ದಾವಣಗೆರೆ: ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡಿತ್ತು. ಅವರು ಸ್ವಯಂ ಆಗಿ ಬೊಮ್ಮಾಯಿ ಅವರಿಗೆ ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಮುಂದೆ ಬಿಜೆಪಿ ಪೂರ್ಣ ಬಹುಮತ ಪಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.
₹ 3 ಕೋಟಿ ವೆಚ್ಚದ ಗಾಂಧಿಭವನ, ₹ 15 ಕೋಟಿ ವೆಚ್ಚದ ಪೊಲೀಸ್ ಪಬ್ಲಿಕ್ ವಸತಿ ಶಾಲೆ, ₹ 15 ಕೋಟಿ ವೆಚ್ಚದ ಪೊಲೀಸ್ ಕ್ವಾರ್ಟರ್ಸ್ಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಿ, ಜಿಎಂಐಟಿ ಕೇಂದ್ರ ಗ್ರಂಥಾಲಯಕ್ಕೆ ಚಾಲನೆ ನೀಡಿ ಅವರು ಗುರುವಾರ ಜಿಎಂಐಟಿ ಆವರಣದಲ್ಲಿ ಮಾತನಾಡಿದರು.
ವಿಶ್ವವನ್ನೇ ಕಾಡಿದ ಕೊರೊನಾವನ್ನು ನಿಯಂತ್ರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಯಶಸ್ವಿಯಾಗಿ ನಿರ್ವಹಿಸಿದೆ. ಬಡವರು, ಅಲೆಮಾರಿಗಳು, ದಲಿತರು, ಆದಿವಾಸಿಗಳ ಸಹಿತ ಸಂಕಷ್ಟಕ್ಕೆ ಸಿಲುಕಿದ್ದ ಎಲ್ಲರ ನೆರವಿಗೆ ಸರ್ಕಾರ ಬಂದಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಗೃಹಸಚಿವ ಆರಗ ಜ್ಞಾನೇಂದ್ರ, ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ, ಕೃಷಿ ಸಚಿವ ಬಿ.ಸಿ. ಪಾಟೀಲ, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ, ಮಾಡಾಳ್ ವಿರೂಪಾಕ್ಷಪ್ಪ, ಎಂ.ಪಿ ರೇಣುಕಾಚಾರ್ಯ, ಎಸ್.ವಿ, ರಾಮಚಂದ್ರಪ್ಪ, ಪ್ರೊ. ಎನ್. ಲಿಂಗಣ್ಣ, ಕೊಂಡಜ್ಜಿ ಮೋಹನ್, ಕರುಣಾಕರ ರೆಡ್ಡಿ ಅವರೂ ಇದ್ದರು.
Discussion about this post