ಮಂಗಳೂರು: ಪಣಂಬೂರು ಬೀಚ್ ಬಳಿ ಸೋಮವಾರ ದಾಳಿ ನಡೆಸಿ ಅಂಬರ್ ಗ್ರೀಸ್ (ತಿಮಿಂಗಿಲ ವಾಂತಿ) ಹೊಂದಿದ್ದ ಮೂವರನ್ನು ಮಂಗಳೂರು ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉಡುಪಿ ಜಿಲ್ಲೆ ಸಾಲಿಗ್ರಾಮ ಗ್ರಾಮದ ಜಯಕರ (39), ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆದಿತ್ಯ (25), ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಲೋಹಿತ್ ಕುಮಾರ್ ಗುರಪ್ಪನವರ್ (39) ಎಂದು ತಿಳಿದು ಬಂದಿದೆ. ಬಂಧಿತರಿಂದ 90 ಲಕ್ಷ ರೂ. ಮೌಲ್ಯದ 900ಗ್ರಾಂ ಅಂಬರ್ ಗ್ರೀಸ್ ( ತಿಮಿಂಗಿಲ ವಾಂತಿ) ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಣಂಬೂರು ಬೀಚ್ ಬಳಿ ಮೂವರು ಅಂಬರ್ ಗ್ರೀಸ್ ( ತಿಮಿಂಗಿಲ ವಾಂತಿ) ಹೊಂದಿರುವ ಕುರಿತು ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಮಂಗಳೂರು ಸಿಸಿಬಿ ಪೊಲೀಸರು ಮೂವರು ಆರೋಪಿಗಳ ಸಹಿತ ಅಂಬರ್ ಗ್ರೀಸ್ ( ತಿಮಿಂಗಿಲ ವಾಂತಿ) ನ್ನು ವಶಕ್ಕೆ ಪಡೆದಿದ್ದಾರೆ. ಅಂಬರ್ ಗ್ರೀಸ್ ಅಪರೂಪದ ವನ್ಯಜೀವಿ ಉತ್ಪನ್ನವಾಗಿದ್ದು ಅದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಮೌಲ್ಯ ಹೊಂದಿದೆ.
ಆರೋಪಿಗಳ ಬಂಧನ ಕಾರ್ಯಾಚರಣೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ನಗರ ಅಪರಾಧ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
Discussion about this post