ಪುತ್ತೂರು, ಆ 27 : ವಿನಾಕಾರಣ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಆ.22ರಂದು ವೀಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ, ಕಟ್ಟತ್ತಾರು, ನಿಡ್ಯಾಣ ನಿವಾಸಿ ಅಬ್ದುಲ್ ನಾಸಿರ್ ಮೃತ ಯುವಕ.
ಅಬ್ದುಲ್ ನಾಸಿರ್ ಆತ್ಮಹತ್ಯೆ ಯತ್ನಕ್ಕೂ ಮುನ್ನ ವೀಡಿಯೋ ಮಾಡಿ ನಾನು ಬೆಳ್ಳಾರೆ ಸಮೀಪದ ಅದ್ರಾಮ ಎಂಬವರ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು ಅದ್ರಾಮ ಮತ್ತು ಕುಟುಂಬದವರು ಸೇರಿ ನನ್ನನ್ನು ಮನೆಗೆ ಕರೆದುಕೊಂಡು ಹೋಗಿ ನನಗೆ ಹೊಡೆದಿದ್ದಾರೆ ಎಂದು ಆರೋಪಿಸಿ ನಾಸಿರ್ ವಿಡಿಯೋ ರೆಕಾರ್ಡ್ ಮಾಡಿದ್ದು, ಇದರಿಂದ ಮನನೊಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದರು.
ಇನ್ನು ಅದ್ರಾಮ ಹಾಗೂ ಮತ್ತೋರ್ವರ ಜೊತೆ ಕಾರಿನಲ್ಲಿರುವಾಗಲೇ ಅವರ ಎದುರಿಗೇ ಮೊಬೈಲ್ ವೀಡಿಯೋ ಮಾಡಿ ತನ್ನ ನೋವನ್ನು ಹೇಳಿಕೊಂಡಿದ್ದರು. ಕಾರಿನಲ್ಲಿದ್ದವರನ್ನು ವೀಡಿಯೋದಲ್ಲಿ ತೋರಿಸುತ್ತಾ ನನ್ನ ಸಾವಿಗೆ ಇವರೇ ಕಾರಣ, ನಾನು ನೇಣು ಹಾಕಿಕೊಂಡು ಸಾಯುತ್ತೇನೆ ಎಂದು ಹೇಳಿ ವೀಡಿಯೋ ಕೊನೆಗೊಳಿಸಲಾಗಿದೆ. ಆನಂತರ ಸಂಜೆಯೊತ್ತಿಗೆ ಪುತ್ತೂರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಜೊತೆಗಿದ್ದವರು ರಕ್ಷಿಸಿ ಮಂಗಳೂರಿನ ಆಸ್ಪತ್ರೆಗೆ ಕರೆತಂದಿದ್ದಾರೆ.
Discussion about this post