ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳೆದ ಕೆಲವು ವರ್ಷಗಳಿಂದ ವಿವಿಧ ಹೆಸರಿನಲ್ಲಿ ನಡೆಯುತ್ತಿರುವ ಹೂಡಿಕೆ ಯೋಜನೆಗಳು, ಡೆಪಾಸಿಟ್ ಸ್ಕೀಂಗಳು, ಚಿಟ್ ಮಾದರಿಯ ಹಣಕಾಸು ವ್ಯವಹಾರಗಳು ಹಾಗೂ “ಹೆಚ್ಚು ಲಾಭ”ದ ಭರವಸೆ ನೀಡುವ ಖಾಸಗಿ ಹಣಕಾಸು ವ್ಯವಸ್ಥೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗಂಭೀರ ಆತಂಕ ವ್ಯಕ್ತವಾಗುತ್ತಿದೆ. “ತಿಂಗಳಿಗೆ ಖಚಿತ ಲಾಭ”, “ಕೆಲವೇ ತಿಂಗಳಲ್ಲಿ ಡಬಲ್ ಹಣ”, “ಸೇಫ್ ಇನ್ವೆಸ್ಟ್ಮೆಂಟ್”, “ಗ್ಯಾರಂಟಿ ರಿಟರ್ನ್” ಎಂಬ ಜಾಹೀರಾತುಗಳು ಮತ್ತು ಸಾಮಾಜಿಕ ಜಾಲತಾಣಗಳ ಪ್ರಚಾರಗಳ ಮೂಲಕ ಸಾಮಾನ್ಯ ಜನರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ಹಲವು ಆರೋಪಗಳು ಕೇಳಿಬರುತ್ತಿವೆ.
ಗ್ರಾಮೀಣ ಭಾಗಗಳಿಂದ ಹಿಡಿದು ನಗರ ಪ್ರದೇಶಗಳವರೆಗೆ ಜನರನ್ನು ಸಂಪರ್ಕಿಸಿ ಹಣ ಸಂಗ್ರಹಿಸುವ ಕೆಲವು ಗುಂಪುಗಳು ಹಾಗೂ ಸಂಸ್ಥೆಗಳ ಚಟುವಟಿಕೆಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿವೆ. ಅನೇಕ ಜನರು ಬ್ಯಾಂಕ್ ಬಡ್ಡಿದರಕ್ಕಿಂತ ಹೆಚ್ಚಿನ ಲಾಭ ಸಿಗುತ್ತದೆ ಎಂಬ ನಂಬಿಕೆಯಲ್ಲಿ ತಮ್ಮ ದುಡಿದ ಹಣವನ್ನು ಇಂತಹ ಯೋಜನೆಗಳಿಗೆ ನೀಡುತ್ತಿರುವುದು ಕಂಡುಬರುತ್ತಿದೆ. ಕೆಲವರು ಸಾಲ ಮಾಡಿ, ಕೆಲವರು ನಿವೃತ್ತಿ ಹಣ ಹೂಡಿಕೆ ಮಾಡಿ, ಇನ್ನೂ ಕೆಲವರು ಕುಟುಂಬದ ಭವಿಷ್ಯಕ್ಕಾಗಿ ಉಳಿಸಿಕೊಂಡಿದ್ದ ಹಣವನ್ನು ಈ ರೀತಿಯ ಸ್ಕೀಂಗಳಲ್ಲಿ ಹಾಕುತ್ತಿರುವುದಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಆದರೆ ಇಂತಹ ಹೂಡಿಕೆ ಯೋಜನೆಗಳು ಸಂಪೂರ್ಣ ಕಾನೂನುಬದ್ಧವಾಗಿವೆಯೇ? ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆದಿವೆಯೇ? ಠೇವಣಿದಾರರ ಹಣಕ್ಕೆ ಯಾವ ಭದ್ರತೆ ಇದೆ? ಜನರ ಹಣ ವಾಪಸ್ ಸಿಗುವ ಖಾತರಿ ಏನು? ಎಂಬ ಪ್ರಶ್ನೆಗಳು ಈಗ ಹೆಚ್ಚು ಕೇಳಿಬರುತ್ತಿವೆ.
ಹಣ ಹೂಡಿಕೆ ಮಾಡುವ ಮೊದಲು ಸಂಸ್ಥೆಯ ಕಾನೂನುಬದ್ಧ ದಾಖಲೆಗಳು, ನೋಂದಣಿ, ಪರವಾನಗಿ ಹಾಗೂ ಹಣಕಾಸು ಮಾನ್ಯತೆಗಳ ಬಗ್ಗೆ ಪರಿಶೀಲನೆ ಮಾಡುವುದು ಅತ್ಯಗತ್ಯವಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. “ಅತಿಯಾದ ಲಾಭ”ದ ಭರವಸೆ ನೀಡುವ ಯಾವುದೇ ಯೋಜನೆ ಬಗ್ಗೆ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ.
ಮಂಗಳೂರಲ್ಲಿ ಲಕ್ಕಿ ಸ್ಕೀಮ್ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ: ಮಂಗಳೂರು, ಉಳ್ಳಾಲ, ಕೋಣಾಜೆ, ಕಣ್ಣೂರು, ಬಿ.ಸಿ. ರೋಡು, ಪುತ್ತೂರು ಹಾಗೂ ಬೆಳ್ತಂಗಡಿ ಭಾಗಗಳಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ಈ ಸ್ಕೀಮ್ಗಳು ಆರಂಭಗೊಂಡಿದ್ದವು. ತುಳು ಚಿತ್ರರಂಗದ ಕೆಲ ಸೆಲೆಬ್ರಿಟಿಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಚಾರ ನಡೆಸಿ ಸಾವಿರಾರು ಸದಸ್ಯರನ್ನು ಸೆಳೆಯಲಾಗಿತ್ತು. ಪ್ರತಿ ತಿಂಗಳು 1,000 ಕಂತಿನಂತೆ 12 ತಿಂಗಳು ಹಣ ಪಾವತಿಸುವ ಯೋಜನೆ ರೂಪಿಸಲಾಗಿತ್ತು. ಸಂಗ್ರಹವಾದ ಮೊತ್ತದಿಂದ ಫ್ಲ್ಯಾಟ್, ಕಾರು, ಬೈಕ್, ಚಿನ್ನ, ನಗದು ಸೇರಿದಂತೆ 50 ಲಕ್ಷಕ್ಕೂ ಅಧಿಕ ಮೌಲ್ಯದ ಬಹುಮಾನ ನೀಡುವುದಾಗಿ ಭರವಸೆ ನೀಡಲಾಗಿತ್ತು. ಯೋಜನೆಯ ಅವಧಿ ಪೂರ್ಣಗೊಂಡ ಬಳಿಕ ಸದಸ್ಯರಿಗೆ ಮೂಲಧನದೊಂದಿಗೆ ಒಂದು ಅಥವಾ ಎರಡು ಸಾವಿರ ಸೇರಿಸಿ ನೀಡುವುದಾಗಿ ಅಥವಾ ಸಮಾನ ಮೌಲ್ಯದ ಚಿನ್ನ ಹಿಂತಿರುಗಿಸುವುದಾಗಿ ಹೇಳಲಾಗಿತ್ತು.
ಕೆಲವು ಸ್ಕೀಮ್ಗಳ ಅವಧಿ ಮುಗಿದು ತಿಂಗಳು 4-5 ಕಳೆದಿದ್ದು, ಇನ್ನೂ ಹಣ ವಾಪಸ್ ನೀಡಿಲ್ಲ. ಇದರಿಂದ ಸ್ಕೀಮ್ ಸದಸ್ಯರು ಕಚೇರಿಗೆ, ಸ್ಕೀಮ್ ಮುಖ್ಯಸ್ಥರ ಮನೆಗೆ ಅಲೆದಾಟ ಮಾಡುತ್ತಿರುವುದಲ್ಲದೆ, ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ. ಆದರೆ ಸ್ಕೀಮ್ ಮುಖ್ಯಸ್ಥರು ನಮ್ಮ ಬ್ಯಾಂಕ್ ಖಾತೆ ಫ್ರೀಜ್ (ತಡೆ) ಮಾಡಲಾಗಿದೆ. ಇದರಿಂದ ಬ್ಯಾಂಕ್ನಿಂದ ಹಣ ತೆಗೆಯಲು ಆಗುತ್ತಿಲ್ಲ ಎಂದು ಸಬೂಬು ಹೇಳಲಾಗುತ್ತಿದೆ. ಆದರೆ ಮಾಹಿತಿ ಪ್ರಕಾರ ಬ್ಯಾಂಕ್ ಖಾತೆಯಲ್ಲೂ ಹೇಳಿಕೊಳ್ಳುವಂತಹ ಹಣವಿಲ್ಲ ಎಂದು ತಿಳಿದು ಬಂದಿದೆ.
ಗ್ರಾಹಕರಿಂದ ಕೋಟ್ಯಂತರ ರೂ. ವಂಚನೆ ಮಾಡಿದ ಆರೋಪದಲ್ಲಿ ಅಹಮದ್ ಖುರೇಶಿ, ನಝೀರ್ ಅಲಿಯಾಸ್ ನಾಸಿರ್, ಮುಹಮ್ಮದ್ ಅಶ್ರಫ್ ಹಾಗೂ ಮುಹಮ್ಮದ್ ಹನೀಫ್ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ನ್ಯೂಶೈನ್ ಎಂಟರ್ಪ್ರೈಸಸ್ ಹಾಗೂ ವಫಾ ಎಂಟರ್ಪ್ರೈಸಸ್ ಹೆಸರಿನಲ್ಲಿ ಕಾರ್ಯನಿರ್ವಹಿಸಿದ್ದ ಈ ಸಂಸ್ಥೆಗಳು ಸುಮಾರು 15 ಕೋಟಿ ರೂ.ಗೂ ಅಧಿಕ ವಂಚನೆ ನಡೆಸಿದ್ದವು ಎಂಬ ಆರೋಪ ಇದೆ.
“ನಗರದಲ್ಲಿ ವ್ಯವಹರಿಸುತ್ತಿರುವ ಲಕ್ಕಿ ಸ್ಕೀಮ್ ಬಗ್ಗೆ ಈ ತನಕ ಯಾರೂ ದೂರು ನೀಡಿಲ್ಲ. ಸ್ಕೀಮ್ನಲ್ಲಿ ಸಂಗ್ರಹವಾದ ಮೊತ್ತದ ಬಗ್ಗೆ ನಿಖರ ಮಾಹಿತಿಯಿಲ್ಲ. ಆದರೂ ನಾವು ಮಾಧ್ಯಮಗಳಲ್ಲಿ ಬಂದ ವರದಿ ಆಧಾರದಲ್ಲಿ ನಮ್ಮ ಕೆಲಸ ನಾವು ಮಾಡಿದ್ದೇವೆ. ಲಕ್ಕಿ ಸ್ಕೀಮ್ ನ ಮಾಲೀಕ ಮತ್ತು ಆತನ ಗೆಳೆಯನಿಂದ 5ಕೋಟಿ ರೂ. ಮೌಲ್ಯದ ಶ್ಯೂರಿಟಿ ಪಡೆದುಕೊಳ್ಳಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಅವರ ಭೂಮಿ ಮತ್ತು ಬಂಟ್ವಾಳ ತಾಲೂಕಿನಲ್ಲಿರುವ ಭೂಮಿಯನ್ನು ಈ ಶ್ಯೂರಿಟಿಗೆ ಪಡೆದುಕೊಳ್ಳಲಾಗಿದೆ. ಒಂದು ವೇಳೆ ಅಧಿಕೃತವಾಗಿ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು.”
-ಸುಧೀರ್ ಕುಮಾರ್ ರೆಡ್ಡಿ, ಪೊಲೀಸ್ ಕಮಿಷನರ್, ಮಂಗಳೂರು.
Discover more from Coastal Times Kannada
Subscribe to get the latest posts sent to your email.







Discussion about this post