ಉಳ್ಳಾಲ, ಡಿ.13: ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಹರೇಕಳದ ನೇತ್ರಾವತಿ ನದಿಯಲ್ಲಿ ಅಕ್ರಮವಾಗಿ ಸಮೀಪದ ಮನೆಗಳಿಗೆ ಮರಳು ಪೂರೈಸುತ್ತಿದ್ದ ಎರಡು ನಾಡ ದೋಣಿಗಳನ್ನ ಕೊಣಾಜೆ ಠಾಣೆಗೆ ಪ್ರಭಾರಿಯಾಗಿರುವ ಉಳ್ಳಾಲ ಇನ್ಸ್ ಪೆಕ್ಟರ್ ಹೆಚ್.ಎನ್ ಬಾಲಕೃಷ್ಣ ನೇತೃತ್ವದ ಪೊಲೀಸರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಇಂದು ಬೆಳಗ್ಗೆ ದಾಳಿ ನಡೆಸಿ ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.
ಸಮೀಪದ ಮನೆಗಳಿಗೆ ನೇತ್ರಾವತಿ ನದಿಯಿಂದ ದೋಣಿಗಳ ಮೂಲಕ ಮರಳು ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಉಳ್ಳಾಲ ಠಾಣಾ ಪಿಐ ಬಾಲಕೃಷ್ಣ ನೇತೃತ್ವದ ತಂಡವು ದಾಳಿ ನಡೆಸಿ ಮರಳು ಮತ್ತು ದೋಣಿಗಳನ್ನು ವಶಕ್ಕೆ ಪಡೆದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದೆ. ಹರೇಕಳ, ಪಾವೂರಿನಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಿರಂತರವಾಗಿ ನಡೆಯುತ್ತಲೇ ಇದೆ.
ಕೊಣಾಜೆ ಠಾಣೆಯ ಪ್ರಭಾರ ಉಸ್ತುವಾರಿಯನ್ನ ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ ವಹಿಸಿದ್ದು, ಅವರ ನೇತೃತ್ವದಲ್ಲಿ ನಡೆದ ದಿಢೀರ್ ದಾಳಿಯಿಂದ ಹರೇಕಳದಲ್ಲಿ ಬೇರೂರಿರುವ ಮರಳು ಮಾಫಿಯಾಗಳು ದಿಕ್ಕೆಟ್ಟು ಹೋಗಿವೆ. ಕಾರ್ಯಾಚರಣೆಯಲ್ಲಿ ಪಿಎಸ್ ಐ ಪುನೀತ್ ಗಾಂವ್ಕರ್, ವಿನೋದ್, ಸಿಬ್ಬಂದಿಗಳಾದ ಶೈಲೇಂದ್ರ ಮೊದಲಾದವರು ಇದ್ದರು.
Discussion about this post