ಮಂಗಳೂರು: ಧರ್ಮಸ್ಥಳದ ನೆರಿಯದಿಂದ ವಿವಾಹಿತ ಮಹಿಳೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆಗಸ್ಟ್ 26 ರಂದು ವಿವಾಹಿತ ಮಹಿಳೆ ರಾಜಿ ರಾಘವನ್ ಎಂಬವರು ತನ್ನ 10 ವರ್ಷದ ಮಗ ಹಾಗೂ 11 ವರ್ಷದ ಮಗಳನ್ನು ಬಿಟ್ಟು ರಾತ್ರೋ ರಾತ್ರಿ ನಾಪತ್ತೆಯಾಗಿದ್ದಾಳೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ತನ್ನ ಪತ್ನಿಗೆ ಉಗ್ರ ಸಂಘಟನೆಯೊಂದಿಗೆ ನಂಟಿದೆ . ಹಾಗೂ ಲಕ್ಷದ್ವೀಪದ ಮಹಮ್ಮದ್ ಇಸಾಕ್ ಎಂಬವನೊಂದಿಗೆ ಆಕೆಗೆ ಸಂಪರ್ಕವಿದೆ ಎಂದು ಆಕೆಯ ಪತಿ ದ.ಕ.ಜಿಲ್ಲಾ ಎಸ್ಪಿಗೆ ದೂರು ನೀಡುವ ಮೂಲಕ ಮಹತ್ವದ ತಿರುವು ಪಡೆದಿದೆ . ರಾಜಿ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನಿವಾಸಿ ಚಿದಾನಂದ ಕೆ.ಆರ್ ದೂರು ನೀಡಿದವರು
ರಾಜಿ ರಾಘವನ್ ಕಳೆದ 11 ವರ್ಷಗಳಿಂದ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಜುಲೈ 11ರಂದು ಆಕೆ ಊರಿಗೆ ಬಂದಿದ್ದರು. ಆಗಸ್ಟ್ 26 ರಂದು ಮಗಳ ಜೊತೆ ರಾತ್ರಿ ಮಲಗಿದ್ದ ಆಕೆ ನಸುಕಿನ ವೇಳೆ ನಾಪತ್ತೆಯಾಗಿದ್ದಳು. ಈ ವೇಳೆ ಆಕೆ ಮನೆಯಲ್ಲಿದ್ದ 95 ಸಾವಿರ ರೂ., ಆಧಾರ್ ಕಾರ್ಡ್, ರೇಷನ್ ಕಾರ್ಡ್, ಎರಡು ಚಿನ್ನದ ಬಳೆ ತೆಗೆದುಕೊಂಡು ಹೋಗಿದ್ದಾಳೆ ಈ ಬಗ್ಗೆ ನಾವು ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಿದ್ದೆವು ಎಂದು ಚಿದಾನಂದ ಮಾದ್ಯಮಗಳಿಗೆ ತಿಳಿಸಿದ್ದಾರೆ
ಪತಿ ಚಿದಾನಂದ ಕೆ.ಆರ್
ಆ ಬಳಿಕ ಪೊಲೀಸರು ‘ ರಾಜಿ ಮಂಗಳೂರಿನ ವೇದಂ ಆಸ್ಪತ್ರೆಯಲ್ಲಿ ದಾಖಲಾಗಿದ್ದು, 10 ದಿನಗಳ ಚಿಕಿತ್ಸೆ ನಡೆಯುತ್ತಿದೆ. ಅಷ್ಟರವರೆಗೆ ಕಾಯಿರಿ’ ಎಂದು ಹೇಳಿದ್ದಾರೆ. ಆದರೆ ನಾಪತ್ತೆಯಾದ ಬಳಿಕ ಇಲ್ಲಿಯವರೆಗೆ ಆಕೆ ನಮ್ಮನ್ನು ಸಂಪರ್ಕಿಸಿಲ್ಲ. ಆದರೆ ಇದರ ಮಧ್ಯೆ ಲಕ್ಷದ್ವೀಪದಿಂದ ಇಸಾಕ್ ಗೆ ಕರೆ ಮಾಡಿ, ‘ನೀನು ನಿನ್ನ ಮಗಳು ಹಾಗೂ ಹೆಂಡತಿಯನ್ನು ನಮ್ಮೊಂದಿಗೆ ಕಳುಹಿಸಿಕೊಡಬೇಕು. ಇಲ್ಲದಿದ್ದಲ್ಲಿ ನಾವು ಬಂದು ಕರೆದೊಯ್ಯುತ್ತೇವೆ. ನಿನಗೆ ಎಷ್ಟು ದುಡ್ಡು ಬೇಕು ಕೇರಳಕ್ಕೆ ಬಾ ಕೊಡುತ್ತೇವೆ. ನೀವು ಇಬ್ಬರನ್ನೂ ದುಬೈಗೆ ಕಳುಹಿಸಿಕೊಡಬೇಕೆಂದು’ ಆತ ಒತ್ತಡ ಹಾಕುತ್ತಿದ್ದಾನೆ ಎಂದು ಆರೋಪಿಸಿರುವ ಚಿದಾನಂದರವರು ನನಗೆ ಕೇರಳದಿಂದ ಪತ್ನಿ ಮಗಳಿಬ್ಬರನ್ನು ಕಳುಹಿಸಿ ಕೊಡಬೇಕೆಂದು ಕರೆಯ ಮೇಲೆ ಕರೆ ಬರುತ್ತಿದೆ ಎಂದು ದೂರಿದ್ದಾರೆ.
ಮಗಳಿಗೆ ಎರಡು ವರ್ಷವಿರುವಾಗ ಆಕೆ ದುಬೈಗೆ ಕೆಲಸಕ್ಕೆಂದು ಹೋಗಿದ್ದು ಅಲ್ಲಿಂದ ಇಲ್ಲಿಯವರೆಗೆ ಸುಮಾರು 11 ವರ್ಷಗಳಿಂದ ಮಗಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ವರ್ಷಕ್ಕೊಂದು ಸಲ ಬಂದು 15 ದಿನಗಳ ಕಾಲ ಇದ್ದು ಹೋಗುತ್ತಾಳೆ. ದುಬೈಯಲ್ಲಿ ಬಿ.ಆರ್.ಶೆಟ್ಟಿಯವರ ಸಂಸ್ಥೆಯಲ್ಲಿ ದುಡಿಯುತ್ತಿದ್ದೇನೆ ಎಂದು ಹೇಳುತ್ತಾಳೆ.ಆದರೆ ದುಬೈನಲ್ಲಿರುವ ಪಾಕಿಸ್ತಾನದ ಶಾಲೆಯೊಂದರ ಆಯಾ ಆಗಿ ದುಡಿಯುತ್ತಿದ್ದಾಳೆ.
ಈಗ ಆಕೆ ಮಗಳನ್ನು ಇಲ್ಲಿಂದ ವಿದೇಶಕ್ಕೆ ಕರೆದೊಯ್ಯಬೇಕು ಎಂದು ಹಠ ಹಿಡಿದು ಕುಳಿತಿದ್ದಾಳೆ. ಆದರೆ ಅಲ್ಲಿ ಕರಕೊಂಡು ಹೋಗಿ ಯಾವುದಾದರೂ ಸಂಘಟನೆಗೆ ಸೇರಿಸುತ್ತಾರೋ ಎಂಬ ಭಯ ನಮ್ಮನ್ನು ಕಾಡುತ್ತಿದೆ .ಅಲ್ಲದೇ ಅವಳು ಇಲ್ಲಿ ಇದ್ದಾಗ ಹಲವು ಸಲ ತಮ್ಮದೊಂದು ಸಂಘಟನೆಯಿದೆ ಎಂದು ಹೇಳುತಿದ್ದಳು. ಅದಕ್ಕೆ ಸೇರಿಸಬೇಕೆಂದು ಒತ್ತಾಯಿಸುತ್ತಿದ್ದಾಳೆ. ಕಳುಹಿಸದಿದ್ದಲ್ಲಿ ಸಂಘಟನೆಯ ಮೂಲಕ ಶಿಕ್ಷೆ ಕೊಡಿಸುತ್ತೇನೆ ಎನ್ನುತ್ತಿದ್ದಾಳೆ ಎಂದು ಆರೋಪಿಸಿರುವ ರಾಜಿ ಪತಿ ಇದಕ್ಕೆ ಆಕೆಯ ಅಕ್ಕನ ಕುಮ್ಮಕ್ಕಿದೆ ಎಂದು ಆರೋಪಿಸಿದ್ದಾರೆ.
ಹಿಂದೂ ಪದ್ದತಿಯಂತೆ ಇರಲಿಲ್ಲ ಕಳೆದ ಜುಲೈ 11ರಂದು ಊರಿಗೆ ಬಂದಿದ್ದ ಮಹಿಳೆ, 14 ದಿನ ಕ್ವಾರಂಟೈನ್ ಇದ್ದಳು. ಮಗಳನ್ನು ದುಬೈಗೆ ಕರೆದೊಯ್ಯುತ್ತೇನೆ ಎಂದಿದ್ದಕ್ಕೆ ಮನೆಯವರೆಲ್ಲ ಸೇರಿ ವಿರೋಧ ಮಾಡಿದ್ದಾರೆ.ಆಬಳಿಕ ಮನೆಯಲ್ಲೇ ಇದ್ದರೂ ಆಕೆ, ಮನೆಯ ಸದಸ್ಯರ ಜೊತೆ ಬೆರೆಯುತ್ತಿರಲಿಲ್ಲ. ಹಿಂದು ಸಂಪ್ರದಾಯದಂತೆ ನಡೆದುಕೊಳ್ಳುತ್ತಿರಲಿಲ್ಲ. ಹಣೆಗೆ ತಿಲಕ ಇಡುತ್ತಿರಲಿಲ್ಲ. ಕೈಗೆ ಬಳೆ ಹಾಕುತ್ತಿರಲಿಲ್ಲ. ಪ್ರತ್ಯೇಕವಾಗಿ ಇರುತ್ತಿದ್ದಳು. ದೇವರ ಪೂಜೆಗೆ ಬರುತ್ತಿರಲಿಲ್ಲ. ರಾತ್ರಿ ತಡವಾಗಿ ಸ್ನಾನಕ್ಕೆ ಹೋಗುತ್ತಿದ್ದಳು ಎಂದು ಪತಿ ತಿಳಿಸಿದ್ದಾರೆ.
ಹೀಗಾಗಿ ಸಂಶಯಗೊಂಡ ಆಕೆಯ ಪತಿ ಆಕೆಯನ್ನು ಪ್ರಶ್ನೆ ಮಾಡಿದ್ದು ಈ ಸಂದರ್ಭ ರಾಜಿ , ನನ್ನ ಜೊತೆ ದೊಡ್ಡ ಸಂಘಟನೆಯವರಿದ್ದಾರೆ. ನನ್ನ ಬಗ್ಗೆ ಹಗುರವಾಗಿ ತಿಳಿದುಕೊಳ್ಳಬೇಡಿ ಎಂದು ಬೆದರಿಕೆ ಒಡ್ಡಿರುವುದಾಗಿ ತಿಳಿಸಿದ್ದಾರೆ.
ಇದೀಗ ರಾಜಿಯ ಪತಿಯೂ ಅಕೆಗೆ ಉಗ್ರ ಸಂಘಟನೆ ಸಂಪರ್ಕವಿದೆ ಎಂದು ಮಾಡಿದ ಆರೋಪ ಈ ನಾಪತ್ತೆ ಪ್ರಕರಣದ ಗಂಭೀರತೆಯನ್ನು ಹೆಚ್ಚು ಮಾಡಿದೆ . ಈ ಹಿಂದೆ ಪೊಲೀಸರು ತಿಳಿಸಿದಂತೆ ಆಕೆ ಮಂಗಳೂರಿನಲ್ಲಿಯೇ ಇದ್ದಾಳೆಯೇ ? ಅಥಾವ ನಿಜಕ್ಕೂ ಉಗ್ರ ಸಂಘಟನೆ ಜತೆ ಸಂಪರ್ಕ ಇದೆಯೇ ಅಥಾವ ಮಗಳ ವಿಚಾರವಾಗಿ ಉಂಟಾದ ಭಿನ್ನಾಭಿಪ್ರಾಯ ಇಷ್ಟೆಲ್ಲಾ ಗೊಂದಲಗಳಿಗೆ ಕಾರಣವಾಗಿದೆಯೇ ಎನ್ನುವ ವಿಚಾರ ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಬೇಕಿದೆ.