ಉಳ್ಳಾಲ: ಕಲ್ಲಾಪು ಬಳಿ ಮೀನು ಮಾರಾಟ ನಡೆಸುತ್ತಿರುವ ವ್ಯಾಪಾರಿಯನ್ನು ತಡೆದ ಮೂವರು ಮುಸುಕುಧಾರಿ ತಂಡ ತಲವಾರಿನಿಂದ ಹಲ್ಲೆ ಮಾಡಿದ್ದು, ಟೆಂಪೋದಲ್ಲಿದ್ದ ₹2 ಲಕ್ಷ ದರೋಡೆ ಮಾಡಿದೆ.
ನಗರದ ನೇತ್ರಾವತಿ ಸೇತುವೆ ಸಮೀಪ ಶನಿವಾರ ನಸುಕಿನ ಜಾವ ಈ ಘಟನೆ ನಡೆದಿದೆ. ಉಳ್ಳಾಲ ಮುಕ್ಕಚ್ಚೇರಿ ಹೈದರಾಲಿ ರಸ್ತೆ ನಿವಾಸಿ ಮುಸ್ತಾಫ ದರೋಡೆಗೆ ಒಳಗಾದವರು.
ಉಳ್ಳಾಲ ಮುಕ್ಕಚ್ಚೇರಿಯ ಮೀನಿನ ವ್ಯಾಪಾರಿ ಮುಸ್ತಫ(47) ಹಲ್ಲೆಗೊಳಗಾದವರು. ತೊಕ್ಕೊಟ್ಟು ಬಳಿಯ ಕಲ್ಲಾಪುವಿನಲ್ಲಿ ಮೀನು ವ್ಯಾಪಾರ ನಡೆಸುತ್ತಿರುವ ಮುಸ್ತಫ ಎಂದಿನಂತೆ ಇಂದು ಮುಂಜಾನೆ ತನ್ನ ಟೆಂಪೊದಲ್ಲಿ ದಕ್ಕೆಗೆ ಮೀನು ಖರೀದಿಸಲೆಂದು ಹೊರಟಿದ್ದರು. ಜೊತೆಗೆ ಮಾಸ್ತಿಕಟ್ಟೆಯ ಮೂಸ ಎಂಬವರು ಕೂಡಾ ಇದ್ದರು. ಟೆಂಪೊ ಆಡಂಕುದ್ರು ತಲುಪುತ್ತಿದ್ದಂತೆಯೇ ಹಿಂದಿನಿಂದ ಧಾವಿಸಿ ಬಂದ ಕೆಂಪು ಬಣ್ಣದ ಕಾರೊಂದು ಟೆಂಪೊವನ್ನು ಅಡ್ಡಗಟ್ಟಿದೆ. ಕಾರಿನಲ್ಲಿದ್ದ ಮೂವರು ಮುಸಕುಧಾರಿಗಳ ಪೈಕಿ ಇಬ್ಬರು ಕೆಳಗಿಳಿದು ಹಣದ ಬ್ಯಾಗ್ ನೀಡುವಂತೆ ಬೆದರಿಸಿದರು. ಕೊಡಲು ನಿರಾಕರಿಸಿದ ಮುಸ್ತಫಾ ಟೆಂಪೊದಿಂದ ಕೆಳಗಿಳಿಯಲು ಮುಂದಾದಾಗ ದುಷ್ಕರ್ಮಿಗಳು ಅವರತ್ತ ತಲವಾರು ಬೀಸಿದ್ದಾರೆ. ಆಗ ಕೈಯಿಂದ ತಲವಾರನ್ನು ತಡೆದಾಗ ಎರಡೂ ಕೈಗಳಿಗೂ ಗಾಯಗಳಾಗಿವೆ. ಇದೇ ಸಂದರ್ಭ ಮುಸ್ತಫರಲ್ಲಿದ್ದ 2 ಲಕ್ಷ 15 ಸಾವಿರ ರೂಪಾಯಿಗಳನ್ನ ದರೋಡೆಕೋರರು ದೋಚಿ ಪರಾರಿಯಾಗಿದ್ದಾರೆ ಎಂದು ಮುಸ್ತಫ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಗಾಯಾಳು ಮುಸ್ತಾಫ ಅವರನ್ನು ರಸ್ತೆ ಮೂಲಕ ತೆರಳುತ್ತಿದ್ದ ವ್ಯಕ್ತಿಯೊಬ್ಬರು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎಸಿಪಿ ದಿನಕರ್ ಶೆಟ್ಟಿ ನೇತೃತ್ಬದ ಪೊಲೀಸ್ ತಂಡ ತನಿಖೆ ಆರಂಭಿಸಿದೆ.
Discussion about this post