ಮಂಗಳೂರು: ‘ಅಹಿಂಸಾ ಮಾರ್ಗ, ಜಾತ್ಯತೀತ ಸಿದ್ಧಾಂತದಡಿಯಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿ ನಮಗೆ ಆದರ್ಶ’ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಸಾಮಾಜಿಕ ನ್ಯಾಯ ವಂಚಿತ, ತುಳಿತಕ್ಕೊಳಗಾದ ಜನರ ಬಗ್ಗೆ ಗಾಂಧೀಜಿಗೆ ನೋವಿತ್ತು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ವೇಷ ಭೂಷಣ ಹೇಗಿತ್ತು, ಈಗಿನ ಪ್ರಧಾನಿ ಅವರ ವೇಷ ಭೂಷಣ ಹೇಗಿದೆ ಎಂಬ ತುಲನೆ ಮಾಡಬೇಕಿದೆ. ದೇಶದ ಪರಿಕಲ್ಪನೆ ಇಲ್ಲದ ನರೇಂದ್ರ ಮೋದಿ ಮಾರ್ಕೆಟಿಂಗ್ ಪ್ರಧಾನಿ’ ಎಂದು ಟೀಕಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮಾತನಾಡಿ, ‘ಮಹಾತ್ಮ ಗಾಂಧಿ ಹಾಕಿಕೊಟ್ಟ ಆದರ್ಶದ ಮಾರ್ಗದಲ್ಲಿ ಮುನ್ನಡೆಯುವ ಸಂಕಲ್ಪ ಮಾಡೋಣ’ ಎಂದರು. ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್. ಲೋಬೊ, ಪ್ರಮುಖರಾದ ಶಶಿಧರ್ ಹೆಗ್ಡೆ, ಸದಾಶಿವ್ ಉಳ್ಳಾಲ್, ಪ್ರಕಾಶ್ ಸಾಲ್ಯಾನ್, ಮಮತಾ ಗಟ್ಟಿ, ವಿಶ್ವಾಸ್ ಕುಮಾರ್ ದಾಸ್, ಸವಾದ್ ಸುಳ್ಯ, ಮೋಹನ್ ಗೌಡ ಇದ್ದರು.
Discussion about this post