ಮಂಗಳೂರು, ಜುಲೈ 22: ಮಂಗಳೂರು ನಗರದ ಮೇರಿಹಿಲ್ ಬಾಂದೋಟ್ಟು (ಕೊಪ್ಪಳಕಾಡು) ವ್ಯಾಪ್ತಿಯ ಮನೆಯೊಂದರಲ್ಲಿ ನಡೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣವನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಅತ್ಯಂತ ಕ್ಷಿಪ್ರವಾಗಿ ಹಾಗೂ ಕೂಲಂಕಷವಾಗಿ ತನಿಖೆ ನಡೆಸಿ, ದೂರು ದಾಖಲಾದ ಕೇವಲ 24 ಗಂಟೆಗಳ ಒಳಗಾಗಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶದ ಬಲರಾಮ್ಪುರ ಜಿಲ್ಲೆಯ ಜಹೀರುದ್ದೀನ್ (24) ಬಂಧಿತ ವ್ಯಕ್ತಿ. ಮನೆ ಕೆಲಸಕ್ಕೆ ಬಂದಿದ್ದ ಉತ್ತರ ಪ್ರದೇಶ ಮೂಲದ ಮೇಸ್ತ್ರಿಯೊಬ್ಬನೇ ಕೃತ್ಯ ಎಸಗಿರುವುದು ಸಾಬೀತಾಗಿದ್ದು, ಆತನನ್ನು ಬಂಧಿಸಿ ಕಳ್ಳತನವಾಗಿದ್ದ ಸಂಪೂರ್ಣ ಚಿನ್ನಾಭರಣ ಹಾಗೂ ವಾಚನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪದವು ಗ್ರಾಮದ ಕೊಪ್ಪಳಕಾಡುವಿನಲ್ಲಿರುವ ‘ಶ್ರೀದೇವಿ ನಿವಾಸ’ದ ಹಿಂಭಾಗದ ಕೊಠಡಿಯ ಛಾವಣಿ ಬದಲಾವಣೆ ಹಾಗೂ ಹಾಲ್ನಲ್ಲಿ ಫಾಲ್ಸ್ ಸೀಲಿಂಗ್ ಕಾಮಗಾರಿಯನ್ನು ಮೇಸ್ತ್ರಿಗಳು ಮತ್ತು ಕೆಲಸಗಾರರು ಜುಲೈ 6 ರಿಂದ ನಡೆಸುತ್ತಿದ್ದರು. ಈ ಅವಧಿಯಲ್ಲಿ ಮನೆಯ ಕೋಣೆಯೊಂದರಲ್ಲಿದ್ದ ಟೇಬಲ್ ಡ್ರಾವರ್ನಲ್ಲಿ ಪರ್ಸ್ನಲ್ಲಿ ಇರಿಸಲಾಗಿದ್ದ 20 ಗ್ರಾಂ ಚಿನ್ನದ ಕಡಗ, 17 ಗ್ರಾಂ ಚಿನ್ನದ ಚೈನ್, 8 ಗ್ರಾಂ ನವಗ್ರಹ ಉಂಗುರ, 4 ಗ್ರಾಂ ಸಾದಾ ಉಂಗುರ ಹಾಗೂ ಸೋನಾಟಾ ಕಂಪನಿಯ ವಾಚ್ ಸೇರಿ ಒಟ್ಟು 6,37,000 ರೂಪಾಯಿ ಮೌಲ್ಯದ ಸೊತ್ತುಗಳು ಕಳ್ಳತನವಾಗಿದ್ದವು. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 68/2026, ಕಲಂ 305 BNS ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಮನೆ ಕಾಮಗಾರಿಗೆ ಬಂದಿದ್ದ ಎಲ್ಲಾ ಕೆಲಸಗಾರರನ್ನು ಸತತ ಹಾಗೂ ಕೂಲಂಕಷ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಅನುಮಾನಾಸ್ಪದವಾಗಿ ನಡೆದುಕೊಂಡ ಮೇಸ್ತ್ರಿ ಜಹೀರುದ್ದೀನ್ (24) ಎಂಬಾತನನ್ನು ತೀವ್ರ ತನಿಖೆಗೆ ಒಳಪಡಿಸಿದಾಗ, ತಾನೇ ಆಭರಣಗಳನ್ನು ಕದ್ದು ಬಚ್ಚಿಟ್ಟಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿ ಜಹೀರುದ್ದೀನ್ ನೀಡಿದ ಮಾಹಿತಿಯ ಮೇರೆಗೆ ಕಳವಾಗಿದ್ದ ಒಟ್ಟು 49 ಗ್ರಾಂ ತೂಕದ ಎಲ್ಲಾ ಚಿನ್ನದ ಆಭರಣಗಳನ್ನು ಹಾಗೂ ಸೋನಾಟಾ ವಾಚ್ ಅನ್ನು ಪೊಲೀಸರು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ದೂರು ಬಂದ ತಕ್ಷಣ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ, ಕೇವಲ 24 ಗಂಟೆಯೊಳಗೆ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಡಿ.ಆರ್. ಮಂಜಪ್ಪ, ಸಬ್ಇನ್ಸ್ಪೆಕ್ಟರ್ ಅರುಣ್ ಕುಮಾರ್ ಡಿ. ಹಾಗೂ ಠಾಣೆಯ ಸಿಬ್ಬಂದಿ ತಂಡದ ಸಂಪೂರ್ಣ ಸೊತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Discover more from Coastal Times Kannada
Subscribe to get the latest posts sent to your email.







Discussion about this post