ಮಂಗಳೂರು: ಉಳ್ಳಾಲದ ಮುಕ್ಕಚ್ಚೇರಿ ಮಸೀದಿ ಮುಂಭಾಗ 2017ರ ಅ.4ರಂದು ನಡೆದಿದ್ದ ಮುಕ್ಕಚ್ಚೇರಿಯ ಝುಬೈರ್ ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂವರು ಅಪರಾಧಿಗಳಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನಿಜಾಮುದ್ದೀನ್, ತಾಜುದ್ದೀನ್ ಮತ್ತು ಮುಸ್ತಾಫ್ ಎಂಬುವವರೇ ಶಿಕ್ಷೆಗೊಳಗಾದವರು.
ಝುಬೈರ್ ಹಾಗೂ ಆಸಿಫ್ ಎಂಬುವವರ ನಡುವೆ ಮಸೀದಿ ವಿಚಾರದಲ್ಲಿ ಗಲಾಟೆ ನಡೆದು ದ್ವೇಷ ಬೆಳೆದಿತ್ತು. 2016ರ ರಂಜಾನ್ ಹಬ್ಬದ ಹಿಂದಿನ ದಿನ ಝುಬೈರ್ಗೆ ಮುಕ್ಕಚ್ಚೇರಿಯಲ್ಲಿ ಆಸಿಫ್ ಹಾಗೂ ಆತನ ಗೆಳೆಯ ಅಲ್ತಾಫ್ ಎಂಬವರು ಥಳಿಸಿದ್ದರು. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಝುಬೈರ್ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ, ಅಲ್ತಾಫ್ ವಿರುದ್ಧ ಗೂಂಡಾ ಕಾಯ್ದೆ ಹಾಕಲಾಗಿತ್ತು. ಇದು ಝುಬೈರ್ ಮೇಲೆ ಅಲ್ತಾಫ್ಗೆ ದ್ವೇಷ ಹೆಚ್ಚಿತ್ತು.
ಅಂತೆಯೇ, 2017ರ ಅ.4ರಂದು ಸಂಜೆ ಅಲ್ತಾಫ್, ಆಸಿಫ್ ಮತ್ತು ಸುಹೈಲ್ ಸೇರಿ ಝುಬೈರ್ರನ್ನು ಕೊಲೆ ಮಾಡುವ ಬಗ್ಗೆ ಒಳಸಂಚು ನಡೆಸಿದ್ದರು. ಅಂದು ರಾತ್ರಿ ಝುಬೈರ್ ತನ್ನ ಗೆಳೆಯ ಇಲ್ಯಾಸ್ನೊಂದಿಗೆ ಮಸೀದಿ ಮುಂಭಾಗದ ರಸ್ತೆಯಲ್ಲಿ ಬೈಕ್ನಲ್ಲಿ ಕುಳಿತು ಮಾತನಾಡುತ್ತಿದ್ದಾಗ ಸುಹೈಲ್, ನಿಜಾಮುದ್ದೀನ್, ತಾಜುದ್ದೀನ್ ಮತ್ತು ಮುಸ್ತಾಫ ಮಾರಕಾಯುಧಗಳಿಂದ ಕೊಚ್ಚಿ ಝುಬೈರ್ನನ್ನು ಕೊಲೆ ಮಾಡಿದ್ದರು. ತಡೆಯಲು ಬಂದ ಇಲ್ಯಾಸ್ ಕೈಗೂ ತಲವಾರಿನಿಂದ ದಾಳಿ ನಡೆಸಿದ್ದರು. ಈ ಬಗ್ಗೆ ಅಂದಿನ ಪೊಲೀಸ್ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಒಟ್ಟು ಆರೋಪಿಗಳ ಈ ಪೈಕಿ 5ನೇ ಆರೋಪಿ ಅಲ್ತಾಫ್ ಮೃತಪಟ್ಟಿದ್ದ. ಮತ್ತೋರ್ವ ಆರೋಪಿ ಸುಹೈಲ್ ತಲೆಮರೆಸಿಕೊಂಡಿದ್ದಾನೆ. ಇದೀಗ ನಿಝಾಮುದ್ದೀನ್, ತಾಜುದ್ದೀನ್ ಮತ್ತು ಮುಸ್ತಾಫನಿಗೆ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 4 ತಿಂಗಳು ಜೈಲು ಶಿಕ್ಷೆ ಹಾಗೂ ಐಪಿಸಿ ಕಲಂ 326ರಡಿ ಎಸಗಿರುವ ಅಪರಾಧಕ್ಕೆ 5 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ಈ ದಂಡ ಪಾವತಿಸಲು ತಪ್ಪಿದರೆ ಒಂದು ತಿಂಗಳು ಹೆಚ್ಚುವರಿಯಾಗಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ನಾರಾಯಣ ಸೇರಿಗಾರ್ ಯು. ವಾದ ಮಂಡಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post