ಮಂಗಳೂರು: ಹಣ ಮತ್ತು ಚಿನ್ನ ಕಳವು ಮಾಡಿದ ಕಾರ್ಮಿಕನಿಗೆ ಮನೆಮಂದಿ ಹಲ್ಲೆ ನಡೆಸುವ ಘಟನೆ ಹೊರವಲಯದ ಅರ್ಕುಳದಲ್ಲಿ ನಡೆದಿದೆ. ಬೆಲ್ಟ್, ಚೇರ್ ಸೇರಿದಂತೆ ಸಿಕ್ಕ ಸಿಕ್ಕ ವಸ್ತಗಳಿಂದ ಹೊಡೆದಿದ್ದು, ಜೊತೆ ಇರುವ ಮತ್ತೋರ್ವನ ಮೇಲೂ ಹಲ್ಲೆ ಮಾಡಲಾಗಿದೆ. ಹಲ್ಲೆ ದೃಶ್ಯ ಅದೇ ಮನೆಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಅರ್ಕುಳದ ಮನೆಯೊಂದರಲ್ಲಿ ಕೆಲಸಕ್ಕಿದ್ದ ಬಿಹಾರ ಮೂಲದ ಇಬ್ಬರು ಯುವಕರ ಪೈಕಿ ಓರ್ವ ಅದೇ ಮನೆಯಿಂದ ಒಂದೂವರೆ ಲಕ್ಷ ರೂ. ನಗದು ಮತ್ತು ಚಿನ್ನಾಭರಣ ಕಳವು ಮಾಡಿದ್ದನೆನ್ನಲಾಗಿದೆ. ಇದರ ಬಗ್ಗೆ ಮನೆಯವರು ಆತನನ್ನು ಪ್ರಶ್ನಿಸಿ ಬಾಯಿ ಬಿಡಿಸಲು ಯತ್ನಿಸಿ ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದ್ದು ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು, ವೀಡಿಯೋ ಗಮನಿಸಿ ಕೂಡಲೇ ವಿಚಾರಣೆ ನಡೆಸಿದ್ದೇವೆ. ಬಿಹಾರ ಮೂಲದ ಯುವಕ ಅರ್ಕುಳದ ಮನೆಯೊಂದರಲ್ಲಿ ಕೆಲಸಕ್ಕಿದ್ದ. ಆತ ನಗದು ಮತ್ತು ಚಿನ್ನ ಕಳವು ಮಾಡಿದ್ದ. ಅದನ್ನು ವಾಪಸ್ ನೀಡುವಂತೆ ಹೇಳಿ ಮನೆಯವರು ಹಲ್ಲೆ ನಡೆಸಿರುವುದು ಗೊತ್ತಾಗಿದೆ. ಬಳಿಕ ಆತ ಚಿನ್ನ, ನಗದು ವಾಪಸ್ ನೀಡಿದ್ದಾನೆ. ಎರಡೂ ಕಡೆಯವರು ಕೂಡ ದೂರು ನೀಡದೆ ರಾಜಿಯಲ್ಲೇ ಇತ್ಯರ್ಥ ಮಾಡಿಕೊಂಡಿದ್ದಾರೆ. ಯುವಕ ತನ್ನ ಊರಿಗೆ ವಾಪಸಾಗಿದ್ದಾನೆ ಎಂದು ತಿಳಿಸಿದ್ದಾರೆ.
Discussion about this post