ಮಂಗಳೂರು, ಜೂ23: ಅರಬ್ಬಿ ಸಮುದ್ರದಲ್ಲಿ ಅವಘಡಕ್ಕೆ ಈಡಾಗಿದ್ದ ಸಿರಿಯಾದ ಪ್ರಿನ್ಸೆಸ್ ಮಿರಾಲ್ ಸರಕು ಸಾಗಾಟದ ಹಡಗು ಜಲ ಸಮಾಧಿಯಾಗಿದೆ. ಸಿರಿಯಾದ 15 ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಿದೇಶಿ ಹಡಗು ಎಂ ವಿ ಪ್ರಿನ್ಸಸ್ ಮಿರಾಲ್ ಮಂಗಳೂರಿನ ಬಟ್ಟಪಾಡಿ ಸಮೀಪದ ಸಮುದ್ರದಲ್ಲಿ ಮುಳುಗಡೆಯಾಗಿದೆ. ಎರಡು ದಿನಗಳ ಹಿಂದೆ ಈ ವಿದೇಶಿ ಹಡಗು ಮಂಗಳೂರಿನ ಸಮುದ್ರ ತೀರದಲ್ಲಿ ಪ್ರಯಾಣ ಬೆಳೆಸುತ್ತಿದ್ದ ವೇಳೆ ಸಣ್ಣ ರಂಧ್ರದ ಮೂಲಕ ನೀರು ಒಳನುಗ್ಗಿ ಅಪಾಯಕ್ಕೆ ಸಿಲುಕಿತ್ತು. ಇದರಲ್ಲಿದ್ದ 15 ಸಿರಿಯಾ ದೇಶದ ಪ್ರಜೆಗಳನ್ನು ಮಂಗಳೂರಿನ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದರು. 8000 ಟನ್ ಉಕ್ಕಿನ ಕಾಯಿಲ್ ಗಳನ್ನು ತುಂಬಿಸಿಕೊಂಡು ಚೀನಾದ ಟಿಯಾಂಜಿನ್ ನಿಂದ ಮಲೇಷ್ಯಾದ ಲೆಬನಾನ್ ಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತ್ತು. ಈ ಹಡಗು ಬಟ್ಟಪ್ಪಾಡಿ ಸಮೀಪದ ಸಮುದ್ರದಲ್ಲಿ ಮುಳುಗಡೆಯಾಗಿದೆ.
ಹಡಗು ಮುಳುಗಡೆಗೊಂಡ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕೋಸ್ಟ್ ಗಾರ್ಡ್ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ್ದಾರೆ. ಸಭೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಎಂ ವಿ ಪ್ರಿನ್ಸಸ್ ಮಿರಾಲ್ ಹಡಗಿನಿಂದ ಸ್ಟೀಲ್ ಕಾಯಿಲ್ ಅಗದಂತೆ ತಡೆಗಟ್ಟಲು ಹಾಗೂ ಹಡಗಿನಲ್ಲಿರುವ ಫರ್ನಸ್ ಅಯಿಲ್ ಮತ್ತು ಇಂಜಿನ್ ಆಯಿಲ್ ಅನ್ನು ಹೊರತೆಗೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋಸ್ಟ್ ಗಾರ್ಡ್ ಡಿಐಜಿ ಅವರಿಗೆ ತಿಳಿಸಲಾಗಿದೆ. ಈ ಹಡಗಿನ ಸುತ್ತಲೂ ಮೀನುಗಾರಿಕೆ ನಡೆಸದ ಹಾಗೆ ನೋಡಿಕೊಳ್ಳುವಂತೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ಸೂಚಿಸಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರಿಗೆ ಕಾಲ ಕಾಲಕ್ಕೆ ಸಮುದ್ರದ ನೀರಿನ ಗುಣಮಾಪನವನ್ನು ಮಾಡಲು ನಿರ್ದೇಶಿಸಲಾಗಿದೆ. ಇದರ ಕಾರ್ಯಾಚರಣೆಗೆ ಎಂ.ಆರ್.ಪಿ.ಎಲ್ ಹಾಗೂ ಎನ್.ಎಂ.ಪಿ.ಟಿ ಸಂಸ್ಥೆಯವರು ತಮ್ಮಲ್ಲಿರುವ ರಕ್ಷಣಾ ಸಾಮಾಗ್ರಿಗಳನ್ನು ಒದಗಿಸುವಂತೆ ಸೂಚಿಸಲಾಗಿದೆ .ಇದಕ್ಕೆ ಸಂಬಂಧಿಸಿದ ಇತರ ಎಲ್ಲಾ ಇಲಾಖೆಯವರಿಗೆ ಸ್ಟೀಲ್ ಕಾಯಿಲ್ ಸಮುದ್ರದ ದಡಕ್ಕೆ ಬಂದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸನ್ನದ್ಧರಾಗಿರಬೇಕೆಂದು ನಿರ್ದೇಶನ ನೀಡಲಾಗಿದೆ. ಯಾವುದೇ ರೀತಿಯಲ್ಲಿ ಸ್ಟೀಲ್ ಕಾಯಿಲ್ ನೀರಿಗೆ ಸೇರಿದ ಸಂದರ್ಭದಲ್ಲಿ ನದಿಗೆ ಸೇರದಂತೆ ಸೂಕ್ತ ವ್ಯವಸ್ಥೆ ಮಾಡುವಂತೆ ಕೋಸ್ಟ್ ಗಾರ್ಡ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಐ.ಜಿ ಕೋಸ್ಟ್ ಗಾರ್ಡ್ ರವರನ್ನು ಚೀಫ್ ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಲಾಗಿದೆ ಅಂತಾ ಹೇಳಿದ್ದಾರೆ.
ಕೋಟ್ಯಂತರ ರೂಪಾಯಿ ಮೌಲ್ಯದ ಸ್ಟೀಲ್ ಕಾಯಿಲ್ ಸಮುದ್ರ ಪಾಲು ; ಹಡಗಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಟೀಲ್ ಕಾಯಿಲ್ ಈಗ ಸಮುದ್ರ ಪಾಲಾಗಿದೆ. ಇನ್ನು ಹಡಗಿನಿಂದ ರಕ್ಷಣೆಗೆ ಒಳಗಾದ 15 ಮಂದಿ ಸಿರಿಯಾ ಪ್ರಜೆಗಳನ್ನು ಪಣಂಬೂರು ಪೊಲೀಸ್ ಠಾಣೆಗೆ ಹಾಜರು ಪಡಿಸಲಾಗಿದೆ. ಆ ಬಳಿಕ ಅವರನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಲಾಗಿದ್ದು ಅವರನ್ನು ಬೆಂಗಳೂರಿನಲ್ಲಿರುವ ವಿದೇಶಿ ಪ್ರಜೆಗಳ ತಾತ್ಕಾಲಿಕ ಆಶ್ರಿತ ಕೇಂದ್ರಕ್ಕೆ ಕಳುಹಿಸಲಾಗುವುದು. ದೆಹಲಿಯ ವಿದೇಶಾಂಗ ವಿಭಾಗದ ಒಪ್ಪಿಗೆ ಬಳಿಕ ಸಿರಿಯಾ ದೇಶಕ್ಕೆ ಕಳುಹಿಸಲಾಗುವುದು ಅಂತ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.
Discussion about this post