ಉಳಾಯಿಬೆಟ್ಟು ; ಮಂಗಳೂರು ಕಂಕನಾಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪರಾರಿ ಎಂಬಲ್ಲಿರುವ ಹಂಚಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬವೊಂದರ 8 ವರ್ಷದ ಹೆಣ್ಣು ಮಗುವಿನ ಮೃತದೇಹ ಫ್ಯಾಕ್ಟರಿ ಪಕ್ಕದಲ್ಲಿ ಪತ್ತೆಯಾಗಿದ್ದು, ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಗುರುಪುರ ಸೇತುವೆ ಬಳಿಯ ಪರಾರಿ ಕ್ರಾಸ್ನಲ್ಲಿ ಫ್ಯಾಕ್ಟರಿ ಇದ್ದು, ಅಲ್ಲಿ ಅಸ್ಸಾಂ ಸಹಿತ ಉತ್ತರ ಭಾರತದ 14 ಹುಡುಗರು, 4-5 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಅಸ್ಸಾಂ ಕುಟುಂಬದ 8 ವರ್ಷದ ಹೆಣ್ಣು ಮಗು ಭಾನುವಾರ ಬೆಳಗ್ಗೆ ಸುಮಾರು 11 ಗಂಟೆಯಿಂದ ನಾಪತ್ತೆಯಾಗಿತ್ತು. ಕೆಲಸಗಾರರು ಮತ್ತು ಸ್ಥಳೀಯರು ಮಗುವಿನ ಹುಡುಕಾಟ ಆರಂಭಿಸಿದರು. ಸಂಜೆ ಸುಮಾರು 6.30ಕ್ಕೆ ಫ್ಯಾಕ್ಟರಿಯ ಪಕ್ಕದ ಮೋರಿ ಬಳಿ ಮಗುವಿನ ಶವ ಪತ್ತೆಯಾಗಿದೆ.
ಮಗುವಿನ ಮೈಮೇಲಿನ ಬಟ್ಟೆಬರೆ ಚೆಲ್ಲಾಪಿಲ್ಲಿಯಾಗಿದ್ದು, ಅತ್ಯಾಚಾರ ನಡೆಸಿದ ದುಷ್ಕರ್ಮಿಗಳು ಕೊಲೆ ಮಾಡಿರಬೇಕೆಂದು ಅನುಮಾನಿಸಲಾಗಿದೆ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಉತ್ತರ ಭಾರತೀಯರು ನಡೆಸಿರುವ ಕೃತ್ಯವಿರಬೇಕೆಂದು ಕೆಲವರು ಅನುಮಾನಿಸಿದ್ದು, ಈ ನಿಟ್ಟಿನಲ್ಲಿ ಪೊಲೀಸ್ ತನಿಖೆ ಮುಂದುವರಿದಿದೆ.
ಕಂಕನಾಡಿ ಗ್ರಾಮಾಂತರ ಪೊಲೀಸರು ಆಗಮಿಸಿ, ಶವವನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಕಮಿಷನರ್ ಶಶಿಕುಮಾರ್, ಟೈಲ್ಸ್ ಫ್ಯಾಕ್ಟರಿಯಲ್ಲಿ 30ರಷ್ಟು ಜನ ಕೆಲಸ ಮಾಡುತ್ತಾರೆ. ಇಂದು ಭಾನುವಾರ ಆಗಿದ್ದರಿಂದ 19 ಜನ ಕೆಲಸಕ್ಕೆ ಬಂದಿದ್ದರು. ಸಂಜೆ ಹೊತ್ತಿಗೆ ಈ ಘಟನೆ ನಡೆದಿದ್ದು, ಕೊಲೆ ಪ್ರಕರಣ ದಾಖಲು ಮಾಡಿದ್ದೇವೆ. ಹಲವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಅತ್ಯಾಚಾರ ನಡೆದಿದೆಯೇ ಎನ್ನುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ವೈದ್ಯರು ತಪಾಸಣೆ ಬಳಿಕ ಮಾಹಿತಿ ನೀಡಲಿದ್ದಾರೆ ಎಂದು ಕಮಿಷನರ್ ತಿಳಿಸಿದ್ದಾರೆ.
Discussion about this post