ಕಾಸರಗೋಡು, ಜ.9 : ಸಾವಿನ ದವಡೆಗೆ ಸಿಲುಕಿದರೂ ನಿರಂತರ 30 ಗಂಟೆ ಈಜಿ ಮೀನುಗಾರನೊಬ್ಬ ಸಾವನ್ನು ಗೆದ್ದಿದ್ದಾನೆ. ಮೀನುಗಾರಿಕೆ ನಡೆಸುತ್ತಿದ್ದಾಗ ಸಮುದ್ರಕ್ಕೆ ಬಿದ್ದ ತಮಿಳುನಾಡು ಮೂಲದ ಮೀನುಗಾರ ಜೋಸೆಫ್ (58) 30 ಗಂಟೆ ಈಜಿ ದಡ ಸೇರಿ ಅಚ್ಚರಿ ಮೂಡಿಸಿದ್ದಾರೆ
ಡಿ. 31ರಂದು ಮಂಗಳೂರಿನಿಂದ ಹೊರಟ ಮೀನುಗಾರಿಕೆ ದೋಣಿಯಲ್ಲಿದ್ದ 8 ಮಂದಿಯಲ್ಲಿ ಜೋಸೆಫ್ ಕೂಡ ಒಬ್ಬರು. ಜ. 6ರಂದು ಮುಂಜಾನೆ 2 ಗಂಟೆಗೆ ದೋಣಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಜೋಸೆಫ್ ನಾಪತ್ತೆಯಾಗಿದ್ದರು. ಆಗ ದೋಣಿ ಸಮುದ್ರ ದಡದಿಂದ ಸುಮಾರು 36 ನಾಟಿಕಲ್ ಮೈಲ್ ದೂರದಲ್ಲಿತ್ತು. ಬೆಳಗ್ಗೆ 11 ಗಂಟೆಯ ವರೆಗೆ ಹುಡುಕಾಡಿದರೂ ಅವರ ಪತ್ತೆಯಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ದೋಣಿಯ ಮಾಲಕರಿಗೆ ಮಾಹಿತಿ ನೀಡಲಾಗಿತ್ತು. ಕರಾವಳಿ ಕಾವಲು ಪೊಲೀಸರಿಗೆ ಮತ್ತು ಪಾಂಡೇಶ್ವರ ಠಾಣೆಗೆ ಮಾಹಿತಿ ನೀಡಿದ್ದು ಹುಡುಕಾಟಕ್ಕೆ ಸಹಾಯ ಯಾಚಿಸಿದ್ದರು. ಆದರೆ ಕೇಸು ದಾಖಲಿಸಿರಲಿಲ್ಲ.
ಈ ಮಧ್ಯೆ ಜ.7ರಂದು ಮೀನುಗಾರಿಕೆಗೆ ತೆರಳಿದ್ದ ಕಾಸರಗೋಡು ಕೀಯೂರು ಕಡಪ್ಪುರದ ದಿನೇಶ್, ಸುರೇಶ್, ಸೈನನ್ ಅವರು ತಮ್ಮ ದೋಣಿಯಲ್ಲಿ ಸಾಗುತ್ತಿದ್ದಾಗ, ಸಮುದ್ರದಲ್ಲಿ ವ್ಯಕ್ತಿಯೊಬ್ಬರನ್ನು ಕಂಡಿದ್ದಾರೆ. ಕೂಡಲೇ ಅವರನ್ನು ದೋಣಿಯಲ್ಲಿ ದಡಕ್ಕೆ ಕರೆ ತಂದಿದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಗಳೂರಿನ ದೋಣಿಯಿಂದ ನಾಪತ್ತೆಯಾಗಿದ್ದ ಜೋಸೆಫ್ ಅವರೇ ಎಂಬುದು ಈಗ ತಿಳಿದುಬಂದಿದೆ.
ಅವರು ಪತ್ತೆಯಾದ ಬಗ್ಗೆ ಮಂಗಳೂರಿನ ಪಾಂಡೇಶ್ವರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಘಟನೆ ಬಗ್ಗೆ ಕಾಸರಗೋಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Discussion about this post