ಮಂಗಳೂರು, ಜ.9: ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್ ರೌಡಿಶೀಟರ್ ಕಾಲಿಗೆ ಸಿಸಿಬಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಜೆಪ್ಪು ಕುಡ್ಪಾಡಿ ಬಳಿ ನಡೆದಿದೆ. ಬಂಧಿಸಲು ಮುಂದಾದಾಗ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದಾಗ ಹಿನ್ನೆಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಸುಳ್ಯ ಕೆ.ವಿ.ಜಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಯಾಗಿದ್ದಂತಹ ರಾಮಕೃಷ್ಣ ಎಂಬವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಮಾನ್ಯ 5ನೇ ಹೆಚ್ಚುವರಿ ಸೇಶನ್ಸ್ ಕೋರ್ಟ್ ಪುತ್ತೂರು ಇದರ ಎಸ್.ಸಿ ನಂಬರ್: 152/2011ಕ್ಕೆ ಸಂಬಂಧಪಟ್ಟಂತೆ ಮಾನ್ಯ ಹೈಕೋರ್ಟ್ ಕರ್ನಾಟಕ ಬೆಂಗಳೂರು ಇದರ ಕ್ರಿಮಿನಲ್ ಅಪೀಲ್ ನಂಬರ್: 870/2017 ನೇದರಲ್ಲಿ ಶಿಕ್ಷೆಗೊಳಗಾಗಿ ತಲೆಮರೆಸಿಕೊಂಡಿದ್ದು ಮತ್ತು ಮಂಗಳೂರು ನಗರದಲ್ಲಿ ಕೊಲೆ, ಕೊಲೆಯತ್ನ, ದರೋಢೆ, ಅತ್ಯಾಚಾರ ಹಫ್ತಾ ವಸೂಲಿ ಹಾಗೂ ಫೋಕ್ಸೋ ಸೇರಿದಂತೆ ಸುಮಾರು 25 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಹಲವು ಪ್ರಕರಣಗಳಲ್ಲಿ ದಸ್ತಗಿರಿ ವಾರಂಟ್ ಇರುವ ಆರೋಪಿತನಾದ ರೋಹಿದಾಸ್ ಕೆ @ಶರಣ್ @ ಶರಣ್ ಪೂಜಾರಿ @ ಶರಣ್ ಆಕಾಶಭವನ ಎಂಬಾತನ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸುವ ಬಗ್ಗೆ ಮಾನ್ಯ ಪೊಲೀಸ್ ಆಯುಕ್ತರು ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ರವರ ನೇತೃತ್ವದಲ್ಲಿ ಸಿಸಿಬಿ ಘಟಕದ ತಂಡ ರಚಿಸಿರುತ್ತಾರೆ.
ಅದರಂತೆ ಆರೋಪಿ ಪತ್ತೆ ಬಗ್ಗೆ ಕಾರ್ಯಾಚರಣೆಗಿಳಿದ ಸಿಸಿಬಿ ಘಟಕದ ಪಿಎಸ್ಐ ಸುದೀಪ್ ಮತ್ತು ಪಿಎಸ್ಐ ಶರಣಪ್ಪ ಹಾಗೂ ಸಿಬ್ಬಂದಿಗಳ ತಂಡ ಸುಮಾರು 20 ದಿನಗಳಿಂದ ಸಿಸಿಬಿ ತಂಡ ಕಾರ್ಯಾಚರಣೆ ನಡೆಸಿರುತ್ತದೆ. ಆರೋಪಿಗೆ ಆಶ್ರಯ ನೀಡಿದ ಹಾಗೂ ಆತನಿಗೆ ತಪ್ಪಿಸಿಕೊಳ್ಳಲು ಸಹಕರಿಸಿದ ಆರೋಪದ ಮೇಲೆ ಕೋಡಿಕಲ್ ನ ಶೀಲಾ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಆಶ್ರಯ ನೀಡಿರುವ ಬಗ್ಗೆ ಕಾವೂರು ಪೊಲೀಸ್ ಠಾಣಾ ಮೊ. ನಂ.147/2023 ಕಲಂ:216 ಐಪಿಸಿ ಯಂತೆ ಹಾಗೂ ಉಡುಪಿಯ ಸಂತೆಕಟ್ಟೆಯ ಶರತ್ ಭಂಡಾರಿ ಹಾಗೂ ಆತನ ಪತ್ನಿ ಮಯೂರಿ ಭಂಡಾರಿ ಎಂಬವರ ವಿರುದ್ಧ ಕಾವೂರು ಪೊಲೀಸ್ ಠಾಣಾ ಮೊ. ನಂ.148/2023 ಕಲಂ:216 ಐಪಿಸಿ ಯಂತೆ ಮತ್ತು ಧನಂಜಯ @ ಧನು ಹಾಗೂ ಚೇತನ್ @ ಬುಳ್ಳ ಎಂಬವರ ವಿರುದ್ಧ ಕಾವೂರು ಪೊಲೀಸ್ ಠಾಣಾ ಮೊ. ನಂ.149/2023 ಕಲಂ:216 ಐಪಿಸಿ ಯಂತೆ ಹಾಗೂ ಇನ್ನೋರ್ವ ಆಶ್ರಯ ನೀಡಿದ ಆರೋಪಿ ಶಿವ ಕರ್ಬಿಸ್ಥಾನ ಎಂಬಾತನ ಮೇಲೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಮೊ.ನಂ- 141/2023 ಕಲಂ:216 ಐಪಿಸಿ ಯಂತೆ ಮತ್ತು ಶಾನು ಶೆಟ್ಟಿ ಎಂಬಾತನ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಮೊ.ನಂ.108/2023 ಕಲಂ:216 ಐಪಿಸಿಯಂತೆ ಪ್ರಕರಣಗಳು ದಾಖಲಾಗಿರುತ್ತವೆ.
ಆರೋಪಿಗೆ ಆಶ್ರಯ ನೀಡಿದ ಬಗ್ಗೆ ಮಂಗಳೂರಿನ ಬೇರೆ ಬೇರೆ ಠಾಣೆಗಳಲ್ಲಿ 7 ಜನರ ಮೇಲೆ ಒಟ್ಟು-05 ಪ್ರಕರಣಗಳು ದಾಖಲಾಗಿ ತನಿಖೆಯಲ್ಲಿರುತ್ತವೆ. ಹಾಗೂ ದಿನಾಂಕ:02-01-2024 ರಂದು ಆರೋಪಿಯು ಮಂಗಳೂರಿನಲ್ಲಿ ಬಿಳಿ ಬಣ್ಣದ ಸ್ವಿಪ್ಟ್ ಕಾರಿನಲ್ಲಿ ತಿರುಗಾಡುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ಆರೋಪಿಯ ಪತ್ತೆಯ ಬಗ್ಗೆ ತೆರಳಿದ್ದ ಪಿಎಸ್ಐ ಸುದೀಪ್ ಹಾಗೂ ತಂಡದವರ ಮೇಲೆ ಮೇರಿಹಿಲ್ ಬಳಿ ಕಾರನ್ನು ಹಾಯಿಸಿ ಕೊಲೆ ಮಾಡಲು ಪ್ರಯತ್ನ ಪಟ್ಟಿರುತ್ತಾನೆ ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಮೊ. ನಂ.01/2024 ಕಲಂ:353,307 ಐಪಿಸಿ ಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಈ ದಿನ ದಿನಾಂಕ:09-01-2024 ರಂದು ಆರೋಪಿ ರೋಹಿದಾಸ್ ಕೆ @ ಶರಣ್ @ ಶರಣ್ ಪೂಜಾರಿ @ ಶರಣ್ ಆಕಾಶಭವನ ಎಂಬಾತನು ಉಡುಪಿಯಲ್ಲಿದ್ದಾನೆಂದು ದೊರೆತ ಖಚಿತ ಮಾಹಿತಿ ಮೇರೆಗೆ ಆತನ ಪತ್ತೆಯ ಬಗ್ಗೆ ಸಿಸಿಬಿ ಘಟಕದ ತಂಡ ಉಡುಪಿಯಲ್ಲಿ ಬೀಡು ಬಿಟ್ಟಿದ್ದು ಅಲ್ಲಿ ಆತನ ಪತ್ತೆಯ ಬಗ್ಗೆ ಪ್ರಯತ್ನದಲ್ಲಿರುವಾಗ ಆತನು ಬಿಳಿ ಬಣ್ಣದ ಐ20 ಕಾರಿನಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದಾನೆಂದು ಮಾಹಿತಿ ತಿಳಿದು ಸಿಸಿಬಿ ಘಟಕದ ವಿಶೇಷ ತಂಡದವರು ಆರೋಪಿಯನ್ನು ಹಿಂಬಾಲಿಸುತ್ತಾ ಮಂಗಳೂರು ಕಡೆಗೆ ಬಂದಿದ್ದು, ಮಂಗಳೂರು ಕಡೆಗೆ ಬಂದು ತನ್ನ ಕಾರಿನಲ್ಲಿ ಜಪ್ಪಿನಮೊಗರು ಕುಡುಪ್ಪಾಡಿ ಎಂಬಲ್ಲಿ ಇದ್ದಾನೆಂದು ಮಾಹಿತಿ ಬಂದಿದ್ದು ಅಲ್ಲಿಗೆ ಸಿಸಿಬಿ ತಂಡ ಹೋಗಿ ನೋಡಿದಾಗ ಆತನು ಐ 20 ಕಾರಿನಲ್ಲಿ ಇದ್ದವನು ಸಿಸಿಬಿ ತಂಡವನ್ನು ನೋಡಿದ ಕೂಡಲೇ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಲು ಪ್ರಯತ್ನ ನಡೆಸಿದ ಸಮಯ ಕಾರನ್ನು ಅಡ್ಡಹಾಕಿ ಆತನನ್ನು ಸುತ್ತುವರೆದಾಗ ತನ್ನಲ್ಲಿದ್ದ ಚೂರಿಯಿಂದ ಹಲ್ಲೆ ಮಾಡಿ, ಕೊಲೆ ಮಾಡಲು ಪ್ರಯತ್ನಿಸಿದಾಗ ಆತನನ್ನು ಹಿಡಿಯಲು ಹೋದ ಸಿಬ್ಬಂದಿ ಪ್ರಕಾಶ್ ರವರಿಗೆ ಆತನಲ್ಲಿದ್ದ ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದು, ಆ ಸಂದರ್ಭ ಪಿಎಸ್ಐ ಸುದೀಪ್ ರವರು ಆರೋಪಿಗೆ ಶರಣಾಗುವಂತೆ ಸೂಚಿಸಿದ್ದರೂ ಹಲ್ಲೆಗೆ ಮುಂದಾದಾಗ ತನ್ನ ಹಾಗೂ ತನ್ನ ಸಿಬ್ಬಂದಿಯವರ ಆತ್ಮ ರಕ್ಷಣೆಗಾಗಿ ಆತನ ಕಾಲಿಗೆ ಫೈರಿಂಗ್ ಮಾಡಿರುತ್ತಾರೆ. ನಂತರ ಆತನನ್ನು ಚಿಕಿತ್ಸೆಗಾಗಿ ಸ್ಥಳೀಯ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳದಲ್ಲಿ ಫಾರೆನ್ಸಿಕ್ ತಜ್ಞರಿಂದ ಪರಿಶೀಲನೆ ನಡೆಸಲಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸಿಸಿಬಿ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಶರಣ್ ವಿರುದ್ಧ ಕೊಲೆ, ಕೊಲೆ ಯತ್ನ, ಪೋಕ್ಸೋ ಸೇರಿದಂತೆ 21ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
Discover more from Coastal Times Kannada
Subscribe to get the latest posts sent to your email.
Discussion about this post