ಉಪ್ಪಿನಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆ ಹಾಗೂ ಬೆಥನಿ ವಿದ್ಯಾಸಂಸ್ಥೆಗಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯು-ಟರ್ನ್ ಕಲ್ಪಿಸುವಂತೆ ಆಗ್ರಹಿಸಿ ಸೆ. 9ರಂದು ಬೆಳಗ್ಗೆ ನೆಲ್ಯಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಮುಖ್ಯವಾಗಿ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಪರಿಗಣಿಸಿ , ಕಿ.ಮೀ. ಗಟ್ಟಲೆ ಸುತ್ತಾಟವನ್ನು ತಡೆಗಟ್ಟುವ ಸಲುವಾಗಿ ಆಪೇಕ್ಷಿತ ಸ್ಥಳದಲ್ಲಿ ಸುರಕ್ಷತಾ ನೆಲೆಗಟ್ಟಿನಲ್ಲಿ ಯು ಟರ್ನ್ ಸೌಲಭ್ಯವನ್ನು ಒದಗಿಸಲೇಬೇಕು ಎಂದು ಅಗ್ರಹಿಸಿದ ಪ್ರತಿಭಟನಾ ಕಾರರರು ಜಿಲ್ಲಾಧಿಕಾರಿ ಮತ್ತು ಹೆದ್ದಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿ ದರು. ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅವರು, ಸೇಫ್ಟಿ ಎಂಜಿನಿಯರ್ ತಂಡದಿಂದ ಪರಿಶೀಲಿಸಿ ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಸ್ಥಗಿತಗೊಳಿಸಿದರು.

ಪ್ರತಿಭಟನೆಯು ನೆಲ್ಯಾಡಿಯ ಗಾಂಧೀ ಮೈದಾನದಲ್ಲಿ ನಡೆಸಲು ಪೊಲೀಸ್ ಇಲಾಖಾನುಮತಿ ಪಡೆಯಲಾಗಿತ್ತಾ ದರೂ, ಪ್ರತಿಭಟನಾಕಾರರು ಹೆದ್ದಾರಿ ಬದಿಯಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗುತ್ತಿದ್ದರು. ಘೋಷಣೆಗಳ ಕಾವು ಹೆಚ್ಚಾಗುತ್ತಿದ್ದಂತೆಯೇ ಪ್ರತಿಭಟನೆಯಲ್ಲಿ ಇದ್ದ ಕೆಲವರು ಅಧಿಕಾರಿಗಳ ಆಗಮನದ ವರೆಗೆ ಹೆದ್ದಾರಿ ತಡೆ ಚಳುವಳಿ ನಡೆಸಲು ಸಂಕಲ್ಪಿಸಿ ಪ್ರತಿಭಟನಾ ಸಮೂಹವನ್ನು ಹೆದ್ದಾರಿಯತ್ತ ನುಗ್ಗಿಸಲು ಯತ್ನಿಸಿದರು. ಇದರ ಸುಳಿವು ಪಡೆದುಕೊಂಡ ಪೆÇಲೀಸರು ಸಂಘಟಕರಿಗೆ ಕಾನೂನು ಉಲ್ಲಂಘನೆಯ ಕೃತ್ಯಕ್ಕೆ ಭಾರೀ ಬೆಲೆ ತೆರಬೇಕಾದೀತೆಂದು ಎಚ್ಚರಿಕೆ ನೀಡಿದರಲ್ಲದೆ, ಪ್ರತಿಭಟಕಾರರು ಹೆದ್ದಾರಿಯನ್ನು ಪ್ರವೇಶಿಸದಂತೆ ತಡೆಯಾಗಿ ನಿಂತರು. ಈ ಮಧ್ಯೆ ಸಂಘಟಕರು ಧ್ವನಿವರ್ಧಕದಲ್ಲಿ ಸತತ ಮನವಿ ಮಾಡಿ ಪ್ರತಿಭಟನಾಕಾರರನ್ನು ಮೈದಾನದತ್ತ ಹೋಗಲು ವಿನಂತಿಸಿದರು. ಈ ಮೂಲಕ ಹೆದ್ದಾರಿ ತಡೆ ಭೀತಿ ನಿವಾರಣೆಯಾಯಿತು.
ಪ್ರತಿಭಟನೆಯಲ್ಲಿ ಧರ್ಮಗುರು ವರ್ಗೀಸ್ ಕೈಪನಡ್ಕ, ಸಾಜಿ ಮ್ಯಾಥ್ಯೂ , ಪಿ.ಪಿ. ವರ್ಗೀಸ್, ರವಿಚಂದ್ರ ಹೊಸವಕ್ಲು, ಇಸ್ಮಾಯೀಲ್ ನೆಲ್ಯಾಡಿ, ಸರ್ವೋತ್ತಮ ಗೌಡ, ರವಿ ಪ್ರಸಾದ್ ಗುರ್ಜಿ ಮನೆ , ಸತೀಶ್ ಕೆ.ಎಸ್., ಅಬ್ರಹಾಂ ವರ್ಗೀಸ್, ಮಹಮ್ಮದ್ ಇಕ್ಬಾಲ್, ಬಾಲಕೃಷ್ಣ ಬಾಣಜಾಲು, ಸಾಜಿ ವಿ. ಮೊದಲಾದವರು ಭಾಗವಹಿಸಿದ್ದರು. ಪ್ರತಿಭಟನೆಗೆ ನೆಲ್ಯಾಡಿ ವ್ಯಾಪ್ತಿಯ 51ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿ ಭಾಗವಹಿಸಿದ್ದವು.
Discover more from Coastal Times Kannada
Subscribe to get the latest posts sent to your email.







Discussion about this post