ಮಂಗಳೂರು: ಚಿನ್ನವು ದುಬೈನಿಂದ ಅಕ್ರಮ ಸಾಗಾಟದಿಂದ ಕೇರಳಕ್ಕೆ ಸಾಗಾಟವಾಗುತ್ತಿದ್ದು, ಅಲ್ಲಿಂದ ಕರ್ನಾಟಕ, ಗೋವಾ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಿಗೆ ಸರಬರಾಜು ಆಗುತ್ತದೆ. ಕೇರಳ ಮೂಲದ ಚಿನ್ನದ ಮಾಫಿಯಾದಿಂದ ಹಿಂದೂ ಸಮಾಜ ಮತ್ತು ದೇಶಕ್ಕೆ ಅಪಾಯವಿರುವುದರಿಂದ ಅಕ್ಷಯ ತೃತೀಯ ದಿನ ಹಿಂದೂಗಳ ಚಿನ್ನದಂಗಡಿಯಲ್ಲಿಯೇ ಮಹಿಳೆಯರು ಚಿನ್ನ ಖರೀದಿಸಬೇಕು ಎಂದು ಮಹಿಳೆಯರಿಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮನವಿ ಮಾಡಿದರು.
ಕೇರಳ ಕಳ್ಳತನದಿಂದ ಚಿನ್ನ ಸರಬರಾಜು ಆಗುವ ಅತೀ ದೊಡ್ಡ ಕೇಂದ್ರವಾಗಿದ್ದು, ಕಳ್ಳತನದಿಂದ ಬರುವ ಚಿನ್ನದ ಮಾಫಿಯಾದಿಂದ ಹಿಂದೂ ಸಮಾಜಕ್ಕೆ ವ್ಯವಸ್ಥಿತವಾಗಿ ಮೋಸ ಆಗುತ್ತಿದೆ. ಆದ್ದರಿಂದ ಮಹಿಳೆಯರು, ಮಹಿಳಾ ಸಂಘಟನೆಗಳು ಇದನ್ನು ಗಮನಿಸಬೇಕಾಗಿದೆ. ಕೇರಳದಲ್ಲಿ 800ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಹಿಂದೂ ಸಿದ್ಧಾಂತ ಹೊಂದಿರುವ, ದೇಶಭಕ್ತಿಯ ಕಾರ್ಯದಲ್ಲಿ ತೊಡಗಿದ ಯುವಕರು ಇಲ್ಲಿ ಹತ್ಯೆಯಾಗಿದ್ದಾರೆ. ಈ ಕೊಲೆಗಡುಕರಿಗೆ ಅಕ್ರಮ ಸಾಗಾಟದ ಚಿನ್ನದ ವ್ಯವಹಾರದಿಂದ ಬರುವ ಹಣ ಹೋಗುತ್ತಿದೆ ಎಂದು ಆರೋಪಿಸಿದರು.
ದೇವಸ್ಥಾನಗಳಲ್ಲಿ ಓಂಕಾರ, ಸುಪ್ರಭಾತ ಹಾಕುವ ನಿರ್ಣಯ: ಮೇ 9ರಂದು ಒಂದು ಸಾವಿರ ದೇವಸ್ಥಾನ, ಮಠಗಳಲ್ಲಿ ಬೆಳಗಿನಜಾವ 5 ಗಂಟೆಗೆ ಓಂಕಾರ, ಸುಪ್ರಭಾತ ಹಾಕುವ ನಿರ್ಣಯ ಮಾಡಿದ್ದೇವೆ ಎಂದು ಮುತಾಲಿಕ್ ಇದೇ ವೇಳೆ ತಿಳಿಸಿದರು.
Discussion about this post