ಉಳ್ಳಾಲ: ಒಂಟಿ ಮಹಿಳೆ ಇರುವ ಮನೆಗೆ ನುಗ್ಗಿದ ಮಹಿಳೆಯೋರ್ವಳು ವೃದ್ಧೆಯನ್ನ ದಿಂಬಿನಿಂದ ಅದುಮಿ ಅವರ ಕತ್ತಿನಲ್ಲಿದ್ದ 22 ಗ್ರಾಮ್ ಚಿನ್ನದ ಸರ ಕಿತ್ತು ಪರಾರಿಯಾಗಿರುವ ಘಟನೆ ಕುಂಪಲ ಮೂರುಕಟ್ಟೆ ಒಂದನೇ ಅಡ್ಡ ರಸ್ತೆಯ ಮಿತ್ರನಗರ ಎಂಬಲ್ಲಿ ನಡೆದಿದೆ.
ಮಿತ್ರನಗರದ ಒಂಟಿ ಮನೆ ನಿವಾಸಿ ಸುಶೀಲ(76)ಎಂಬವರ ಕತ್ತಲ್ಲಿದ್ದ 22 ಗ್ರಾಮ್ ತೂಕದ ಚಿನ್ನದ ಸರವನ್ನ ದರೋಡೆಗೈ ಯಲಾಗಿದೆ. ಸುಶೀಲ ಅವರ ಪತಿ ಉಗ್ಗಪ್ಪ ಮೂಲ್ಯ ಅವರು ಕೆಲ ವರುಷಗಳ ಹಿಂದೆ ಸಾವನ್ನಪ್ಪಿದ್ದರು. ದಂಪತಿಗೆ ಮಕ್ಕಳಿರಲಿಲ್ಲ ಹಾಗಾಗಿ ಸುಶೀಲ ಅವರು ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು.
ಇಂದು ಮಧ್ಯಾಹ್ನ 2.45 ರ ವೇಳೆ ಸುಶೀಲ ಅವರು ಮನೆಯ ಹಾಲ್ ನಲ್ಲಿ ಇದ್ದ ಮಂಚದಲ್ಲಿ ಗೋಡೆ ಕಡೆ ಮುಖ ಹಾಕಿ ಮಲಗಿದ್ದ ಸಂದರ್ಭ ಮಹಿಳೆಯೋರ್ವಳು ನುಗ್ಗಿದ್ದು ಮುಖಕ್ಕೆ ದಿಂಬನ್ನು ಅದುಮಿ ಸರವನ್ನು ದರೋಡೆಗೈದು ಪರಾರಿಯಾಗಿದ್ದಾಳೆ. ದರೋಡೆಗೈದ ಆಗಂತುಕ ಮಹಿಳೆ ಬಾಗಿಲಿನಿಂದ ಹೊರ ಓಡಿದಾಗ ಸುಶೀಲ ಅವರು ಮಹಿಳೆ ಚೂಡಿದಾರ್ ಧರಿಸಿದ್ದನ್ನ ಗಮನಿಸಿದ್ದಾರೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸ್ ಠಾಣಾ ನಿರೀಕ್ಷಕರಾದ ಸಂದೀಪ್ ,ಉಪ ನಿರೀಕ್ಷಕರಾದ ಶೀತಲ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post