ಪುಂಜಾಲಕಟ್ಟೆ: ಸರಕಾರಿ ಬಸ್ ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರೆ ವಿದ್ಯಾರ್ಥಿನಿಯೋರ್ವಳು ಗಂಭೀರವಾಗಿ ಗಾಯಗೊಂಡ ಘಟನೆ ಜ. 10ರ ಬುಧವಾರ ಬೆಳಿಗ್ಗೆ ವಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಅಲ್ಲಿಪಾದೆ ಪೆರಿಯಾರ್ ದೋಟ ನಿವಾಸಿ ಗೋಪಾಲ ಸಫಲ್ಯ ಅವರ ಪುತ್ರಿ, ವಾಮದಪದವು ಕಾಲೇಜು ವಿದ್ಯಾರ್ಥಿನಿ ಪಲ್ಲವಿ ಗಾಯಗೊಂಡಿದ್ದು, ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಳಗಿನ ವಗ್ಗ ತಿರುವಿನಲ್ಲಿ ಧರ್ಮಸ್ಥಳ ಕಡೆಯಿಂದ ಮಂಗಳೂರು ಕಡೆಗೆ ತೆರಳುವ ಎರಡು ಬಸ್ ಗಳು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓವರ್ ಟೇಕ್ ಮಾಡಿದೆ. ಈ ಸಂದರ್ಭದಲ್ಲಿ ಬಂಟ್ವಾಳ ಕಡೆಯಿಂದ ವಾಮದಪದವು ಕಾಲೇಜಿಗೆ ದ್ವಿಚಕ್ರದಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಸ್ ಗಳೆರಡರ ಅಜಾಗರೂಕತೆಯಿಂದ ಸಂಚಾರಕ್ಕೆ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ವಿದ್ಯಾರ್ಥಿನಿ ತಂದೆ ಗೋಪಾಲ ಸಪಲ್ಯ ಅವರು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೋಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
Discussion about this post