ಬೆಂಗಳೂರು, ಜೂ.05: ಹಾಸಿಗೆ ಹಿಡಿದಿರುವ ಮೃತನ ಅಜ್ಜಿಯನ್ನು ನೋಡಿಕೊಳ್ಳುವ ವಿಚಾರಕ್ಕೆ ಅಪ್ಪ- ಅಮ್ಮನ ನಡುವೆ ಜಗಳ ಶುರುವಾಗಿದ್ದು, ಬಿಡಿಸಲು ಹೋದ ಮಗ ಆಕಸ್ಮಿಕವಾಗಿ ಕೊಲೆಯಾದ ಘಟನೆ ಬೆಂಗಳೂರಿನ ಜರಗನಹಳ್ಳಿ ಯಲ್ಲಿ ಇಂದು(ಜೂ.05) ಬೆಳಿಗ್ಗೆ ನಡೆದಿದೆ. ಯಶವಂತ್ (23) ತಂದೆಯಿಂದಲೇ ಕೊಲೆಯಾದ ಪುತ್ರ. ಇತ ಇನ್ಫೋಸಿಸ್ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಈ ಕುರಿತು ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತಮ ವ್ಯಕ್ತತ್ವ ಹೊಂದಿದ್ದ ಮೃತ ಯಶವಂತ. ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತ, ತಂದೆ ಮಾಡಿದ್ದ ಸಾಲವನ್ನು ತೀರಿಸುತ್ತಿದ್ದ. ಹೀಗಿರುವಾಗ ಆತನ ಅಜ್ಜಿ ಹಾಸಿಗೆ ಹಿಡಿದಿದ್ದಾರೆ. ಆಕೆಯನ್ನು ನೋಡಿಕೊಳ್ಳುವ ವಿಚಾರಕ್ಕೆ ತಂದೆ-ತಾಯಿ ನಡುವೆ ಆಗಾಗ ಜಗಳ ಆಗುತ್ತಿತ್ತು. ಬೆಳಗ್ಗೆಯೂ ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಜಗಳ ಬಿಡಿಸಲು ಹೋದ ಮಗನನ್ನು ಹೆದರಿಸಲು ತಂದೆ ಅಡುಗೆ ಮನೆಯಿಂದ ಚಾಕು ತಂದು ಇರಿಯಲು ಹೋಗಿದ್ದ. ಆದರೆ, ಆಕಸ್ಮಾತಾಗಿ ಚಾಕು ಯುವಕನ ಎದೆಗೆ ಆಳವಾಗಿ ನಾಟಿ ಪ್ರಾಣ ಹೋಗಿದೆ. ಸದ್ಯ ಆರೋಪಿ ತಂದೆ ಬಸವರಾಜುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಘಟನೆ ಕುರಿತು ದಕ್ಷಿಣ ವಿಭಾಗ ಡಿಸಿಪಿ ಲೊಕೇಶ್ ಜಗಲಾಸರ್ ಮಾತನಾಡಿ, ‘ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಜರಗನಹಳ್ಳಿ 23 ವರ್ಷದ ಯುವಕನ ಕೊಲೆಯಾಗಿದೆ. ಮೃತನ ಅಜ್ಜಿಯನ್ನು ನೋಡಿಕೊಳ್ಳುವ ವಿಚಾರಕ್ಕೆ ತಂದೆ-ತಾಯಿ ನಡುವೆ ಆಗಾಗ ಗಲಾಟೆ ಆಗುತ್ತಿರುತ್ತೆ. ಇದೇ ಜಗಳ ಅತಿರೇಕಕ್ಕೆ ಹೋಗಿ ಗಂಡ- ಹೆಂಡತಿ ಹೊಡೆದಾಡಲು ಮುಂದಾಗಿದ್ದಾರೆ. ಆಗ ಮಗ ಇಬ್ಬರನ್ನು ಬಿಡಿಸಲು ಹೋಗಿದ್ದಾನೆ. ತಂದೆ ಮಗನ ಮಧ್ಯೆ ತಳ್ಳಾಟ ನುಕಾಟ ಆಗಿದೆ. ಈ ವೇಳೆ ತಂದೆ ಅಡುಗೆ ಮನೆಯಲ್ಲಿದ್ದ ಚಾಕು ತಂದು ಇರಿದಿದ್ದಾನೆ. ಆಸ್ಪತ್ರೆಗೆ ಹೋಗೋ ಮಾರ್ಗ ಮಧ್ಯೆ ಯಶವಂತ್ ಸಾವನ್ನಪ್ಪಿದ್ದಾನೆ. ಮೃತ ಯುವಕ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಎಂದು ಸ್ಪಷ್ಟಪಡಿಸಿದ್ದಾರೆ.
Discussion about this post