ಮಂಗಳೂರು, ನ.1: ನಗರದ ಒಣಮೀನು ಸಂಸ್ಕರಣಾ ಘಟಕದಲ್ಲಿ ಕಾರ್ಯ ನಿರ್ವಹಿಸುವ ಬಿಹಾರ ಮೂಲದ ದಂಪತಿಯ 2 ವರ್ಷದ ಹಸುಳೆ ಮೇಲೆ ಬಿಹಾರ ಮೂಲದ ವ್ಯಕ್ತಿ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ, ಹಸುಳೆಯ ಕೊಲೆ ಯತ್ನ ನಡೆಸಿದ ಘಟನೆ ನಿನ್ನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಬಿಹಾರ ಮೂಲದ ಚಂದನ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೂರು ಮಕ್ಕಳ ತಂದೆಯಾಗಿರುವ ಆರೋಪಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಮಗುವನ್ನು ಉಪ್ಪು ನೀರಿನ ಟ್ಯಾಂಕ್ನಲಿ ಮುಳುಗಿಸಿ ಕೊಲೆಗೆ ಯತ್ನಿಸಿದ್ದು, ಸದ್ಯ ಮಗು ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗು ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಪೋಷಕರ ಜತೆ ಮಾತನಾಡಿ ಧೈರ್ಯ ತುಂಬಿದ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.
‘‘ಬಿಹಾರ ಮೂಲದ ದಂಪತಿ ತಮ್ಮ 3 ಮತ್ತು 2 ವರ್ಷದ ಹೆಣ್ಣು ಮಕ್ಕಳೊಂದಿಗೆ ನಗರದ ಒಣಮೀನು ಸಂಸ್ಕರಣಾ ಘಟಕದಲ್ಲಿ ಮೀನು ಸ್ವಚ್ಛಗೊಳಿಸುವ ಕೂಲಿ ಕೆಲಸ ಮಾಡುತ್ತಿದ್ದು, ನಿನ್ನೆಯೂ ಕೆಲಸಕ್ಕೆ ಹೋಗಿದ್ದಾರೆ. ತಮ್ಮ ಇಬ್ಬರು ಮಕ್ಕಳನ್ನು ತಾವು ವಾಸಿಸುವ ಘಟಕದಲ್ಲಿ ಇತರ ಮಕ್ಕಳು ಹಾಗೂ ಅಲ್ಲಿದ್ದ ತಮ್ಮ ಊರಿನವರ ಜತೆ ಬಿಟ್ಟು ಹೋಗಿದ್ದು, ಸಂಜೆ ಬಂದ ವೇಳೆ ತಮ್ಮ ವಾಸಸ್ಥಳಕ್ಕೆ ಹಿಂತಿರುಗಿದಾಗ 2 ವರ್ಷದ ಹಸುಳೆ ಕಾಣೆಯಾಗಿತ್ತು. ಸುಮಾರು ಎರಡು ಗಂಟೆ ಕಾಲ ಮಗುವಿಗಾಗಿ ಹುಡುಕಾಡಿದಾಗ ರಾತ್ರಿ 9 ಗಂಟೆ ವೇಳೆಗೆ ಮಗು ಉಪ್ಪು ನೀರಿನ ಟ್ಯಾಂಕ್ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಕ್ಷಣ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರಾದರೂ ಅಲ್ಲಿ ಮಗುವಿನ ಗಂಭೀರತೆಯನ್ನು ಅರಿತು ನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಮೂಲಕ ಮಹಿಳಾ ಠಾಣೆಗೆ ಮಾಹಿತಿ ನೀಡಲಾಗಿತ್ತು. ಅದರಂತೆ ಪೋಷಕರು ಹಾಗೂ ಘಟನಾ ಸ್ಥಳದಲ್ಲಿದ್ದ ಮಂದಿಯನ್ನು ವಿಚಾರಿಸಿದಾಗ ನಿನ್ನೆ ಸಂಜೆ 4 ಗಂಟೆಯ ವೇಳೆಗೆ ಅಲ್ಲಿದ್ದ ಬಿಹಾರ ಮೂಲದ ವ್ಯಕ್ತಿ ಮಗುವನ್ನು ಕೊಂಡೊಯ್ದಿರುವ ಬಗ್ಗೆ ಮಾಹಿತಿ ದೊರಕಿತ್ತು. ಅದರಂತೆ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.
ಮಗುವನ್ನು ಮೊದಲಿಗೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಆಗೋದಿಲ್ಲ ಎಂದು ಹೇಳಿದ್ದಕ್ಕೆ ವೆನ್ಲಾಕ್ ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ದಾಖಲು ಮಾಡಲಾಗಿತ್ತು. ಅಲ್ಲಿ ಮಗುವಿಗೆ ದೈಹಿಕ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ವೈದ್ಯರು ತಿಳಿಸಿದ್ದು, ಮಗು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಿನ್ನೆ ಸಂಜೆಯೇ ಬಿಹಾರ ಮೂಲದ ಇತರ ಕಾರ್ಮಿಕರು ಸೇರಿ ಆರೋಪಿಯನ್ನು ಹಿಡಿದಿದ್ದು, ಆತನ ತಲೆ ಬೋಳಿಸಿ ಹಲ್ಲೆ ನಡೆಸಿದ್ದರು. ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ.
Discussion about this post