟರಿ ಬ್ಯಾಕಪ್ ಒದಗಿಸುತ್ತದೆ. ಒಂದೇ ಬಾರಿ ಚಾರ್ಜ್ ಮಾಡಿದರೆ ಸುಮಾರು 20 ಕಿಲೋಮೀಟರ್ ದೂರ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಅಗತ್ಯಕ್ಕೆ ಅನುಗುಣವಾಗಿ ಬ್ಯಾಟರಿಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಬಹುದಾಗಿದೆ. ವಾಹನವು ಮ್ಯಾನುಯಲ್ ಮೋಡ್ನಲ್ಲಿ ಗಂಟೆಗೆ ಸುಮಾರು 28 ಕಿ.ಮೀ. ಹಾಗೂ ಸ್ವಯಂಚಾಲಿತ ಮೋಡ್ನಲ್ಲಿ ಗಂಟೆಗೆ 5 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ.
ಈ ವಾಹನದಲ್ಲಿ ಲಿಡಾರ್, ಅಲ್ಟ್ರಾಸೋನಿಕ್ ಸಂವೇದಕ, ಓಡೊಮೆಟಿರಿ, ವಿಶುವಲ್ ಸ್ಲಾಮ್ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧಾರಿತ ಮ್ಯಾಪಿಂಗ್ ಗಣನಾ ಕ್ರಮಾವಳಿಗಳನ್ನು ನಿರ್ವಹಿಸುವ ಸಿಂಗಲ್ ಬೋರ್ಡ್ ಕಂಪ್ಯೂಟರ್ ಸೇರಿದಂತೆ ಅತ್ಯಾಧುನಿಕ ಸಂವೇದಕ ಫ್ಯೂಶನ್ ಟೆಕ್ನಾಲಜಿ ಅಳವಡಿಸಲಾಗಿದೆ.
ಈ ಸ್ವಯಂಚಾಲಿತ ವಾಹನವನ್ನು ರಕ್ಷಣಾ ಕ್ಷೇತ್ರದಲ್ಲಿ ದೂರ ನಿಯಂತ್ರಿತ ವಾಹನವಾಗಿ, ಕೈಗಾರಿಕಾ ಬಳಕೆಗಾಗಿ, ಮಾನವರ ಸುರಕ್ಷಿತ ಸಂಚಾರಕ್ಕೆ ಹಾಗೂ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತ್ವರಿತವಾಗಿ ಸಾಗಿಸಲು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ.
ಭಾರತೀಯ ರಸ್ತೆ ನಕ್ಷೆಗಳಿಗೆ ಹೊಂದಿಕೊಳ್ಳುವ ಪೂರ್ವ-ಪ್ರಶಿಕ್ಷಿತ (Pre-trained) ಸ್ವಯಂಚಾಲಿತ ವಾಹನಗಳ ಅಭಿವೃದ್ಧಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಉತ್ತಮ ಬೇಡಿಕೆ ಇರುವುದರಿಂದ, ಈ ಯೋಜನೆ ಭವಿಷ್ಯದ ಸಂಶೋಧನೆ ಹಾಗೂ ವಾಣಿಜ್ಯೀಕರಣಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಈಗಾಗಲೇ ಬಳಕೆಯಲ್ಲಿದ್ದ ವಾಹನವನ್ನು ಮರುರೂಪಾಂತರ ಮಾಡುವ ಮೂಲಕ ಅಭಿವೃದ್ಧಿಪಡಿಸಿರುವ ಈ ಯೋಜನೆಯ ಒಟ್ಟು ವೆಚ್ಚ ಸುಮಾರು 4 ರಿಂದ 5 ಲಕ್ಷ ಆಗಿದ್ದು, ಕೇವಲ ಆರು ತಿಂಗಳ ಅವಧಿಯಲ್ಲಿ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಸಂಶೋಧಕ ಹಾಗೂ ವಿದ್ಯಾರ್ಥಿ ತಂಡದ ಮುಖ್ಯಸ್ಥ ವಿಶಾಖ್ ಮಾತನಾಡಿ, “ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಶ್ರೇಯಸ್, ಉಜ್ವಲ್, ಅದ್ವಿತೀಯ, ಪ್ರಖ್ಯಾತ್, ಅಕ್ಷಯ್ ಮತ್ತು ಮಂಜುನಾಥ್ ಅವರನ್ನೊಳಗೊಂಡ ನಮ್ಮ ತಂಡ ಕಳೆದ 5 ರಿಂದ 6 ತಿಂಗಳುಗಳಿಂದ ನಿರಂತರವಾಗಿ ಶ್ರಮಿಸಿ ಈ ‘ಶ್ರೀ-ವಾಹನ್’ ಸಿದ್ಧಪಡಿಸಿದೆ. ಬೃಹತ್ ಕಂಪನಿಗಳು ಕೋಟ್ಯಂತರ ಹಣ ಹಾಗೂ ಸುದೀರ್ಘ ಸಮಯ ತೆಗೆದುಕೊಳ್ಳುವ ಈ ತಂತ್ರಜ್ಞಾನವನ್ನು ನಾವು ಅತ್ಯಂತ ಕಡಿಮೆ ವೆಚ್ಚ ಮತ್ತು ಕಡಿಮೆ ಅವಧಿಯಲ್ಲಿ ಅಭಿವೃದ್ಧಿಪಡಿಸಿದ್ದೇವೆ. ಪ್ರೊ. ವಿಶ್ವಾಸ್ ಸರ್ ಅವರ ತಾಂತ್ರಿಕ ಮಾರ್ಗದರ್ಶನ ನಮಗೆ ದೊಡ್ಡ ಶಕ್ತಿಯಾಗಿತ್ತು. ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ಸುಧಾರಿಸಿ ಪೂರ್ಣಪ್ರಮಾಣದ ಆಂಬ್ಯುಲೆನ್ಸ್ ಹಾಗೂ ಸ್ವಯಂಚಾಲಿತ ವಾಹನವಾಗಿ ವಿಸ್ತರಿಸಲಿದ್ದೇವೆ” ಎಂದರು.


Discover more from Coastal Times Kannada
Subscribe to get the latest posts sent to your email.







Discussion about this post