ಲಕ್ನೋ : ಸಾವನ್ನೂ ಲೆಕ್ಕಿಸದೆ ರೀಲ್ಸ್ ಮಾಡುವ ಹುಚ್ಚು ಕೆಲವರದ್ದು. ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್ ಮಾಡಲು ಹೋಗಿ ಎಷ್ಟೋ ಜನರು ಪ್ರಾಣ ಕಳೆದುಕೊಂಡ ಘಟನೆಗಳು ನಡೆದಿವೆ. ಅಂಥದ್ದೇ ಮತ್ತೊಂದು ಪ್ರಕರಣ ಶನಿವಾರ (ಮೇ 2) ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿನ ತೀವ್ರ ಶಿಥಿಲಗೊಂಡಿದ್ದ ನೀರಿನ ಟ್ಯಾಂಕರ್ ಮೇಲೆ ರೀಲ್ಸ್ ಮಾಡಲು ಐವರು ಯುವಕರು ತೆರಳುವಾಗ ಏಣಿ ಕುಸಿದುಬಿದ್ದು ಓರ್ವ ಸಾವಿಗೀಡಾದರೆ, ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಇನ್ನಿಬ್ಬರು ಹೇಗೋ ಪಾರಾಗಿ ನೀರಿನ ಟ್ಯಾಂಕರ್ ಮೇಲೆಯೇ 16 ಗಂಟೆ ಸಿಲುಕಿದ್ದರು. ಕೊನೆಗೆ ವಾಯುಪಡೆಯ ನೆರವಿನಿಂದ ಅವರನ್ನು ರಕ್ಷಿಸಲಾಗಿದೆ.
ಟ್ಯಾಂಕರ್ ಹತ್ತುವಾಗ ಕುಸಿದ ಏಣಿ: ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ರೀಲ್ಸ್ ಚಿತ್ರೀಕರಿಸಲೆಂದು ಸಿದ್ಧಾರ್ಥ್, ಶನಿ, ಗೋಲು, ಪವನ್ ಮತ್ತು ಕಲ್ಲು ಎಂಬ ಐವರು ಊರಲ್ಲಿನ ಹಳೆಯ ಮತ್ತು ತೀವ್ರ ಶಿಥಿಲಗೊಂಡಿದ್ದ ನೀರಿನ ಟ್ಯಾಂಕ್ ಅನ್ನು ಹತ್ತಿದ್ದರು. ಅವರು ಹತ್ತುತ್ತಿರುವಾಗ, ಶಿಥಿಲಗೊಂಡ ಟ್ಯಾಂಕರ್ನ ಮೆಟ್ಟಿಲುಗಳು ಇದ್ದಕ್ಕಿದ್ದಂತೆ ಕುಸಿದು ಬಿದ್ದಿವೆ.
ಇದರಿಂದ, ಸಿದ್ಧಾರ್ಥ್, ಶನಿ ಮತ್ತು ಗೋಲು ಮೇಲಿನಿಂದ ಬಿದ್ದಿದ್ದಾರೆ. ದೊಡ್ಡ ಗಾತ್ರದ ಸಿಮೆಂಟ್ ತುಂಡುಗಳು ಅವರ ಮೇಲೆ ಬಿದ್ದ ಕಾರಣ ಸಿದ್ದಾರ್ಥ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಅದೃಷ್ಟವಶಾತ್ ಪವನ್ ಮತ್ತು ಕಲ್ಲು ಎಂಬಿಬ್ಬರು ಟ್ಯಾಂಕ್ನ ಮೇಲ್ಭಾಗವನ್ನು ತಲುಪಿದ್ದಾರೆ. ತೀವ್ರ ಗಾಯಗೊಂಡ ಶನಿ ಮತ್ತು ಗೋಲು ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇಳಿಯಲು ಮಾರ್ಗವಿಲ್ಲದೆ 16 ಗಂಟೆ ಸಿಲುಕಿದ್ದರು: ಟ್ಯಾಂಕರ್ ಹತ್ತಿದ್ದ ಇಬ್ಬರು ಯುವಕರು ಇಳಿಯಲು ಮಾರ್ಗವಿಲ್ಲದೇ ಅಲ್ಲಿಯೇ ಸಿಲುಕಿದ್ದರು. ಈ ಕುರಿತಂತೆ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್ಡಿಆರ್ಎಫ್) ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿತು. ಆದರೆ, ಹೈಡ್ರಾಲಿಕ್ ಲಿಫ್ಟ್ ಬಳಸಿದರೂ, ಟ್ಯಾಂಕರ್ ಎತ್ತರವಾಗಿದ್ದ ಕಾರಣ, ಅಲ್ಲಿದ್ದ ಯುವಕರನ್ನು ಕರೆತರಲು ಸಾಧ್ಯವಾಗಿಲ್ಲ. ಇದರಿಂದ ರಕ್ಷಣಾ ಕಾರ್ಯಾಚರಣೆ ವಿಫಲವಾಗಿತ್ತು.
ಘಟನೆಯ ಕುರಿತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಯಿತು. ಬಳಿಕ, ಅಧಿಕಾರಿಗಳು ಭಾರತೀಯ ವಾಯುಪಡೆಯ ನೆರವು ಕೋರಿದ್ದರು. ಸೇನಾಪಡೆಯು ತನ್ನ Mi-17 V5 ಹೆಲಿಕಾಪ್ಟರ್ ಅನ್ನು ಬಳಸಿ ಇಬ್ಬರು ಯುವಕರನ್ನು ಟ್ಯಾಂಕರ್ನಿಂದ ಯಶಸ್ವಿಯಾಗಿ ರಕ್ಷಿಸಿದೆ. ಸುಮಾರು 16 ಗಂಟೆಗಳ ಕಾಲ ಇಬ್ಬರು ಅಲ್ಲಿಯೇ ಅನ್ನ, ನೀರಿಲ್ಲದೆ ಸಿಲುಕಿದ್ದರು. ಭಾರತೀಯ ವಾಯುಪಡೆಯು ತನ್ನ ಎಕ್ಸ್ ಖಾತೆಯಲ್ಲಿ ಕಾರ್ಯಾಚರಣೆಯ ದೃಶ್ಯಗಳನ್ನು ಹಂಚಿಕೊಂಡಿದೆ.
Discover more from Coastal Times Kannada
Subscribe to get the latest posts sent to your email.







Discussion about this post