ಮಂಗಳೂರು: ‘ಸಹಕಾರಿ ಬ್ಯಾಂಕ್ಗಳು ಗ್ರಾಹಕರ ಬೇಡಿಕೆಗೆ ತಕ್ಷಣ ಸ್ಪಂದಿಸುತ್ತವೆ. ಗ್ರಾಹಕರ ವಿಶ್ವಾಸವೇ ಸಹಕಾರಿ ಬ್ಯಾಂಕ್ಗಳ ಏಳಿಗೆಯ ಹಿಂದಿನ ಪ್ರೇರಕ ಶಕ್ತಿ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. ಮಂಗಳೂರಿನ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ಳಿಹಬ್ಬ ಸಂಭ್ರಮಾಚರಣೆ ಅಂಗವಾಗಿ ಜೆಪ್ಪು ಮೋರ್ಗನ್ಸ್ಗೇಟ್ ರಾಮಕ್ಷತ್ರಿಯ ಮಂದಿರದ ಬಳಿ ಸುಮಾರು ರೂ.8 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಇಂದು ದೇಶದಲ್ಲಿ ವಾಣಿಜ್ಯ ಬ್ಯಾಂಕ್ಗಳು ಸಂಕುಚಿತಗೊಳ್ಳುತ್ತಿವೆ, ಮತ್ತೊಂದೆಡೆ ಸಹಕಾರಿ ಬ್ಯಾಂಕ್ಗಳು ವಿಕಸನಗೊಳ್ಳುತ್ತಿವೆ. ವಾಣಿಜ್ಯ ಬ್ಯಾಂಕ್ಗಳಲ್ಲಿ ಕನ್ನಡೇತರರೇ ತುಂಬಿರುವುದರ ಫಲವಾಗಿ ಜನಸಾಮ್ಯಾನರು ಗ್ರಾಹಕ ಸ್ನೇಹಿಯಾಗಿರುವ ಸಹಕಾರಿ ಬ್ಯಾಂಕ್ಗಳತ್ತ ಮುಖಮಾಡುತ್ತಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಬ್ಯಾಂಕಿಂಗ್ ಸೇವೆ ನೀಡುವುದು ಸಹಕಾರಿ ಕ್ಷೇತ್ರದ ಗುರಿ’ ಎಂದು ಹೇಳಿದರು.

ಮೇಯರ್ ಜಯಾನಂದ ಅಂಚನ್ ದೀಪ ಬೆಳಗಿಸಿ, ಈ ಸಹಕಾರಿ ಸಂಘವು ದುಡಿಯುವ ವರ್ಗಕ್ಕೆ ಆಶಾಕಿರಣವಾಗಿದೆ. ನಾನೂ ಈ ಸಂಘದ ಗ್ರಾಹಕನಾಗಿದ್ದು, ಸಾಲ ಪಡೆದು ಅಭಿವೃದ್ಧಿಗಾಗಿ ಬಳಸಿಕೊಂಡಿದ್ದೇವೆ. ಬಡಕುಟುಂಬಗಳಿಗೆ ಕಡಿಮೆ ಶ್ಯೂರಿಟಿಯಲ್ಲಿ ಸಾಲ ನೀಡುವ ಮೂಲಕ ಅವರ ಕಣ್ಣೀರು ಒರೆಸುವ ಕೆಲಸವನ್ನು ಸಂಘ ಮಾಡುತ್ತಿದೆ ಎಂದು ಹೇಳಿದರು.

ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ. ಶಾಂತಾರಾಮ ಶೆಟ್ಟಿ ಅವರು ಸೇಫ್ ಲಾಕರ್ ಅನ್ನು ಉದ್ಘಾಟಿಸಿ, ‘ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ವಾಣಿಜ್ಯ ಬ್ಯಾಂಕ್ಗಳು ಜನ್ಮತಾಳಿ ಜನರಲ್ಲಿ ಆರ್ಥಿಕ ಶಿಸ್ತನ್ನು ಮೂಡಿಸಿವೆ. ಇಷ್ಟೊಂದು ಬ್ಯಾಂಕ್ಗಳು ಒಂದೇ ಜಿಲ್ಲೆಯಲ್ಲಿ ಹುಟ್ಟಿಕೊಂಡಿರುವ ಉದಾಹರಣೆ ಇಲ್ಲ. ಇಂತಹ ಜಿಲ್ಲೆಯಲ್ಲಿ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘವು ದುಡಿಯುವ ವರ್ಗದ ಬದುಕು ಕಟ್ಟುವ ಕೆಲಸ ಮಾಡುತ್ತಿದೆ’ ಎಂದರು.

ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಜೆ. ಪಾಲೇಮಾರ್ ಅಧ್ಯಕ್ಷತೆ ವಹಿಸಿ, ‘ಸಂಘಕ್ಕೆ ಸುಸಜ್ಜಿತ ಕಟ್ಟಡ ಬೇಕೆಂಬುದು ಬಹುವರ್ಷದ ನಮ್ಮ ಕನಸಾಗಿತ್ತು. ಬೆಳ್ಳಿಹಬ್ಬದ ಸಂದರ್ಭದಲ್ಲೇ ಅದು ಈಡೇರಿದ್ದು ಸಂತಸ ತಂದಿದೆ. ಈ ಕಟ್ಟಡಕ್ಕೆ ಸದಸ್ಯರು ಶೇ 20 ಡಿವಿಡೆಂಡ್ ನೀಡಿರುವುದು ವಿಶೇಷ’ ಎಂದರು.

ಡಿಸಿಸಿ ಬ್ಯಾಂಕ್ನಿಂದ ಸಂಘಕ್ಕೆ ರೂ. 5 ಲಕ್ಷ ದೇಣಿಗೆಯನ್ನು ಎಂ.ಎನ್. ರಾಜೇಂದ್ರ ಕುಮಾರ್ ನೀಡಿದರು. ಅವರನ್ನು ಸನ್ಮಾನಿಸಲಾಯಿತು. ಕಟ್ಟಡ ನಿರ್ಮಾಣ ಮಾಡಿದ ಪ್ರವೀಣ್, ಸಂಘದ ಸ್ಥಾಪಕ ಪ್ರವರ್ತಕರನ್ನು, ಠೇವಣಿದಾರರನ್ನು ಗೌರವಿಸಲಾಯಿತು.
3 ಲಕ್ಷ ಬಂಡವಾಳದಿಂದ 400 ಕೋಟಿ ವ್ಯವಹಾರ : 1997ರಲ್ಲಿ ಕೇವಲ 3 ಲಕ್ಷ ರೂ. ಮೂಲ ಬಂಡವಾಳದೊಂದಿಗೆ 9 ಜನ ನಿರ್ದೇಶಕರು ಮತ್ತು 800 ಶೇರುದಾರರೊಂದಿಗೆ ಆರಂಭಗೊಂಡ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ಇಂದು 2.8 ರೂ. ಕೋಟಿ ಬಂಡವಾಳದೊಂದಿಗೆ ಸುಮಾರು 5500ಕ್ಕೂ ಹೆಚ್ಚು ಶೇರುದಾರರನ್ನು ಹೊಂದಿದ್ದು, ವಾರ್ಷಿಕವಾಗಿ ಸುಮಾರು ರೂ. 400 ಕೋಟಿಗೂ ಮಿಕ್ಕಿ ವ್ಯವಹಾರವನ್ನು ನಡೆಸುವ ಮೂಲಕ ಸಮಾಜಕ್ಕೆ ಹಲವು ಉತ್ತಮ ಸೇವಾ ಸೌಲಭ್ಯಗಳು ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಬಡವರ್ಗದವರಿಗೆ ಸಹಾಯ ಹಸ್ತ ಚಾಚುವ ಮೂಲಕ ಸಂಘವು ಉನ್ನತ ಮಟ್ಟಕ್ಕೇರಲು ಸಾಧ್ಯವಾಗಿದೆ. ಸಂಘವು 2022ರ ಸಾಲಿನಲ್ಲಿ 1 ಕೋಟಿಗೂ ಮಿಕ್ಕಿ ಲಾಭ ಪಡೆದಿದ್ದು, ಗ್ರಾಹಕರಿಗೆ ಶೇ. 20 ಡಿವಿಡೆಂಡ್ ನೀಡಿದೆ. ಸಂಘ ಸ್ಥಾಪನೆಯಾದ ವರ್ಷದಿಂದ ಈ ವರೆಗೆ ಎ ಗ್ರೇಡ್ ಮಾನ್ಯತೆ ಪಡೆದಿರುತ್ತದೆ.
ಸಂಘದ ನಿರ್ದೇಶಕರಾದ ರಾಮಚಂದ್ರ ಕೆ.ಎಸ್, ಪಿ. ಬಾಬು, ಡಾ.ಜೆ. ರವೀಂದ್ರ, ಕೆ.ಎಸ್. ರಂಜನ್, ವಾರಿಜ ಕೆ, ಡಾ.ಎಚ್. ಪ್ರಭಾಕರ್, ಡಾ.ಮಂಜುಳಾ ಎ. ರಾವ್, ಕೆ. ರವೀಂದ್ರ, ಜೈರಾಜ್ ಕೆ, ಸಿಇಒ ಶಿವಪ್ರಸಾದ್ ಪಿ.ಎ. ಇದ್ದರು.
Discover more from Coastal Times Kannada
Subscribe to get the latest posts sent to your email.








Discussion about this post