ಪುತ್ತೂರು: ಉದ್ಯೋಗದ ಆಮೀಷವೊಡ್ಡಿ ಪುತ್ತೂರಿನ ಯುವತಿಯೊಬ್ಬಳಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಮೂವರನ್ನು ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಚಿಕ್ಕನಾಯಕನಹಳ್ಳಿಯ ಸುಮಿತ್ರ ಬಾಯಿ ಸಿ.ಆರ್(23) ಹಾಸನದ ಹಳಸಿನಹಳ್ಳಿಯ ಸೌಂದರ್ಯ ಎಂ.ಎನ್ (21), ತುಮಕೂರಿನ ಚಿಕ್ಕನಾಯಕನಹಳ್ಳಿಯ ರಾಹುಲ್ ಕುಮಾರ್ ನಾಯ್ಕ (19) ಬಂಧಿತರು.
ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ನಿಶ್ಮಿತಾ ವಂಚನೆಗೆ ಒಳಗಾದ ಯುವತಿ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕಚೇರಿ ಕೆಲಸ ಖಾಲಿ ಇದೆ. . ನಿರುದ್ಯೋಗಿಗಳಿಗೆ ಬಂದ ದಿನವೇ ಕೆಲಸ ಸಿಗುತ್ತದೆ ಎಂಬ ಪತ್ರಿಕಾ ಜಾಹೀರಾತಿನಿಂದ ಆಕರ್ಷಿತಳಾದ ಸಂತ್ರಸ್ತೆ ಆರೋಪಿಗಳು ಜಾಹೀರಾತು ಜತೆಗೆ ನೀಡಿದ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಕರೆಯನ್ನು ಸ್ವೀಕರಿಸಿ ನೀವು ಕೆಲಸಕ್ಕೆ ಸೇರ ಬಯಸಿದರೆ ಫೀಸ್ ಕೊಡಬೇಕು ಎಂಬುದಾಗಿ ತಿಳಿಸಿ ಕಳೆದ ಸುಮಾರು 7 ತಿಂಗಳಿನಿಂದ ಪದೇ ಪದೇ ಆನ್ ಲೈನ್ ಮುಂಖಾಂತರ ಹಣವನ್ನು ಪಾವತಿ ಮಾಡುವಂತೆ ತಿಳಿಸಿದ್ದರು. ಅದರಂತೆ ಗೂಗಲ್ ಪೇ ಮುಖಾಂತರ ಇದುವರೆಗೆ ಸುಮಾರು ಒಟ್ಟು 2,25,001 ರೂ.ವನ್ನು ಆರೋಪಿಗಳ ಖಾತೆಗೆ ಪಾವತಿ ಮಾಡಿದ್ದರು. ಅದರೂ ಸಹ ಪದೇ ಪದೇ ಕರೆ ಮಾಡಿ ಇನ್ನು ಹಣವನ್ನು ನೀಡಬೇಕು ಎಂದು ಹೇಳಿ ಕೆಲಸ ಕೊಡುವುದಾಗಿ ನಂಬಿಸಿ ಯಾವುದೇ ಉದ್ಯೋಗ ನೀಡದೇ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯಲ್ಲೆ ಪ್ರಥಮ: ಇದೊಂದು ಸೈಬರ್ ಅಪರಾಧಕ್ಕೆ ಸಂಬಂಧಿತ ಪ್ರಕರಣವಾದರೂ ಸಂತ್ರಸ್ತೆಯನ್ನು ಮಂಗಳೂರಿಗೆ ಕಳುಹಿಸಿದೇ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರೇ ಹೆಚ್ಚಿನ ಮುತುವರ್ಜಿ ವಹಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ರೀತಿ ಸೆನ್ ಠಾಣೆಗೆ ಸಂಬಂಧಿಸಿದ ಪ್ರಕರಣವನ್ನು ಸ್ಥಳೀಯ ಠಾಣೆಯೊಂದು ಭೇಧಿಸಿರುವುದು ದಕ್ಷಿಣ ಜಿಲ್ಲೆಯಲ್ಲೆ ಪ್ರಥಮ ಎನ್ನಲಾಗಿದೆ. ಬ್ಯಾಂಕ್ ಡಿಟೈಲ್ ಮತ್ತು ಮೊಬೈಲ್ ಹಾಗೂ ಎಟಿಎಂ ಡ್ರಾ ಮಾಡಿದ್ದನ್ನು ಆದರಿಸಿ ಸಂಪ್ಯ ಠಾಣೆ ಪೊಲೀಸರು ಆರೋಪಿಗಳ ಜಾಡನ್ನು ಪತ್ತೆ ಹಚ್ಚಿದ್ದಾರೆ
19 -23 ವರ್ಷದ ಯುವಕ ಯುವತಿಯರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಇನ್ನಷ್ಟೆ ತಮ್ಮ ಭವಿಷ್ಯ ರೂಪಿಸ ಬೇಕಾದ ವಯಸ್ಸಿನಲ್ಲಿ ಈ ಯುವಕ ಯುವತಿಯರು ಸುಲಭದಲ್ಲಿ ಹಣ ಗಳಿಸುವ ಉದ್ದೇಶದಿಂದ ಅಪರಾಧ ಕೃತ್ಯ ಎಸಗಿರುವುದು ಆತಂಕಕಾರಿ ವಿದ್ಯಮಾನವಾಗಿದೆ.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎಂ.ಎನ್ ಮತ್ತು ರಾಜೇಂದ್ರ ಡಿ.ಎನ್. ಅವರ ನಿರ್ದೇಶನದಲ್ಲಿ ಪುತ್ತೂರು ಪೊಲೀಸ್ ಉಪಾಧೀಕ್ಷಕ ಡಾ. ಅರುಣ್ ನಾಗೇಗೌಡ ಅವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ರಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ರವಿ ಬಿ.ಎನ್ ಅವರ ಆದೇಶದಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕ ಜಂಬುರಾಜ್ ಬಿ ಮಹಾಜನ್ ನೇತೃತ್ವದಲ್ಲಿ ಎಎಸ್ಐ ಶ್ರೀದರ್ ರೈ, ಸಿಬ್ಬಂದಿಗಳಾದ ಮಧು ಕೆ.ಎನ್., ಸತೀಶ್ ಎನ್. ಗಿರೀಶ ಕೆ., ಶಿವಪುತ್ರಮ್ಮ, ಹೆಚ್.ಜಿ. ಹಕೀಂ ಮತ್ತು ಗಣಕ ಯಂತ್ರ ವಿಭಾಗದ ದಿವಾಕರ್, ಸಂಪತ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
Discussion about this post