ಉಳ್ಳಾಲ; ಗುತ್ತಿಗೆದಾರ ಮೊಹಮ್ಮದ್ ಶಮೀರ್ ಎಂಬವರನ್ನು ತಂಡವೊಂದು ಅಡ್ಡಗಟ್ಟಿ ಚೂರಿಯಿಂದ ಇರಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಬಸ್ತಿಪಡ್ಪು ಎಂಬಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾಪು ಮೂಲದ ಮೊಹಮ್ಮದ್ ಶಮೀರ್ ಎಂಬವರನ್ನು ಬಸ್ತಿಪಡ್ಪು ಬಳಿ ಪರಿಚಯಸ್ಥ ಹಸೈನಾರ್ ಎಂಬಾತ ನಿಲ್ಲಿಸಿ ಸಮೀಪದಲ್ಲೇ ಗುತ್ತಿಗೆ ಒಂದು ಇದೆ ಎಂದು ನಂಬಿಸಿ ಸಮುದಾಯ ಆರೋಗ್ಯ ಕೇಂದ್ರದ ಕಡೆ ಕರೆದುಕೊಂಡು ಬಂದಿದ್ದ. ಇದೇ ವೇಳೆ ಅಲ್ಲಿಗೆ ದ್ವಿಚಕ್ರ ವಾಹನದಲ್ಲಿ ಬಂದ ಉಮರ್ ನವಾಫ್ ಎಂಬಾತ ಹೊಸ ಸೈಟ್ ತೋರಿಸುವುದಾಗಿ ಮೊಹಮ್ಮದ್ ಶಮೀರ್ ರನ್ನು ನಂಬಿಸಿ ಬಸ್ತಿಪಡ್ಪು ಬಳಿ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.
ಬಸ್ತಿಪಡ್ಪು ಬಳಿ ಮೊಹಮ್ಮದ್ ಶಮೀರ್ ರನ್ನು ಕಾರಿನಿಂದ ಇಳಿಸಿದ ಇಬ್ಬರು ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ, ಕಾರಿನ ಕೀ ಕೊಡುವಂತೆ ಕೇಳಿದ್ದರು ಎನ್ನಲಾಗಿದೆ. ಇದಕ್ಕೆ ಮೊಹಮ್ಮದ್ ಶಮೀರ್ ನಿರಾಕರಿಸಿದಾಗ ಇಬ್ಬರು ಆರೋಪಿಗಳು ಜೀವಬೆದರಿಕೆ ಹಾಕಿದಲ್ಲದೇ ಕಾಲಿಗೆ ಚೂರಿಯಿಂದ ಇರಿದು ಕಾರನ್ನು ಅಪಹರಿಸಿ ಹೋಗಿದ್ದಾರೆ ಎಂದು ದೂರಲಾಗಿತ್ತು.
ಎಸಿಪಿ ಧನ್ಯಾ ನಾಯಕ್ ಸೂಚನೆಯಂತೆ ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಬಾಲಕೃಷ್ಣ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರೌಡಿ ಹಸೈನಾರನ್ನ ಮಧ್ಯರಾತ್ರಿಯೇ ಬಂಧಿಸಿದೆ. ದರೋಡೆ ಮಾಡಿದ ಕಾರು, ಲ್ಯಾಪ್ ಟಾಪ್, ಕೃತ್ಯಕ್ಕೆ ಬಳಸಿದ ಚಾಕುವನ್ನ ದಸ್ತಗಿರಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ರೌಡಿ ಶೀಟರ್ ಉಮರ್ ನವಾಬ್ ಮತ್ತು ಅಕ್ಬರ್ ಉಳ್ಳಾಲ್ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.
Discussion about this post