ಮಂಗಳೂರು ನ 28 : ‘ಕರಾವಳಿಯ ತುಳುವನಾಗಿ ಈ ಮಟ್ಟಕ್ಕೆ ಬೆಳೆದು ಬಂದಿದ್ದೇನೆ. ತುಳು ಸಂಸ್ಕೃತಿಗೆ ಗಟ್ಟಿತನವಿದ್ದು, ಎಲ್ಲ ಕಡೆಗೂ ಬೆಳೆಯುವ ಚೈತನ್ಯ, ಶಕ್ತಿ ತುಂಬುತ್ತದೆ. ಹಿರಿಯರು ಕೂಡ ಇದೆ ಹಾದಿಯಲ್ಲಿ ಬೆಳೆದು ಬಂದವರು. ನನ್ನ ಮಗನನ್ನು ಕೂಡ ಅದೇ ರೀತಿಯ ವಾತಾವರಣದಲ್ಲಿ ಬೆಳೆಸಿದ್ದೇನೆ. ಆದರೆ, ಅವನಿಗೆ ತುಳು ಭಾಷೆ ಬರಲ್ಲ, ಪತ್ನಿಗೂ ಕೂಡ ತುಳು ಭಾಷೆ ಗೊತ್ತಿಲ್ಲ. ಈ ಕಾರಣದಿಂದ ಮನೆಯಲ್ಲಿ ನಾವು ತುಳು ಮಾತನಾಡದೇ ಇರುವ ಕಾರಣಕ್ಕೆ ತುಳು ಬರ್ತಿಲ್ಲ. ತುಳು ನಾಡಿನ ಸಂಸ್ಕೃತಿಯನ್ನು ಚೆನ್ನಾಗಿ ಮೆಚ್ಚಿಕೊಂಡಿದ್ದಾನೆ. ಈ ಕಾರಣಕ್ಕಾಗಿ ಸಿನಿಮಾ ಬಿಡುಗಡೆಗೆ ಮೊದಲು ತುಳುನಾಡಿದ ಆರಾಧ್ಯ ದೈವ, ದೇವರುಗಳ ಆಶೀರ್ವಾದ ಪಡೆಯಲು ಬಂದಿರುವೆ’ ಎಂದು ನಟ ಸುನಿಲ್ ಶೆಟ್ಟಿ ತಿಳಿಸಿದರು.
ಡಿಸೆಂಬರ್ 3 ರಂದು ಪುತ್ರ ಅಹಾನ್ ಶೆಟ್ಟಿ ಅವರ ‘ತಡಪ್’ ಹಿಂದಿ ಚಲನಚಿತ್ರ ಬಿಡುಗಡೆ ಆಗಲಿದೆ. ತಡಪ್ ಚಿತ್ರದ ನಿರ್ಮಾಣ ಕಾರ್ಯ ಒಂದೂವರೆ ವರ್ಷಗಳ ಹಿಂದೆಯೇ ಆಗಿತ್ತು. ಕೋವಿಡ್ನಿಂದಾಗಿ ಚಿತ್ರ ಬಿಡುಗಡೆ ಮುಂದೂಡಲಾಗಿತ್ತು. ಈಗ ಎಲ್ಲವೂ ಸ್ವಲ್ಪಮಟ್ಟಿಗೆ ಸಹಜ ಸ್ಥಿತಿಗೆ ಮರಳಿರುವುದರಿಂದ ಧೈರ್ಯ ಮಾಡಿ ಸಿನಿಮಾ ಬಿಡುಗಡೆಗೆ ಮುಂದಾಗಿದ್ದೇವೆ. ಜನ ಇಷ್ಟಪಟ್ಟು ಸಿನಿಮಾ ವೀಕ್ಷಣೆಗೆ ಬರುತ್ತಾರೆ. ನನಗೆ ನೀಡಿದ ಪ್ರೋತ್ಸಾಹವನ್ನು ಮಗನಿಗೂ ಪ್ರೇಕ್ಷಕರು ನೀಡುವ ದೊಡ್ಡ ವಿಶ್ವಾಸ ಇದೆ ಎಂದು ತಿಳಿಸಿದರು.
ನಟ ಸುನಿಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ ಮಾತನಾಡಿ, ’ತಡಪ್’ ಸಿನಿಮಾ ತೆಲುಗಿನ ‘ಆರ್ಎಕ್ಸ್ 100’ ಸಿನಿಮಾದ ರಿಮೇಕ್. ಸಿನಿಮಾ ಕ್ಷೇತ್ರಕ್ಕೆ ಬರುವುದಕ್ಕೆ ತಂದೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಉತ್ತಮ ಚಿತ್ರಕತೆ ಇರುವ ’ತಡಪ್’ ಸಿನಿಮಾವನ್ನು ಒಪ್ಪಿಕೊಂಡಿದ್ದೇನೆ. ಸಿನಿಮಾ ಕ್ಷೇತ್ರಕ್ಕೆ ಬರಬೇಕು ಎಂಬ ಆಸೆಯಿಂದ ಸುದೀರ್ಘ ಅವಧಿ ತರಬೇತಿ ಪಡೆದಿರುವೆ. ಉತ್ತಮ ನೃತ್ಯಪಟುಗಳಿಂದಲೂ ತರಬೇತಿ ಪಡೆದಿದ್ದೇನೆ. ತಡಪ್ ಸಿನಿಮಾ ಪ್ರೇಕ್ಷಕರಿಗೆ ಮೆಚ್ಚುಗೆ ಆಗಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
Discussion about this post