ಬೆಂಗಳೂರು: ಭಾರತೀಯ ಚಿತ್ರರಂಗವನ್ನು ದಶಕಗಳ ಕಾಲ ಆಳಿದ ಖ್ಯಾತ ನಟಿ ಶ್ರೀದೇವಿ ಸಾವಿನ ಬಗೆಗೆ ಇನ್ನೂ ಅನೇಕ ಪ್ರಶ್ನೆಗಳು ಉಳಿದುಕೊಂಡಿವೆ. 2018 ಫೆಬ್ರುವರಿ 24 ರಂದು ದುಬೈನ ಐಷಾರಾಮಿ ಹೋಟೆಲ್ ಒಂದರ ಸ್ನಾನಗೃಹದ ಬಾತ್ಟಬ್ನ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು ಎಂದು ತಿಳಿದು ಬಂದಿತ್ತು. ಈ ಬಗ್ಗೆ ಅವರ ಪತಿ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರನ್ನು ದುಬೈ ಪೊಲೀಸರು ತೀವ್ರ ವಿಚಾರಣೆ ನಡೆಸಿ ಶ್ರೀದೇವಿ ಸಾವು ಕೊಲೆಯಲ್ಲ ಎಂದು ಹೇಳಿತ್ತು.
2018 ಫೆಬ್ರವರಿಯಲ್ಲಿ ಶ್ರೀದೇವಿ ಮದುವೆಯಲ್ಲಿ ಭಾಗಿ ಆಗಲು ದುಬೈಗೆ ಹೋಗಿದ್ದರು. ಪತ್ನಿ ಶ್ರೀದೇವಿಗೆ ಸರ್ಪ್ರೈಸ್ ನೀಡಲು ಬಳಿಕ ಬೋನಿ ಕಪೂರ್ ಭಾರತದಿಂದ ದುಬೈಗೆ ತೆರಳಿದ್ದರು. ಇಬ್ಬರು ಹೊರಗೆ ಊಟಕ್ಕೆ ಹೋಗಲು ತಯಾರಾಗುತ್ತಿದ್ದರು. ಸ್ಥಳೀಯ ಕಾಲಮಾನ ಸಂಜೆ 5.30ರ ಸುಮಾರಿಗೆ, ತಯಾರಾಗಿ ಬರುತ್ತೇನೆಂದು ಶ್ರೀದೇವಿ ಬಾತ್ ರೂಮಿಗೆ ತೆರಳಿದ್ದಾರೆ. ಎಷ್ಟೆ ಹೊತ್ತು ಆದರೂ ಆಕೆ ಹೊರಗೆ ಬರದಿದ್ದಾಗ ಅನುಮಾನಗೊಂಡ ಬೋನಿ, ಬಲವಂತವಾಗಿ ಬಾಗಿಲು ತೆರೆದಾಗ ನಿಶ್ಚಲರಾಗಿ ನೀರು ತುಂಬಿದ್ದ ಬಾತ್ ಟಬ್ನಲ್ಲಿ ಬಿದ್ದಿದ್ದರು. ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಆಕೆಯದ್ದು ಸಹಜ ಸಾವಲ್ಲ, ಅನುಮಾನಾಸ್ಪದವಾಗಿ ನಿಧನರಾಗಿದ್ದಾರೆ ಎಂದು ಕೆಲವರು ಪತಿ ಬೋನಿ ಕಪೂರ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲಿನ ಪೊಲೀಸರು ಕೂಡ ಬೋನಿ ಕಪೂರ್ ಮೇಲೆ ಅನುಮಾನಗೊಂಡು ಭಾರೀ ವಿಚಾರಣೆ ನಡೆಸಿದ್ದರು. ಇದೀಗ 5 ವರ್ಷಗಳ ಬಳಿಕ ಸಂದರ್ಶನವೊಂದರಲ್ಲಿ ಬೋನಿ ಕಪೂರ್ ಪತ್ನಿ ಶ್ರೀದೇವಿ ಸಾವಿನ ಬಗ್ಗೆ ಮಾತನಾಡಿದ್ದಾರೆ.
ಸುಮಾರು 24 ಅಥವಾ 48 ಗಂಟೆಗಳ ಕಾಲ ನನ್ನನ್ನು ತನಿಖೆ ಮತ್ತು ವಿಚಾರಣೆಗೆ ಒಳಪಡಿಸಿದಾಗ ಅದರ ಬಗ್ಗೆ ಮಾತನಾಡಿದ್ದೇನೆ. ಭಾರತೀಯ ಮಾಧ್ಯಮಗಳಿಂದ ಹೆಚ್ಚಿನ ಒತ್ತಡವಿರುವುದರಿಂದ ನಾವು ನಾವು ವಿಚಾರಣೆ ನಡೆಸಬೇಕಾಯಿತು ಎಂದು ಅಲ್ಲಿನ ಅಧಿಕಾರಿಗಳು ಹೇಳಿದರು. ಇಲ್ಲಿ ಯಾವುದೇ ಮೋಸದಾಟ ಇರಲಿಲ್ಲ. ನಾನು ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ಎಲ್ಲಾ ತರಹದ ವಿಚಾರಣೆ ಎದುರಿಸಿದೆ. ಕೊನೆಗೆ ಬಂದ ವರದಿಯಲ್ಲಿ ಶ್ರೀದೇವಿ ಸಾವು ಆಕಸ್ಮಿಕ ಎಂದು ಸ್ಪಷ್ಟವಾಯಿತು.
ತೆರೆಮೇಲೆ ಅಂದವಾಗಿ ಕಾಣಿಸಬೇಕು ಎಂದು ಶ್ರೀದೇವಿ ಸ್ಟ್ರಿಕ್ಟ್ ಡಯೆಟ್ ಅನುಸರಿಸುತ್ತಿದ್ದಳು. ನಮ್ಮ ಮದುವೆ ಬಳಿಕ ನನಗೆ ಈ ವಿಷಯ ತಿಳಿಯಿತು. ಉಪ್ಪು ಇಲ್ಲದೇ ಸಪ್ಪೆ ಊಟ ಮಾಡುತ್ತಿದ್ದಳು. ಇದರಿಂದ ಸಾಕಷ್ಟು ಬಾರಿ ನಿತ್ರಾಣಗೊಂಡು ಬೀಳುತ್ತಿದ್ದಳು. ಲೋ ಬಿಪಿ ಸಮಸ್ಯೆ ಇದೆ ಎಂದು ವೈದ್ಯರು ಜಾಗ್ರತೆಯಿಂದ ಇರಲು ಸಾಕಷ್ಟು ಬಾರಿ ಸೂಚಿಸಿದ್ದರು. ಆದರೆ ಆಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಅದರಲ್ಲೂ ಇಂಗ್ಲಿಷ್–ವಿಂಗ್ಲಿಷ್ ಸಿನಿಮಾ ಸಂದರ್ಭದಲ್ಲಿ 45 ಕೆ.ಜಿಗೆ ತೂಕ ಇಳಿಸಿಕೊಂಡಿದ್ದಳು. ಕಡೆಗೆ ಆಹಾರದಲ್ಲಿ ಉಪ್ಪು ಬಳಸುವುದನ್ನೂ ನಿಲ್ಲಿಸಿದ್ದಳು. ಇದರಿಂದ ಅವಳ ಬಿಪಿ ತುಂಬಾ ಕಡಿಮೆ ಆಗಿತ್ತು‘ ಎಂದು ಹೇಳಿದ್ದಾರೆ. ಶ್ರೀದೇವಿಯದ್ದು ಸಹಜ ಸಾವಲ್ಲ. ಆಕಸ್ಮಿಕ ಸಾವು ಎಂದಿದ್ದಾರೆ.
Discussion about this post