ಮೂಡಬಿದಿರೆ ,(ನ.1) : ಕರಾವಳಿಯಲ್ಲಿ ಭಾರೀ ಮಳೆ ಬೀಳುತಿದ್ದು, ಇದರ ಜೊತೆಗೆ ಸಿಡಿಲಿನ ಅಘಾತವೂ ತೀವ್ರಗೊಂಡಿದೆ. ಇಂದು ಸಂಜೆ ಮೂಡಬಿದಿರೆಯಲ್ಲಿ ಸಿಡಿಲು ಬಡಿದಿದ್ದು ಇಬ್ಬರು ಯುವಕರು ಮೃತಪಟ್ಟು ಮೂವರು ತೀವ್ರವಾಗಿ ಅಸ್ವಸ್ಥ ಗೊಂಡಿದ್ದಾರೆ.
ಮೂಡುಬಿದಿರೆ ಕಂಚಿಬೈಲ್ನಲ್ಲಿ ಘಟನೆ ನಡೆದಿದ್ದು ಸಿಡಿಲಾಘತಕ್ಕೆ ತುತ್ತಾದ ಐವರು 20- 25 ವರ್ಷದವರು ಎಂದು ತಿಳಿದು ಬಂದಿದೆ. ಕಂಚಿಬೈಲು ನಿವಾಸಿಗಳಾದ ಯಶವಂತ (22) ಹಾಗೂ ಮಣಿಪ್ರಸಾದ್ (22) ಮೃತಪಟ್ಟವರು ಗಣೇಶ್, ಸಂದೀಪ್ ಹಾಗೂ ಪ್ರವೀಣ್ ಅಸ್ವಸ್ಥಗೊಂಡವರು.
ಗಾಯಾಳುಗಳನ್ನು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸೋಮವಾರ ಸಂಜೆ 3. 30 ರ ಸುಮಾರಿಗೆ ಮೂಡುಬಿದಿರೆಯ ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ಕಂಚಿಬೈಲ್ ಯೆರುಗುಂಡಿ ಪ್ರದೇಶದಲ್ಲಿ ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಈ ಐವರು ಯೆರುಗುಂಡಿ ಫಾಲ್ಸ್ಗೆ ತೆರಳಿದ್ದರು ಎಂದು ಹೇಳಲಾಗುತಿದ್ದು ಅಲ್ಲಿ ಇವರಿಗೆ ಸಿಡಿಲು ಬಡಿದಿದೆ ಎಂದು ಹೇಳಲಾಗಿದೆ.