ಮಂಗಳೂರು: ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಇಲ್ಲಿನ ನ್ಯಾಯಾಲಯವು 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ರೂ. 30 ಸಾವಿರ ದಂಡ ವಿಧಿಸಿ ಆದೇಶಿಸಿದೆ. ಪಚ್ಚನಾಡಿ ವೈದ್ಯನಾಥ ನಗರದ ನವೀನ್ ಪೂಜಾರಿ ಅಲಿಯಾಸ್ ನವೀನ್ ಸುವರ್ಣ(42) ಶಿಕ್ಷೆಗೊಳಗಾದ ವ್ಯಕ್ತಿ. ಪ್ರಕರಣದಲ್ಲಿ ಇತರ ಮೂವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.

ಪ್ರಕರಣದ ವಿವರ: ಸಂತ್ರಸ್ತ ಬಾಲಕಿಯು ವಿದ್ಯಾರ್ಥಿನಿಯಾಗಿದ್ದು, ವಾಮಂಜೂರು ತಿರುವೈಲಿನ ಸಂದೀಪ್ ಕುಲಾಲ್ ಎಂಬಾತನೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಅವರಿಬ್ಬರು ಜೊತೆಯಲ್ಲಿರುವುದನ್ನು ನೋಡಿದ್ದ ನವೀನ್ ಸುವರ್ಣ, ಈ ವಿಷಯವನ್ನು ಎಲ್ಲರಿಗೂ ತಿಳಿಸುವುದಾಗಿ ಬ್ಲ್ಯಾಕ್ಮೇಲ್ ಮಾಡಿ, 2017 ಆಗಸ್ಟ್ 16ರಂದು ಆಕೆಯನ್ನು ತನ್ನ ಪರಿಚಯದ ಮಹಿಳೆಯ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ. ನಂತರ ನಾಲ್ಕು ತಿಂಗಳುಗಳವರೆಗೂ ಇದೇ ರೀತಿ ಕೃತ್ಯ ನಡೆಸಿದ್ದ ಎನ್ನಲಾಗಿದೆ. ನವೀನ್ಗೆ ಸಹಕರಿಸಿದ ಆರೋಪ ಆ ಮಹಿಳೆಯ ಮೇಲಿತ್ತು.
ದಾವಣಗೆರೆಯ ಹರಪನಹಳ್ಳಿ ಮಾಚಿಹಳ್ಳಿ ತಾಂಡಾ ಮೂಲದ ಹಾಗೂ ವಾಮಂಜೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ಪುನೀತ್ಕುಮಾರ್ ಕೂಡ ಬಾಲಕಿಯನ್ನು ಬ್ಲ್ಯಾಕ್ಮೇಲ್ ಮಾಡಿ ಅತ್ಯಾಚಾರ ಎಸಗಿದ್ದ. ಬಾಲಕಿ ಗರ್ಭಿಣಿಯಾಗಿದ್ದು, ನಂತರ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂದೀಪ್ ಕುಲಾಲ್ ಸಹಿತ ಒಟ್ಟು ನಾಲ್ವರ ಮೇಲೆ ಪ್ರಕರಣ ದಾಖಲಾಗಿತ್ತು.

ಬಾಲಕಿ ಗಂಡು ಮಗುವಿಗೆ ಜನ್ಮನೀಡಿದ್ದು, ಆ ಬಳಿಕ ಮಗುವಿನ ಡಿಎನ್ಎ ಪರೀಕ್ಷೆ ನಡೆಸಿದಾಗ ಅದು ನವೀನ್ ಸುವರ್ಣನ ಜೊತೆ ತಾಳೆಯಾಗಿದ್ದು ಆತ ಅತ್ಯಾಚಾರ ಎಸಗಿದ್ದು ದೃಢಪಟ್ಟಿತ್ತು. ಪ್ರಕರಣದ ತನಿಖೆ ಕೈಗೊಂಡಿದ್ದ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಿದ್ದನಗೌಡ ಎಚ್.ಬಜಂತ್ರಿ ಅವರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಒಟ್ಟಾರೆ 51 ದಾಖಲೆಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, 21 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ವಿಚಾರಣೆ ಕೈಗೊಂಡ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅವರು ಆರೋಪಿ ನವೀನ್ ಸುವರ್ಣನಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸಾರ್ವಜನಿಕ ವಕೀಲ ಸಿ.ವೆಂಕಟರಮಣ ಸ್ವಾಮಿ ವಾದಿಸಿದ್ದರು.

Discover more from Coastal Times Kannada
Subscribe to get the latest posts sent to your email.








Discussion about this post