ಕೊಲ್ಲಂ, ಸ. 02 : ಮೀನುಗಾರಿಕಾ ದೋಣಿ ಮುಳುಗಿ ನಾಲ್ವರು ಮೀನುಗಾರರು ಮೃತಪಟ್ಟು, ದೋಣಿಯಲ್ಲಿದ್ದ ಇತರ 12 ಜನರನ್ನು ರಕ್ಷಿಸಿದ ಘಟನೆ ಕೊಲ್ಲಂ ಕರಾವಳಿಯ ಅಝಿಕಲ್ ಬಳಿ ನಡೆದಿದೆ.
ಮೃತಪಟ್ಟವರನ್ನು ಕಾಯಂಕುಳಂ ನಿವಾಸಿಗಳಾದ ಸುದೇವನ್(51), ಸುನಿಲ್ ದತ್ (24), ಓಚಿರಾ ನಿವಾಸಿಗಳಾದ ಶ್ರೀಕುಮಾರ್ (45) ಮತ್ತು ನೆಡಿಯತ್ನ ತಂಕಪ್ಪನ್ (60) ಎಂದು ಗುರುತಿಸಲಾಗಿದೆ.
ಮೀನುಗಾರಿಕೆಗಾಗಿ ಇಂದು ಬೆಳ್ಳಗ್ಗೆ ಅಲಪುಳಾದ ವಲಿಯಾ ಅಝಿಕಲ್ ಕರಾವಳಿಯಿಂದ ಹೊರಟ ‘ಓಮಕರಂ’ ಎಂಬ ಹೆಸರಿನ ದೋಣಿಯಲ್ಲಿ 16 ಮೀನುಗಾರರಿದ್ದು, ಅಝಿಕಲ್ ಬಂದರಿನಿಂದ ಐದು ನಾಟಿಕಲ್ ಮೈಲಿ ದೂರದಲ್ಲಿ ಈ ಘಟನೆ ನಡೆದಿದೆ.
ಇನ್ನು ಮೀನುಗಾರರು ಮೀನುಗಾರಿಕೆ ಮುಗಿಸಿ ವಾಪಸ್ ಬರುತ್ತಿದ್ದಾಗ ದೋಣಿ ಅಪಘಾತಕ್ಕೀಡಾಗಿದ್ದು, ಬಲವಾದ ಗಾಳಿಯಿಂದಾಗಿ ದೋಣಿ ಮಗುಚಿದೆ ಎನ್ನಲಾಗಿದೆ. ರಕ್ಷಿಸಿದ 12 ಮೀನುಗಾರರನ್ನು ಚಿಕಿತ್ಸೆಗಾಗಿ ಕಾಯಂಕುಳಂ, ಓಚಿರಾ ಮತ್ತು ಕರುಣಗಪ್ಪಲ್ಲಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.
Discussion about this post