ಮಂಗಳೂರು: ಸುಳ್ಯ ತಾಲ್ಲೂಕು ಕಳಂಜದಲ್ಲಿರುವ ಮಸೂದ್ ಮನೆಗೆ ಭೇಟಿ ನೀಡಿದ ಎಚ್.ಡಿ.ಕುಮಾರಸ್ವಾಮಿ ಅವರು ಮಸೂದ್ ತಾಯಿಗೆ ₹ 5 ಲಕ್ಷ ಮೊತ್ತದ ಚೆಕ್ ನೀಡಿದರು. ‘ಹತ್ಯೆ ಪ್ರಕರಣಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳ ಮುಖಂಡರು, ಸಂಘಟನೆಗಳ ಪ್ರಮುಖರ ಮಕ್ಕಳು ಬಲಿಯಾಗುವುದಿಲ್ಲ. ಬದಲಾಗಿ, ಕಾರ್ಮಿಕರ ಮಕ್ಕಳು, ಜನಸಾಮಾನ್ಯರ ಮಕ್ಕಳು ಬಲಿಯಾಗುತ್ತಿದ್ದಾರೆ. ಈ ಹಿಂದೆ ನಡೆದಿರುವ ಹತ್ಯೆ ಪ್ರಕರಣಗಳಲ್ಲೂ ಆರೋಪಿಗಳಿಗೆ ಕನಿಷ್ಠ ಪ್ರಮಾಣದ ಶಿಕ್ಷೆ ಆಗಿದೆ. ಕಾಟಾಚಾರಕ್ಕೆ ಯಾರನ್ನೋ ಬಂಧಿಸುವ ಕೆಲಸ ಆಗಬಾರದು. ನೈಜ ಆರೋಪಿಗಳನ್ನು ಬಂಧಿಸಿ, ಕರಾವಳಿಯಲ್ಲಿ ಶಾಂತಿ ಮರು ಸ್ಥಾಪಿಸಬೇಕು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರಾವಳಿಯಲ್ಲಿ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಹಿಂದೂ– ಮುಸ್ಲಿಮರ ನಡುವೆ ಕಂದಕ ಸೃಷ್ಟಿಸಿವೆ. ಬೇರೆ ಬೇರೆ ಘಟನೆಗಳು ನಡೆದಾಗ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರೂ, ಹತ್ಯೆ ನಡೆಸಿರುವ ಆರೋಪಿಗಳಿಗೆ ಯಾವ ಹಂತದ ಶಿಕ್ಷೆಯಾಗಿದೆ’ ಎಂದು ಪ್ರಶ್ನಿಸಿದರು. ‘ಕಳೆದ 15 ದಿನಗಳಲ್ಲಿ ಹತ್ಯೆಯಾಗಿರುವ ಮೂವರು ಯುವಕರ ಮನೆಗೆ ಭೇಟಿ ನೀಡಿದ್ದೇನೆ. ‘ಹಂತಕರಿಗೆ ಕಠಿಣ ಶಿಕ್ಷೆ ಆಗಬೇಕು, ನಮ್ಮ ಮನೆ ಮಕ್ಕಳಂತೆ ಬೇರೆಯವರಿಗೆ ಈ ರೀತಿ ಆಗಬಾರದು’ ಎಂಬುದು ಮಕ್ಕಳನ್ನು ಕಳೆದುಕೊಂಡಿರುವ ಮೂವರೂ ಪಾಲಕರ ಆಗ್ರಹವಾಗಿದೆ. ಪಾಲಕರ ಜತೆ ವಿವರವಾಗಿ ಚರ್ಚಿಸಿದ್ದು, ಈ ವಿಷಯವನ್ನು ಸದನದಲ್ಲೂ ಪ್ರಸ್ತಾಪಿಸುತ್ತೇನೆ’ ಎಂದರು. ‘ಆಡಳಿತ ಪಕ್ಷದ ಶಾಸಕರೊಬ್ಬರು ‘ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ಸುಮ್ಮನಿರಲು ಸಾಧ್ಯವಿಲ್ಲ’ ಎನ್ನುತ್ತಾರೆ. ಶಾಸಕರೇ ಹೀಗೆ ಹೇಳಿಕೆ ನೀಡಿದರೆ, ಪೊಲೀಸರು ಹೇಗೆ ಸ್ವತಂತ್ರವಾಗಿ ತನಿಖೆ ಮಾಡಲು ಸಾಧ್ಯವಿದೆ? ಘಟನೆ ನಡೆದು ಅನೇಕ ದಿನಗಳ ಮೇಲೆ ಡಿಜಿಪಿ ಇಲ್ಲಿ ಬಂದು ಹೋಗಿದ್ದಾರೆ. ಸಂತ್ರಸ್ತರ ಕುಟುಂಬವನ್ನೂ ಭೇಟಿ ಮಾಡದೆ, ತರಾತುರಿಯಲ್ಲಿ ಬಂದು ಹೋಗುವ ಕೆಲಸ ಏನಿತ್ತು’ ಎಂದು ವಾಗ್ದಾಳಿ ನಡೆಸಿದರು.
Discover more from Coastal Times Kannada
Subscribe to get the latest posts sent to your email.







Discussion about this post