ಮಂಗಳೂರು: ಕಡಲತೀರದಲ್ಲಿ ಸಿರಿಯಾ ದೇಶದ ಹಡಗಿನಲ್ಲಿ ದೋಷ ಕಂಡು ಬಂದಿದ್ದು ಅಪಾಯದಲ್ಲಿದ್ದ 15 ಮಂದಿಯನ್ನು ರಕ್ಷಿಸಲಾಗಿದೆ. ಉಳ್ಳಾಲದ 5 ರಿಂದ 6 ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ಸಂಭವಿಸಿದೆ. MV PRINCESS MIRAL ಎಂಬ ಹಡಗು ಮಂಗಳೂರು ತೀರದಲ್ಲಿ ಸಾಗುವ ವೇಳೆ ದೋಷ ಕಾಣಿಸಿಕೊಂಡಿದೆ. ಈ ಹಡಗಿನಲ್ಲಿ 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸಲಾಗುತ್ತಿತ್ತು. ಹಡಗಿನಲ್ಲಿ ಸಣ್ಣ ರಂಧ್ರದ ಮೂಲಕ ನೀರು ಬರಲು ಪ್ರಾರಂಭಿಸಿರುವುದರಿಂದ ಅದನ್ನು ಅಂಡರ್ ವಾಟರ್ ನಲ್ಲಿ ದುರಸ್ಥಿ ಪಡಿಸಲು, ಮಂಗಳೂರು ಹಳೆ ಬಂದರು ವ್ಯಾಪ್ತಿಯ ದಕ್ಷಿಣದ ಬದಿಯಿಂದ ಸುಮಾರು 5.2 ಮೈಲಿ ದೂರದಲ್ಲಿ ಲಂಗರು ಹಾಕಲಾಗಿದೆ.
ಮಲೇಷ್ಯಾದಿಂದ ಲೆಬನಾನ್ಗೆ ಉಕ್ಕಿನ ಕಾಯಿಲ್ಗಳನ್ನು ನೌಕೆ ಸಾಗಿಸುತ್ತಿತ್ತು. ಉಳ್ಳಾಲ ಬಳಿ ಸಮುದ್ರದಲ್ಲಿ ಸಂಚರಿಸುತ್ತಿರುವ ವೇಳೆ ಹಡಗಿನಲ್ಲಿ ರಂಧ್ರ ಉಂಟಾಗಿ ಮುಳುಗುವ ಅಪಾಯ ಎದುರಾ ಯಿತು.ಅದರ ಕ್ಯಾಪ್ಟನ್ ಕೋಸ್ಟ್ಗಾರ್ಡ್ಗೆ ಸಂದೇಶ ರವಾನಿಸಿ ರಕ್ಷಿಸುವಂತೆ ಕೋರಿಕೊಂಡರು. ತತ್ಕ್ಷಣ ಕೋಸ್ಟ್ ಗಾರ್ಡ್ನ ಅಧಿಕಾರಿ, ಸಿಬಂದಿಯ ತಂಡ ತೆರಳಿ ರಕ್ಷಣ ಕಾರ್ಯಾಚರಣೆ ಕೈಗೊಂಡರು. ಕೋಸ್ಟ್ ಗಾರ್ಡ್ ನೌಕೆಗಳಾದ ವಿಕ್ರಂ ಹಾಗೂ ಅಮಾರ್ತ್ಯ ಇವೆರಡನ್ನೂ ರಕ್ಷಣೆಗಾಗಿ ಕಳುಹಿಸಿ ಕೊಡ ಲಾಯಿತು. ಅಬ್ಬರಿಸುತ್ತಿರುವ ಸಮುದ್ರದ ಮಧ್ಯೆ ಕಾರ್ಯಾಚರಣೆ ಕೈಗೊಂಡ ಕೋಸ್ಟ್ಗಾರ್ಡ್ ಸಿಬಂದಿ ಎಲ್ಲ 15 ಮಂದಿ ಸಿರಿಯನ್ ನಾವಿಕರನ್ನೂ ಯಶಸ್ವಿಯಾಗಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಕರೆತರಲಾದ ನಾವಿಕರನ್ನು ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಲಾಗುತ್ತಿದೆ.
ಪ್ರಿನ್ಸೆಸ್ ಮಿರಾಲ್ ಹಡಗು 32 ವರ್ಷ ಹಳೆಯದಾಗಿದೆ, ಈ ಹಡಗಿನಲ್ಲಿ ತಾಂತ್ರಿಕ ದೋಷ ಕಾಣಿಸಿ ಕೊಂಡ ಬಳಿಕ ಹಡಗಿನ ಪರವಾಗಿ ಮಂಗಳೂರಿ ನಲ್ಲಿರುವ ಏಜೆಂಟರು ನವಮಂಗಳೂರು ಬಂದರು ಪ್ರಾಧಿಕಾರವನ್ನು ಸಂಪರ್ಕಿಸಿದ್ದು ಆ್ಯಂಕರೇಜ್ ವರೆಗೆ ಬರುವುದಕ್ಕೆ ಅವಕಾಶ ಕೇಳಿದ್ದರು ಎಂದು ತಿಳಿದುಬಂದಿದೆ. ಆದರೆ ಹಳೇ ಹಡಗುಗಳಿಗೆ ಭಾರತದ ಬಂದರುಗಳಲ್ಲಿ ಪ್ರವೇಶಿಸಲು ಅವಕಾಶ ಇರದ ಹಿನ್ನೆಲೆಯಲ್ಲಿ ಅನುಮತಿ ನೀಡಲಾಗಿಲ್ಲ. ಅಲ್ಲದೆ ಮಂಗಳೂರು ಹಳೇಬಂದರಿಗೂ ಅವಕಾಶ ಕೇಳಿದ್ದೂ ಅಲ್ಲೂ ಅನುಮತಿ ನಿರಾಕರಿಸಲಾಗಿದೆ.
Discussion about this post