ಮಂಗಳೂರು: ಕರಾವಳಿ ಕರ್ನಾಟಕ ಹಾಗೂ ತುಳುನಾಡಿನಲ್ಲಿ ಶ್ರಾವಣ ಮಾಸದ ಮೊದಲ ಪ್ರಮುಖ ಹಬ್ಬವಾದ ನಾಗರಪಂಚಮಿಯನ್ನು ಅತ್ಯಂತ ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಪ್ರಕೃತಿ ಮತ್ತು ನಾಗನ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಈ ಹಬ್ಬ ಕರಾವಳಿಯ ಮಟ್ಟಿಗೆ ಕೇವಲ ದೇವಸ್ಥಾನಗಳ ಪೂಜೆಯಷ್ಟೇ ಅಲ್ಲದೆ, ವಂಶದ ಕೊಂಡಿಗಳನ್ನು ಬೆಸೆಯುವ ಮಹತ್ವದ ಧಾರ್ಮಿಕ ಆಚರಣೆಯಾಗಿದೆ.
ಕರಾವಳಿ ಭಾಗದಲ್ಲಿ ನಾಗರಪಂಚಮಿಯಂದು ಒಂದು ವಿಶಿಷ್ಟ ಸಂಪ್ರದಾಯವಿದೆ. ಜನರು ಕೇವಲ ಪ್ರಸಿದ್ಧ ನಾಗಕ್ಷೇತ್ರಗಳಿಗೆ ಹೋಗುವುದಷ್ಟೇ ಅಲ್ಲದೆ, ತಮ್ಮ ತಮ್ಮ ವಂಶದ ಹಿರಿಯರ ಮೂಲಸ್ಥಾನಗಳು (ಮೂಲ ಮನೆತನದ ನಾಗಬನಗಳು) ಇರುವಲ್ಲಿಗೆ ಕುಟುಂಬ ಸಮೇತರಾಗಿ ತೆರಳುತ್ತಾರೆ. ದೂರದ ಊರುಗಳು ಹಾಗೂ ವಿದೇಶಗಳಲ್ಲಿ ನೆಲೆಸಿರುವ ಒಂದೇ ವಂಶದ (ಕುಟುಂಬದ) ಎಲ್ಲಾ ಸದಸ್ಯರು ಈ ದಿನ ಒಟ್ಟಾಗಿ ಸೇರುತ್ತಾರೆ.
ನಾಗಬನಗಳಲ್ಲಿ ಸ್ವಚ್ಛತೆ ಮಾಡಿ, ನಾಗಶಿಲೆಗಳಿಗೆ ಅರಿಶಿನ-ಕುಂಕುಮ, ಅಡಿಕೆ ಸಿಂಗಾರ, ಮಲ್ಲಿಗೆ ಮತ್ತು ಕೇದಗೆ ಹೂವುಗಳಿಂದ ಶೃಂಗಾರ ಮಾಡಲಾಗುತ್ತದೆ. ಬಳಿಕ ಬೆಲ್ಲ, ತುಪ್ಪ, ಜೇನುತುಪ್ಪ, ಹಾಲಿನೊಂದಿಗೆ ಎಳನೀರು ಬೆರೆಸಿದ ಪವಿತ್ರ ‘ತನು’ವನ್ನು ನಾಗದೇವರಿಗೆ ಭಕ್ತಿಯಿಂದ ಸಮರ್ಪಿಸಲಾಗುತ್ತದೆ. ಮನೆಯಲ್ಲಿ ಅರಿಶಿನದ ಎಲೆಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಕಡುಬು (ಮಂಜಲ್ದ ಇರೆತ ಅಡ್ಯ) ತಯಾರಿಸುವುದು ಈ ದಿನದ ಮತ್ತೊಂದು ವಿಶೇಷ.
ಕರಾವಳಿಯ ಪ್ರಸಿದ್ಧ ನಾಗಾರಾಧನಾ ಕ್ಷೇತ್ರವಾದ ಮಂಗಳೂರಿನ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತು ನಾಗದೇವರಿಗೆ ಹಾಲು, ಎಳನೀರು ಅರ್ಪಿಸಿದರು. ಮಾಜಿ ಸಚಿವ ಬಿ.ರಮಾನಾಥ ರೈ ಅವರು ಕೂಡ ಕುಡುಪು ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಬಗ್ಗೆ ಮಾತನಾಡಿದ ಕುಡುಪು ಕ್ಷೇತ್ರದ ಪ್ರಧಾನ ಅರ್ಚಕರಾದ ನರಸಿಂಹ ತಂತ್ರಿ, “ತುಳುನಾಡಿನಲ್ಲಿ ಪ್ರಥಮವಾಗಿ ಬರುವಂತಹ ವಿಶೇಷ ಹಬ್ಬವೇ ನಾಗರಪಂಚಮಿ. ಕುಡುಪು ಅನಂತಪದ್ಮನಾಭ ಕ್ಷೇತ್ರದಲ್ಲಿ ನಾಗದೇವರಿಗೆ ಪಂಚಾಮೃತ ಅಭಿಷೇಕ, ಎಳನೀರು ಅಭಿಷೇಕಗಳು ನಿರಂತರವಾಗಿ ನಡೆಯುತ್ತವೆ. ಇಂದಿನ ದಿನದಲ್ಲಿ ಹತ್ತು-ಹದಿನೈದು ಸಾವಿರಕ್ಕೂ ಮಿಕ್ಕಿ ನಾಗತಂಬಿಲ ಸೇವೆಗಳು ಜರುಗುತ್ತವೆ. ಭಕ್ತರು ತಮ್ಮ ತಮ್ಮ ಮೂಲಸ್ಥಾನಗಳಿಗೆ ತೆರಳಿ ಸೇವೆ ಸಲ್ಲಿಸುವುದರ ಜೊತೆಗೆ ಕ್ಷೇತ್ರಕ್ಕೂ ಬಂದು ಆಶ್ಲೇಷಾ ಬಲಿ, ಸರ್ಪ ಸಂಸ್ಕಾರ ಹಾಗೂ ನಾಗಪ್ರತಿಷ್ಠೆ ಮುಂತಾದ ಸೇವೆಗಳನ್ನು ನಡೆಸುತ್ತಾರೆ. ನಾಗದೇವರನ್ನು ಭಕ್ತಿಯಿಂದ ಆರಾಧಿಸಿದರೆ ಸಕಲ ಇಷ್ಟಾರ್ಥಗಳು ಈಡೇರುತ್ತವೆ” ಎಂದರು.
ಒಟ್ಟಾರೆ, ಕರಾವಳಿಯ ನಾಗಬನಗಳು ಮತ್ತು ಕ್ಷೇತ್ರಗಳಲ್ಲಿ ನಾಗನಿಗೆ ‘ತನು’ ಸಮರ್ಪಿಸುವ ಮೂಲಕ ನಾಡಿನ ಸಮೃದ್ಧಿ, ಸಂತಾನ ಸೌಭಾಗ್ಯ ಹಾಗೂ ದೋಷ ನಿವಾರಣೆಗಾಗಿ ಭಕ್ತರು ಪ್ರಾರ್ಥಿಸಿದರು.
Discover more from Coastal Times Kannada
Subscribe to get the latest posts sent to your email.








Discussion about this post