ಮಂಗಳೂರು, ಅ.22: ಲಾಡ್ಜ್ ಒಂದರಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಮಂಗಳೂರಿನ ಕದ್ರಿ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಅಂಕಿಟೋಲ ಮತ್ತು ಘಾನಾ ದೇಶದ ಸಲಾಮ್ ಕ್ರಿಸ್ತಿಯನ್ ಬಂಧಿತರು. ಕದ್ರಿ ಠಾಣೆ ವ್ಯಾಪ್ತಿಯ ಫ್ಲಾಟ್ ಒಂದರಲ್ಲಿ ಇವರು ಬೆಂಗಳೂರಿನಿಂದ ಬಂದು ಉಳಿದುಕೊಂಡಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಕದ್ರಿ ಠಾಣೆ ಎಸ್ಐ ಉಮೇಶ್ ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ವೀಸಾ ಬಗ್ಗೆ ಪರಿಶೀಲನೆ ನಡೆಸಿದಾಗ ಇಬ್ಬರು ಕೂಡ 2018ರ ಬಳಿಕ ಸೂಕ್ತ ವೀಸಾ ಇಲ್ಲದೆ ವಾಸ ಇರುವುದು ಕಂಡುಬಂದಿದೆ. ನೈಜೀರಿಯಾದ ವ್ಯಕ್ತಿ ಬೆಂಗಳೂರಿನ ಬಾಣಸವಾಡಿಯಲ್ಲಿ ಸೆಲೂನ್ ನಡೆಸುತ್ತಿದ್ದು ಮಣಿಪುರದ ಯುವತಿಯನ್ನು ಮದುವೆಯಾಗಿ ಒಂದು ಮಗುವನ್ನು ಹೊಂದಿದ್ದಾನೆ. ಈತನ ಗೆಳೆಯ ಸಲಾಮ್ ಕ್ರಿಸ್ತಿಯನ್ ಬೆಂಗಳೂರಿನಲ್ಲಿ ಫುಟ್ಬಾಲ್ ಆಡುತ್ತಿದ್ದು ಕೊತ್ತನೂರಿನಲ್ಲಿ ವಾಸವಿದ್ದ. ಇಬ್ಬರಿಗೂ ಮಂಗಳೂರು ಮೂಲದ ಅನಿಲ್ ಡಿಸಿಲ್ವ ಸಮಾನ ಸ್ನೇಹಿತರಾಗಿದ್ದು ಅವರೊಂದಿಗೆ ಮಂಗಳೂರಿಗೆ ಬಂದಿದ್ದರು.
ಅನಿಲ್ ಡಿಸಿಲ್ವಾ ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದು ಅವರ ಖಾಸಗಿ ಫಂಕ್ಷನ್ ನಲ್ಲಿ ಪಾಲ್ಗೊಳ್ಳಲು ಗೆಳೆಯರು ಬಂದಿದ್ದರು. ಅಕ್ರಮ ನೆಲೆಸಿದ್ದರಿಂದ ಇಬ್ಬರನ್ನೂ ಬಂಧಿಸಿ ಪೊಲೀಸರು ಬೆಂಗಳೂರಿಗೆ ಕಳಿಸಿಕೊಟ್ಟಿದ್ದು ಡಿಟೆನ್ಶನ್ ಸೆಂಟರಿನಲ್ಲಿ ಇರಿಸಲಾಗಿದೆ.
Discussion about this post