ಬೆಳ್ತಂಗಡಿ, ಎಪ್ರಿಲ್ 24: ಯುವಕನೊಬ್ಬ ತಡರಾತ್ರಿ ಹಂಚು ತೆಗೆದು ದೇಗುಲದೊಳಗೆ ನುಗ್ಗಿ ದೇವರ ಮೂರ್ತಿ ಭಗ್ನಗೊಳಿಸಿದ ಘಟನೆ ವೇಣೂರು ಬಳಿಯ ಬಳಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಬುಧವಾರ ನಸುಕಿನ ಜಾವ ಎರಡು ಗಂಟೆ ವೇಳೆಗೆ ಘಟನೆ ನಡೆದಿದ್ದು ಕೃತ್ಯ ಎಸಗಿದವನನ್ನು ಯಶಸ್ (28) ಎಂದು ಗುರುತಿಸಲಾಗಿದೆ. ದೇವಸ್ಥಾನಕ್ಕೆ ಸಂಬಂಧಪಟ್ಟ ವ್ಯಕ್ತಿಯೊಬ್ಬರ ಮಗನಾಗಿರುವ ಈತ ಮನೆಯಲ್ಲಿ ಜಗಳ ಮಾಡಿಕೊಂಡು ಕೆಲವೊಮ್ಮೆ ದೇವಸ್ಥಾನದಲ್ಲೇ ಇರುತ್ತಿದ್ದನಂತೆ. ತಡರಾತ್ರಿ ಏಕಾಏಕಿ ಕಪ್ಪು ಬಣ್ಣದ ಥಾರ್ ಜೀಪ್ ನಲ್ಲಿ ಬಂದಿದ್ದು ವಾಹನವನ್ನು ದೇವಸ್ಥಾನ ಪಕ್ಕದ ಸುಬ್ರಹ್ಮಣ್ಯ ಭಟ್ ಎಂಬವರ ಮನೆಯ ಮುಂದೆ ನಿಲ್ಲಿಸಿದ್ದ.
ಬಳಿಕ ‘ಎನನ್ ಬಚಾವ್ ಮಲ್ಪಿ’ (ನನ್ನನ್ನು ರಕ್ಷಿಸಿ) ಎಂದು ತುಳುವಿನಲ್ಲಿ ಜೋರಾಗಿ ಕೂಗಾಡುತ್ತ ಅವರ ಮನೆಗೆ ನುಗ್ಗಲು ಯತ್ನಿಸಿದ್ದು ಆನಂತರ ಬಳಂಜ ದೇವಸ್ಥಾನಕ್ಕೆ ಸೇರಿದ ದೇವರ ಜಲಕದ ಕೆರೆಗೆ ಹಾರಿದ್ದ. ಅಲ್ಲಿಂದ ದೇವಸ್ಥಾನದ ಕಂಬದ ಮೂಲಕ ಮೇಲೆ ಹತ್ತಿ ಹಂಚು ತೆಗೆದು ದೇಗುಲದ ಒಳನುಗ್ಗಿದ್ದ. ಆನಂತರ, ಕೊಡಮಣಿತ್ತಾಯ ದೈವದ ಗುಡಿಗೆ ಇಳಿದು ಮಣೆ ಮಂಚದಲ್ಲಿದ್ದ ಘಂಟಾಮಣಿಯನ್ನು ತೆಗೆದು ಹೊರಗೆ ಎಸೆದಿದ್ದಾನೆ.
ಅಲ್ಲಿಂದ ದೇವಸ್ಥಾನದ ಗೋಪಾಲಕೃಷ್ಣ ದೇವರ ಗುಡಿಯೊಳಗೆ ನುಗ್ಗಿ ದೇವರ ವಿಗ್ರಹವನ್ನೂ ಭಗ್ನಗೊಳಿಸಿ ವಿಕೃತಿ ಮೆರೆದಿದ್ದಾನೆ. ಗುಡಿಯೊಳಗಿದ್ದ ದೇವರ ಪರಿಕರಗಳನ್ನು ಎಸೆದು ವಿಕೃತವಾಗಿ ವರ್ತಿಸಿದ್ದಾನೆ. ಆಬಳಿಕ ವಾಹನವನ್ನು ಸುಬ್ರಹ್ಮಣ್ಯ ಭಟ್ ಅವರ ಮನೆಯಂಗಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಘಟನೆಯ ಬಗ್ಗೆ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಬಿ.ಶೀತಲ್ ಪಡಿವಾಳ್ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೇವಸ್ಥಾನಕ್ಕೆ ಸಂಬಂಧಪಟ್ಟವರು ಆತನಿಗೆ ಸ್ವಲ್ಪ ಮಾನಸಿಕ ಅಸ್ವಸ್ಥತೆ ಇದೆಯೆಂದು ಹೇಳುತ್ತಿದ್ದಾರೆ. ಇಂಜಿನಿಯರಿಂಗ್ ಮುಗಿಸಿ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದ ಯಶಸ್ ದಿಢೀರ್ ಆಗಿ ವಿಕೃತವಾಗಿ ವರ್ತಿಸಿದ್ದು ಸ್ಥಳೀಯರಲ್ಲಿ ಅಚ್ಚರಿ ಸೃಷ್ಟಿಸಿದೆ. ವೇಣೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post