ಮಂಗಳೂರು, 05: ಪೊಲೀಸ್ ಅಂದಾಗ ಭಯ ಪಡುವ ದೃಷ್ಟಿಕೋನ ಮಕ್ಕಳಲ್ಲಿ ದೂರ ಅಗಬೇಕಿದೆ. ಈ ಕಲ್ಪನೆಯನ್ನು ದೂರ ಮಾಡಬೇಕಾದರೆ ಪೊಲೀಸ್ ಠಾಣೆಯಲ್ಲಿ ಕೆಲಕಾಲ ಮಕ್ಕಳಿಗೆ ಕಳೆಯುವ, ಲವಲವಿಕೆಯ ವಾತಾವರಣವನ್ನು ಕಲ್ಪಿಸಬೇಕಿದೆ. ಅದನ್ನು ಮನಗಂಡ ನಗರದ ‘ಯುರೋಕಿಡ್ಸ್ ಪ್ರಿ-ಸ್ಕೂಲ್’ನವರು ಮಕ್ಕಳನ್ನು ಗುರುವಾರ ನಗರದ ಪೊಲೀಸ್ ಆಯುಕ್ತಾಲಯದ ಕಚೇರಿಗೆ ಕರೆದೊಯ್ದು ಆಯುಕ್ತರ ಜೊತೆ ಮುಕ್ತವಾಗಿ ಬೆರೆಯುವ ಅವಕಾಶ ಕಲ್ಪಿಸಿದರು.
ಪೊಲೀಸ್ ಠಾಣೆಯಲ್ಲಿ ಕೆಲವು ಗಂಟೆಗಳ ಕಾಲ ಕಳೆದ ಮಕ್ಕಳು ಲವಲವಿಕೆಯಿಂದ ಕೂಡಿದ ವಾತಾವರಣವನ್ನು ಕಲ್ಪಿಸುವಲ್ಲಿ ನಿರತರಾದರು. ಸಾಮಾನ್ಯವಾಗಿ ಪೊಲೀಸರು ಅಂದರೆ ಹೆಚ್ಚಿನವರಿಗೆ ಭಯ. ಅದರಲ್ಲೂ ಎಳೆಯ ಮಕ್ಕಳಿಗಂತೂ ಭಯ ತುಸು ಹೆಚ್ಚು ಎನ್ನಬಹುದು. ಹೊಡೆಯುತ್ತಾರೆ, ಬಡಿಯುತ್ತಾರೆ ಎಂಬ ಕಲ್ಪನೆಯೂ ಮಕ್ಕಳಲ್ಲಿರುತ್ತದೆ. ಹೀಗಾಗಿ ಮಕ್ಕಳಲ್ಲಿ ಪೊಲೀಸ್ ಅಂದಾಗ ಭಯ ಪಡುವ ದೃಷ್ಟಿಕೋನ ದೂರ ಅಗಬೇಕಿದೆ. ಈ ನಿಟ್ಟಿನಲ್ಲಿ ಮಕ್ಕಳ ಜತೆ ಒಂದಷ್ಟು ಹೊತ್ತು ಪೊಲೀಸ್ ಅಯುಕ್ತರಾದ ಅನುಪಮ್ ಅಗರ್ವಾಲ್ ಕಾಲ ಕಳೆದರು.
ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಕೂಡ ಪುಟ್ಟ ಮಕ್ಕಳ ಜತೆಗೂಡಿ ಒಂದು ಕ್ಷಣ ಪುಟಾಣಿಗಳಾದರು. ಮಕ್ಕಳ ಜೊತೆ ಮಾತನಾಡುತ್ತಾ, ಸಣ್ಣಪುಟ್ಟ ಪ್ರಶ್ನೆ ಕೇಳುತ್ತಾ ಮಕ್ಕಳ ಮೇಸ್ಟ್ರು ಆಗಿ ಬಿಟ್ಟರು. ನನಗೆ ಟೀಚರ್ ಆಗಬೆಕು, ನನಗೆ ಪೊಲೀಸ್ ಆಫೀಸರ್ ಆಗಬೇಕು ಎಂದೂ ಕೆಲವು ಮಕ್ಕಳು ಹೇಳಿಕೊಂಡರು. ನಂತರ ಮಕ್ಕಳಿಗೆ ಚಾಕಲೇಟ್, ಜ್ಯೂಸ್, ಪೆನ್ಸಿಲ್ ನೀಡಿ ಮಕ್ಕಳನ್ನು ಖುಷಿಪಡಿಸಿದರು.
Discussion about this post