ಮಂಗಳೂರು ಜುಲೈ 4: ರಾಜ್ಯ ಹಲವೆಡೆ ವರುಣ ಅರ್ಭಟ ಜೋರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕ ಮಳೆಯಾಗುತ್ತಿದ್ದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಜಿಲ್ಲೆಯ ಐದು ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮಂಗಳೂರು, ಉಳ್ಳಾಲ, ಮುಲ್ಕಿ, ಬಂಟ್ವಾಳ ಹಾಗೂ ಮೂಡಬಿದಿರೆ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಆದೇಶ ಹೊರಡಿಸಿದ್ದಾರೆ. ಉಳಿದೆಡೆ ತಹಶೀಲ್ದಾರ್ ಗಳಿಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಅಧಿಕಾರವಿದ್ದು, ಮಳೆ ಪರಿಸ್ಥಿತಿ ನೋಡಿಕೊಂಡು ಆಯಾ ತಾಲೂಕು ತಹಶಿಲ್ದಾರ್ ಗಳು ರಜೆ ಘೋಷಿಸಲು ಸೂಚನೆ ನೀಡಲಾಗಿದೆ.
ನಿನ್ನೆ ಸಂಜೆ ಸುಮಾರು ಎರಡು ಗಂಟೆಗಳ ಕಾಲ ಸುರಿದ ಭಾರೀ ಮಳೆಗೆ ಜನ ಜೀವನವವೇ ಅಸ್ತವ್ಯಸ್ತವಾಗಿದೆ. ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಪರದಾಡುವಂತಾಗಿದೆ. ಇದರಿಂದಾಗಿ ಬೆಳ್ಳಂಬೆಳಿಗ್ಗೆ ಕೆಲಸಕ್ಕೆ ತೆರಳುವ ಜನ ಹೈರಾಣಾಗಿದ್ದು ಕಂಡುಬಂದಿದೆ. ನಗರದ ಪಂಪ್ವೆಲ್ ಸರ್ಕಲ್ನಲ್ಲಿ ಪಕ್ಕದ ಚರಂಡಿ ತುಂಬಿ ರಸ್ತೆ ಜಲಾವೃತವಾಗಿತ್ತು. ಸುಮಾರು ಅರ್ಧ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ಕಿಲೋ ಮೀಟರ್ ಗಟ್ಟಲೆ ವಾಹನಗಳು ನಿಂತಿದ್ದವು.
ಪಂಪ್ವೆಲ್ ಸರ್ಕಲ್ನಲ್ಲಿ ಈ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರತೀ ಬಾರಿ ಮಳೆಯಾದಾಗಲೆಲ್ಲ ಇಲ್ಲಿ ಇದೇ ಕಥೆ. ಪಂಪ್ವೆಲ್ ಸರ್ಕಲ್ನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಫ್ಲೈಓವರ್ ಆದಾಗಿನಿಂದ ಈ ಸಮಸ್ಯೆ ಇದೆ. ಫ್ಲೈಓವರ್ನ ಅಡಿ ಭಾಗದಲ್ಲಿ ನಗರಕ್ಕೆ ಹೋಗೋ ವಾಹನಗಳಿಗೆ ರಸ್ತೆಯಿದ್ದು ಅಲ್ಲೇ ಸಮೀಪದಲ್ಲಿ ಚರಂಡಿ ಇದೆ. ಈ ಚರಂಡಿಯ ಒಂದು ಭಾಗ ಎತ್ತರವಿದ್ದು ಇನ್ನೊಂದು ಭಾಗ ಕೆಳಗಿದೆ. ಹೀಗಾಗಿ ನೀರು ಹರಿದು ಹೋಗಬೇಕಿದ್ದ ಭಾಗದಲ್ಲಿ ಎತ್ತರ ಇರೋದ್ರಿಂದ ನೀರು ರಸ್ತೆಗೆ ನುಗ್ಗಿ ಬರುತ್ತದೆ. ಕಳೆದ ಐದಾರು ವರ್ಷದಿಂದ ಈ ಸಮಸ್ಯೆ ಇದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕೂತಿದ್ದಾರೆ. ಹೀಗಾಗಿ ಈ ಸಮಸ್ಯೆ ಪ್ರತೀ ವರ್ಷದ ಮೊದಲ ಮಳೆಗೆ ಇದ್ದೇ ಇರುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನ ಆಗಿಲ್ಲ. ಹೀಗಾಗಿ ಸ್ಥಳೀಯರು ಅಧಿಕಾರಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post