ಮಂಗಳೂರು: ನಗರದಲ್ಲಿ ಸರಣಿ ದರೋಡೆಗೆ ಸ್ಕೆಚ್ ಹಾಕಿದ್ದ ನೇಪಾಳ ಮೂಲದ ಕುಖ್ಯಾತ ಮನೆಗಳ್ಳರ ಜಾಲವನ್ನು ಬರ್ಕೆ ಠಾಣಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ನೇಪಾಳದ ಚೈನ್ ಪುರ್ ಜಿಲ್ಲೆಯ ಕೇತ್ ಕೊಟ್ ಗ್ರಾಮದ ನಿವಾಸಿ ತಿಲಕ್ ಕುಮಾರ್ ಖಡ್ಕ ಅಲಿಯಾಸ್ ತಿಲಕ್ ಖಡ್ಕ (36), ಚೈನ್ಪೂರು ಜಿಲ್ಲೆ, ಮಸ್ಟಾ ಗಾಂವಪಾಲಿಕಾ, ನೇಪಾಳ. ಅಶೋಕ್ ರಾಜ್ ಅಲಿಯಾಸ್ ಅಶೋಕ್ ಸಿಂಗ್ ಠಾಕುರಿ (33), ಬಜಂಗ್ ಜಿಲ್ಲೆ, ಮಸ್ಟಾ ಗಾಂವಪಾಲಿಕಾ, ನೇಪಾಳ. ದಿಪೆಂದರ್ ರಸೈಲಿ (25), ಕೈಲಾಲಿ ಜಿಲ್ಲೆ, ಚುರೆ ಗಾಂವ ಪಾಲಿಕಾ, ನೇಪಾಳ.
ಉರ್ವ ಮಾರ್ಕೆಟ್ ಬಳಿಯ ಮನೆಯೊಂದರಲ್ಲಿ ನಡೆದಿದ್ದ ಭಾರಿ ಕಳ್ಳತನದ ಬೆನ್ನತ್ತಿದ ಖಾಕಿ ಪಡೆ, ಘಟನೆ ನಡೆದ ಕೇವಲ ಐದೇ ದಿನಗಳಲ್ಲಿ ಮೂವರು ಕಳ್ಳರನ್ನು ಹೆಡೆಮುರಿ ಕಟ್ಟಿದೆ. ಬಂಧಿತರಿಂದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಒಡವೆಗಳು ಹಾಗೂ ಮಹಾರಾಷ್ಟ್ರದಲ್ಲಿ ದೋಚಿದ್ದ ಭಾರಿ ಪ್ರಮಾಣದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಜುಲೈ 11ರಂದು ಉರ್ವ ಮಾರುಕಟ್ಟೆ ಸಮೀಪದ ಮಠದಕಣಿಯ ನಿವಾಸಿಯೊಬ್ಬರು ತಮ್ಮ ಮನೆಗೆ ಬೀಗ ಹಾಕಿ ವಿಟ್ಲ ಕಡಂಬುನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಮರುದಿನ ಜುಲೈ 12ರಂದು ಬೆಳಿಗ್ಗೆ ಬಂದು ನೋಡಿದಾಗ ಕಳ್ಳರು ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿ, ಗೋದ್ರೇಜ್ನಲ್ಲಿದ್ದ 64 ಗ್ರಾಂ ಬಂಗಾರದ ಒಡವೆಗಳು ಹಾಗೂ 25,000 ರೂಪಾಯಿ ನಗದು ಒಳಗೊಂಡಂತೆ ಒಟ್ಟು 8.57 ಲಕ್ಷ ಮೌಲ್ಯದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬರ್ಕೆ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ಜುಲೈ 17ರ ಮುಂಜಾನೆ ಬೋಳೂರು ಪರಿಸರದಲ್ಲಿ ಕಾರ್ಯಾಚರಣೆ ನಡೆಸಿ ಮೂವರು ನೇಪಾಳಿ ಕಳ್ಳರನ್ನು ಸೆರೆಹಿಡಿದಿದ್ದಾರೆ. ಬಂಧಿತ ಆರೋಪಿಗಳ ವಶದಿಂದ ಮಠದಕಣಿ ಮನೆಯಿಂದ ಕಳವಾಗಿದ್ದ ಎಲ್ಲಾ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ, ಈ ಗ್ಯಾಂಗ್ ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ದೋಚಿದ್ದ ಬರೋಬ್ಬರಿ 790 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಲಾಗಿದ್ದು, ವಶಪಡಿಸಿಕೊಂಡ ಒಟ್ಟು ಮಾಲಿಕತ್ವದ ಮೌಲ್ಯ 10 ಲಕ್ಷ ರೂಪಾಯಿ ದಾಟುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಖದೀಮರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಇವರ ಅಂತರರಾಜ್ಯ ದರೋಡೆ ಜಾಲ ಬಹಿರಂಗಗೊಂಡಿದೆ. ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಮಂಗಳೂರಿನ ಉರ್ವ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನಕ್ಕೆ ಯತ್ನಿಸಿ ವಿಫಲವಾಗಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಕರ್ನಾಟಕದ ಸಿಲಿಕಾನ್ ಸಿಟಿ ಬೆಂಗಳೂರು, ದಾವಣಗೆರೆ, ಕರಾವಳಿಯ ಉಡುಪಿ ಸೇರಿದಂತೆ ರಾಜ್ಯದ ವಿವಿಧೆಡೆ 15ಕ್ಕೂ ಹೆಚ್ಚು ಮನೆಗಳ್ಳತನ ಕೃತ್ಯಗಳಲ್ಲಿ ಇವರು ಭಾಗಿಯಾಗಿದ್ದು, ಇವರ ವಿರುದ್ಧ ಸರಣಿ ಪ್ರಕರಣಗಳು ದಾಖಲಾಗಿವೆ. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ದೇಶದ ರಾಜಧಾನಿ ದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲೂ ಈ ಗ್ಯಾಂಗ್ ಕಳ್ಳತನ ನಡೆಸಿರುವ ಮಾಹಿತಿ ಲಭ್ಯವಾಗಿದ್ದು, ಆಯಾ ರಾಜ್ಯಗಳ ಪೊಲೀಸರಿಂದ ಮಾಹಿತಿ ಕಲೆಹಾಕಲಾಗುತ್ತಿದೆ.


Discover more from Coastal Times Kannada
Subscribe to get the latest posts sent to your email.








Discussion about this post