ಆಂಧ್ರಪ್ರದೇಶ : ವಿಶೇಷಚೇತನ ಸಿಂಪಿಗ (ಟೇಲರ್) ರೊಬ್ಬರ ಪುತ್ರ ರೂ.1.06 ಕೋಟಿ ಸಂಬಳದ AI ಉದ್ಯೋಗ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಕೋತಪಲ್ಲಿ ತಾಲೂಕಿನ ಕುತ್ತುಕುಡಿಮಿಲ್ಲಿ ಮೂಲದ ಮಾಲ್ತಿ ಅಖಿಲೇಶ್ ಕೋಟಿ ರೂಪಾಯಿ ಸಂಬಳದ ಉದ್ಯೋಗ ಗಿಟ್ಟಿಸಿಕೊಂಡಿರುವ ಯುವ ಇಂಜಿನಿಯರ್.
ಮೇ ತಿಂಗಳಲ್ಲಿ ಸುರಂಪಲೆಮ್ನ ಆದಿತ್ಯ ವಿಶ್ವವಿದ್ಯಾಲಯದಲ್ಲಿ ನಡೆದ ಕ್ಯಾಂಪಸ್ ಪ್ಲೇಸ್ಮೆಂಟ್ಗಳಲ್ಲಿ AI ಎಂಜಿನಿಯರ್ ಆಗಿ ಅಖಿಲೇಶ್ ಉದ್ಯೋಗ ಪಡೆದಿದ್ದಾರೆ. ಕೆನಡಾ ಕಂಪನಿಯಾದ ಫ್ಯಾಬ್ರಾಂಟಿಕ್ AI ಜೂನ್ 20 ರಂದು ಯುವಕನಿಗೆ ರೂ.1.06 ಕೋಟಿ ವಾರ್ಷಿಕ ಪ್ಯಾಕೇಜ್ನ ಆಫರ್ ಲೆಟರ್ ಕಳುಹಿಸಿದೆ. ಅಖಿಲೇಶ್ ಈಗಾಗಲೇ ಮನೆಯಿಂದಲೇ ಕೆಲಸ ಆರಂಭಿಸಿದ್ದು, ಮೊದಲು ಮೂರರಿಂದ ಆರು ತಿಂಗಳವರೆಗೆ ರೂ.30,000 ಸ್ಟೈಫಂಡ್ ಸಿಗಲಿದೆ. ಬಳಿಕ ಪೂರ್ಣ ಪ್ಯಾಕೇಜ್ ಪಡೆಯಲಿದ್ದಾರೆ.
ಟೈಲರಿಂಗ್ ವೃತ್ತಿಯಲ್ಲೇ ಮಕ್ಕಳ ಭವಿಷ್ಯ ಕಟ್ಟಿದ ಪೋಷಕರು: ಕಾಕಿನಾಡ ಜಿಲ್ಲೆಯ ಕುತುಕುಡುಮಿಲ್ಲಿ ಎಂಬ ಸಣ್ಣ ಗ್ರಾಮದ ಗಂಗಾಧರ ರಾವ್ ಮತ್ತು ಮಾಲತಿ ದಂಪತಿ ಅತ್ಯಂತ ಸರಳ ಜೀವನ ನಡೆಸುತ್ತಿದ್ದರು. ಕಿವುಡ ಮತ್ತು ಮೂಕರಾಗಿರುವ ಗಂಗಾಧರ ರಾವ್ ಟೈಲರಿಂಗ್ ವೃತ್ತಿಯ ಮೂಲಕ ಕುಟುಂಬವನ್ನು ಪೋಷಿಸುತ್ತಿದ್ದರು. ಅವರ ಪತ್ನಿ ಮಾಲತಿ ಕೂಡ ಬಟ್ಟೆಗಳಿಗೆ ಕರಕುಶಲ ಕೆಲಸ ಮಾಡಿ ಕುಟುಂಬದ ಆದಾಯಕ್ಕೆ ಕೈಜೋಡಿಸುತ್ತಿದ್ದರು. ಆರ್ಥಿಕ ಸವಾಲುಗಳ ನಡುವೆಯೂ ತಮ್ಮ ಇಬ್ಬರು ಮಕ್ಕಳ ಶಿಕ್ಷಣಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡ ಈ ದಂಪತಿಯ ಪರಿಶ್ರಮಕ್ಕೆ ಇಂದು ಅದ್ಭುತ ಪ್ರತಿಫಲ ದೊರೆತಿದೆ.
ಇದಕ್ಕೂ ಮೊದಲು ಅಖಿಲೇಶ್ ಎರಡ್ಮೂರು ಸಂದರ್ಶನಗಳಿಗೆ ಹಾಜರಾಗಿದ್ದರು. ಆದರೆ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಆದರೂ ಛಲ ಬಿಡದೆ ಸಿದ್ಧತೆ ನಡೆಸಿದ್ದರು. ಮೇ ತಿಂಗಳಲ್ಲಿ ನಡೆದ ಸಂದರ್ಶನದಲ್ಲಿ ಭಾಗವಹಿಸಿದ 243 ಅಭ್ಯರ್ಥಿಗಳಲ್ಲಿ, ಅಖಿಲೇಶ್ ಮತ್ತು ಇನ್ನೊಬ್ಬ ಯುವಕ ಯಶಸ್ವಿಯಾಗಿದ್ದಾರೆ. ಕೋಟಿ ರೂಪಾಯಿ ಸಂಬಳದ ಈ ಪ್ರತಿಷ್ಠಿತ ಉದ್ಯೋಗವನ್ನು ಪಡೆದ ಅಖಿಲೇಶ್ ಸಾಧನೆಯಿಂದ ಪೋಷಕರ ಆನಂದಕ್ಕೆ ಪಾರವೇ ಇಲ್ಲ. ನುರಿತ AI ಎಂಜಿನಿಯರ್ ಆಗಿ ಬೆಳೆಯುವುದು ಮತ್ತು AI ತಜ್ಞ ಆಗುವುದು ನನ್ನ ಮಹತ್ವಾಕಾಂಕ್ಷೆಯಾಗಿದೆ ಎಂದು ಯುವ ಎಂಜಿನಿಯರ್ ಅಖಿಲೇಶ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post