ಬೆಂಗಳೂರು, ಮೇ.3: ಪೂಜೆ ಮತ್ತು ದೀಕ್ಷೆಯ ನೆಪದಲ್ಲಿ ಬ್ಯೂಟಿಷಿಯನ್ ಒಬ್ಬರ ಮೇಲೆ ಜ್ಯೋತಿಷಿಯೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿರುವ ಘನಘೋರ ಘಟನೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಂಡ ಮತ್ತು ಮಗನ ಮೇಲೆ ವಾಮಾಚಾರ ಮಾಡಿಸಿ ಅವರು ರಕ್ತ ಕಾರಿ ಸಾಯುವಂತೆ ಮಾಡುವುದಾಗಿ ಬೆದರಿಸಿ ಆರೋಪಿ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮಹಿಳೆ ದೂರು ಕೂಡ ನೀಡಿದ್ದಾರೆ. ರಾಜಾಜಿನಗರದಲ್ಲಿ ಬ್ಯೂಟಿಷಿಯನ್ ಟ್ರೈನಿಂಗ್ ಸೆಂಟರ್ ನಡೆಸುತ್ತಿದ್ದ ಮಹಿಳೆಗೆ, ತನ್ನ ಸಹೋದರಿಯ ಅಡ್ಮಿಷನ್ ನೆಪದಲ್ಲಿ ಆರೋಪಿ ಮೋಹನ್ ಕುಮಾರ್ ಎಂಬಾತ ಪರಿಚಯವಾಗಿದ್ದ.
ಮಹಿಳೆ ನಡೆಸುತ್ತಿದ್ದ ಟ್ರೈನಿಂಗ್ ಸೆಂಟರ್ನಲ್ಲಿ ಮೊದಲಿಗೆ ತನ್ನ ಸಹೋದರಿಗೆ ಅಡ್ಮಿಷನ್ ಬೇಕು ಎಂದು ಹೇಳಿ ಮೋಹನ್ ಕುಮಾರ್ ಮೊದಲ ಬಾರಿ ಸಂಪರ್ಕಿಸಿದ್ದಾನೆ. ನಂತರ 2025 ಜನವರಿ 1 ರಂದು ಮಹಿಳೆಯ ಕಚೇರಿಗೆ ಬಂದು, ‘ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಲು ವಿಶೇಷ ಪೂಜೆ ಮಾಡಿಸಬೇಕು, ನಾನು ಸಹಾಯ ಮಾಡುತ್ತೇನೆ’ ಎಂದು ವಿಶ್ವಾಸ ಮೂಡಿಸಿದ್ದಾನೆ. ಇದನ್ನು ನಂಬಿದ್ದ ಮಹಿಳೆ ಆತ ಹೇಳಿದ್ದನ್ನೆಲ್ಲಾ ಕೇಳಿದ್ದಾಳೆ.
ಮಹಿಳೆ ಮೇಲೆ ನಿರಂತರ ಅತ್ಯಾಚಾರಕ್ಕೆ ಯತ್ನ: ಮೊದಲಿಗೆ ಜನವರಿ 30ರಂದು ರಾಮನಗರದ ಪಿರಮಿಡ್ ವ್ಯಾಲಿಗೆ ಪೂಜೆ ನೆಪದಲ್ಲಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಪೂಜೆಯ ಬಗ್ಗೆ ಮಾತಾಡಿ, ವಾಪಸ್ಸು ಬರುತ್ತಿರುವಾಗ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಮಹಿಳೆಯ ಮೇಲೆ ಅತ್ಯಾಚಾರ ಯತ್ನ ಮಾಡಿದನೆಂದು ದೂರಿನಲ್ಲಿ ತಿಳಿಸಲಾಗಿದೆ. ಮಹಿಳೆ ವಿರೋಧ ಮಾಡಿದ್ದರಿಂದ ಅವನ ಯತ್ನ ವಿಫಲವಾಗಿ, ಆಕೆನ್ನು ವಾಪಸ್ಸು ಬಿಟ್ಟು ಹೋಗಿದ್ದಾನೆ.
ಇದರ ಕೆಲವೇ ದಿನಗಳ ಬಳಿಕ ಚಾಮುಂಡಿ ಬೆಟ್ಟಕ್ಕೆ ಪುನಃ ಪೂಜೆ ನೆಪದಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾನೆ. ಈ ಬಾರಿ ವಾಪಸ್ಸು ಬರುತ್ತಿರುವಾಗ ಕಾರಿನಲ್ಲೇ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂಬ ಆರೋಪ ಇದೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಗಂಡ ಮತ್ತು ಮಗನ ಮೇಲೆ ವಾಮಾಚಾರ, ಬ್ಲಾಕ್ ಮ್ಯಾಜಿಕ್ ಮಾಡಿ, ರಕ್ತ ಕಾರಿ ಸಾಯುವಂತೆ ಮಾಡಿಸ್ತೀನಿ ಎಂದು ಭಯ ಹುಟ್ಟಿಸಿದ್ದಾನೆ. ಗಂಡ, ಮಗನ ಪ್ರಾಣದ ಭಯದಿಂದ ಮಹಿಳೆ ಯಾರಿಗೂ ವಿಷಯ ತಿಳಿಸದೆ ಮೌನವಾಗಿದ್ದಾಳೆ.
ಫೆಬ್ರವರಿ 10, 2025 ರಂದು ಮತ್ತೆ ‘ನಿಮಗೆ ದೀಕ್ಷೆ ಕೊಡಬೇಕು, ಮನೆಯಲ್ಲೇ ವಿಶೇಷ ವಿಧಿ ಮಾಡಬೇಕು’ ಎಂದು ಹೇಳಿ ಮಹಿಳೆಯ ಮನೆಗೆ ಬಂದಿದ್ದಾನೆ. ಆ ವೇಳೆ ಗಂಡ ಮತ್ತು ಮಗನನ್ನು ಹೊರಗೆ ಕಳಿಸಲು ಜ್ಯೋತಿಷಿ ಒತ್ತಾಯಿಸಿದ್ದಾನೆ. ಒಂದೂವರೆ ಗಂಟೆ ಮನೆ ಒಳಗೆ ಬರಬಾರದು ಎಂದು ಹೇಳಿ ಕಳುಹಿಸಿದ್ದಾನೆಂಬುದು ದೂರು. ಮನೆಯಲ್ಲಿ ಒಬ್ಬಳೇ ಇದ್ದ ಮಹಿಳೆಯ ಕೈ, ಕಾಲು ಮುಟ್ಟುತ್ತಾ, ಸಹಕರಿಸದಿದ್ದರೆ ಗಂಡ, ಮಕ್ಕಳನ್ನು ಕೊಲೆ ಮಾಡುವಂತೆ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಇದಲ್ಲದೆ, ಇದೇ ರೀತಿಯಲ್ಲಿ ಹಲವು ಬಾರಿ ಮನೆಗೆ ಬಂದು, ಪೂಜೆ, ದೀಕ್ಷೆ, ಮಾಟಮಂತ್ರ ನೆಪದಲ್ಲಿ ಮಹಿಳೆಯ ಮೇಲೆ ಅವನಿಂದ ನಿರಂತರ ಅತ್ಯಾಚಾರ ಮತ್ತು ದೌರ್ಜನ್ಯ ನಡೆದಿದೆ ಎಂದು ಹೇಳಲಾಗಿದೆ. ಪದೇ ಪದೇ ದೌರ್ಜನ್ಯ ಹೆಚ್ಚಿದ ಕಾರಣ ಕೊನೆಗೂ ಧೈರ್ಯ ಮಾಡಿದ ಮಹಿಳೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಗೆ ಹೋಗಿ ಅಧಿಕೃತವಾಗಿ ದೂರು ದಾಖಲಿಸಿದ್ದಾಳೆ.
ಆರೋಪಿ ಪರಾರಿ : ಮಹಿಳೆಯ ದೂರು ಆಧಾರದ ಮೇಲೆ ಜ್ಯೋತಿಷಿ ಮೋಹನ್ ಕುಮಾರ್ ವಿರುದ್ಧ ಅತ್ಯಾಚಾರ, ಬೆದರಿಕೆ ಮತ್ತು ವಾಮಾಚಾರ ಹೆಸರಿನಲ್ಲಿ ಮಾನಸಿಕ ಹಿಂಸೆ ನೀಡಿದ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ಅವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post