ಬೆಳಗಾವಿ: ‘ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ’ ಅಂದ್ರೆ ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮೇಲು. ಆಕೆಯ ಪ್ರೀತಿ, ಮಮತೆಗೆ ಯಾವುದೂ ಸರಿಸಾಟಿಯಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಕೋಮಾದಲ್ಲಿರುವ ತನ್ನ ಎಂಟು ವರ್ಷದ ಮಗನ ಪ್ರಾಣ ಉಳಿಸಲು ತಾಯಿಯೋರ್ವರು ದೇವರ ಮೊರೆ ಹೋಗಿರುವ ಘಟನೆ ಜಿಲ್ಲೆಯ ನಂದಗಡ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಂಬಾರ್ದ ಗ್ರಾಮದ ಶೈಲೇಶ್ ಕೃಷ್ಣಾ ಸೂತ್ರವಿ ಎಂಬ ಬಾಲಕ ಮೆದುಳಿನ ಸಮಸ್ಯೆಯಿಂದಾಗಿ ಕೋಮಾದಲಿದ್ದಾನೆ. ಶೈಲೇಶ್ನ ತಾಯಿ ಖಾನಾಪೂರ ತಾಲೂಕಿನ ನಂದಗಡ ಗ್ರಾಮದಲ್ಲಿರುವ ಪ್ರಸಿದ್ಧ ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ಆಗಮಿಸಿ ಮಗನ ಪ್ರಾಣ ಉಳಿಸುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಬಾಲಕ ಶೈಲೇಶ್ ಕೋಮಾ ಸ್ಥಿತಿಗೆ ತಲುಪಿದ್ದಾನೆ. ಬಳಿಕ ಆತನಿಗೆ ಪಾರ್ಶ್ವವಾಯು ಆಗಿದ್ದರಿಂದ ಆತನ ದೇಹ ಸ್ವಾಧೀನ ಕಳೆದುಕೊಂಡಿದೆ. ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಖ್ಯಾತ ವೈದ್ಯರ ಬಳಿ ಶೈಲೇಶ್ಗೆ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ವೈದ್ಯರ ಪ್ರಯತ್ನ ಕೈಗೂಡದಿರುವ ಹಿನ್ನೆಲೆ ಹೆತ್ತಮ್ಮ ದೇವರ ಮೊರೆ ಹೋಗಿದ್ದಾರೆ. ಅವರ ಪ್ರಾರ್ಥನೆ ಫಲಿಸಿ ಬಾಲಕ ಬದುಕುಳಿಯಲಿ ಎಂದು ಹಾರೈಸೋಣ..
Discussion about this post