ಮಂಗಳೂರು, ಡಿ.6: ನಗರದ ಪಂಪ್ವೆಲ್ ರಸ್ತೆ ಬದಿ ಸುಮಾರು 10 ಲಕ್ಷರೂ. ಮೊತ್ತದ ಬಂಡಲ್ ಬಿದ್ದಿತ್ತು. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ, ಆತನ ಕುಡಿತದ ಚಟದಿಂದ ಅರ್ಧ ಗಂಟೆಯಲ್ಲೇ ಅಷ್ಟೂ ಹಣ ಪೊಲೀಸರ ಪಾಲಾಯಿತು. ಘಟನೆ ನಡೆದು ವಾರ ಕಳೆದರೂ ಇನ್ನೂ ಪ್ರಕರಣ ಬೆಳಕಿಗೆ ಬಂದಿಲ್ಲ. ಪೊಲೀಸರ ಖಜಾನೆಯಲ್ಲಿ ಹಣ ಭದ್ರವಾಗಿದೆ. ಕನ್ಯಾಕುಮಾರಿ ಮೂಲದ ಶಿವರಾಜ್ (49) ಮೆಕ್ಯಾನಿಕ್ ಆಗಿದ್ದಾರೆ. ಬೋಂದೆಲ್ನ ಕೃಷ್ಣನಗರದಲ್ಲಿ ಮನೆ. ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಮಗಳು ಪಿಯು ವಿದ್ಯಾರ್ಥಿನಿ. ಕುಡಿತದ ದಾಸನಾಗಿರುವ ಶಿವರಾಜ್, ಮನೆಗೆ ಹೋಗುತ್ತಿಲ್ಲ. ಹೋಟೆಲ್ನಲ್ಲಿ ಚಹಾ, ತಿಂಡಿ, ಬಸ್ಗಳಲ್ಲೇ ನಿದ್ದೆ.

ನ.27ರಂದು ಪಂಪ್ವೆಲ್ ಮೇಲೇತುವೆ ಸಮೀಪದ ವೈನ್ಶಾಪ್ ಗೆ ಹೋಗಿ ಎಣ್ಣೆಹಾಕಿ ಪಕ್ಕದಲ್ಲಿ ಬೀಡಿ ಸೇದುತ್ತಾ ನಿಂತಿದ್ದರು. ಅಲ್ಲಿನ ಬೈಕ್ ಗಳ ಪಾರ್ಕಿಂಗ್ ಸ್ಥಳದಲ್ಲಿ ಒಂದು ಚೀಲ ಬಿದ್ದಿತ್ತು. ಅಲ್ಲೇ ಇದ್ದ ಕೂಲಿ ಕಾರ್ಮಿಕ ಚೀಲವನ್ನೂ ಹಾಗೂ ಶಿವರಾಜ್ನನ್ನೂ ದಿಟ್ಟಿಸುತ್ತಿದ್ದ. “ಏನು ನೋಡುತ್ತಿದ್ದಿಯಾ,” ಎಂದು ಕೇಳಿದಾಗ, ಆ ಚೀಲ ತೋರಿಸಿ, “ಏನೋ ಎಂದು ಉತ್ತರಿಸಿದ. ಚೀಲ ತೆರೆದಾಗ ಅಚ್ಚುಕಟ್ಟಾಗಿ ಕಟ್ಟಿದ್ದ ಬಂಡಲ್ ಇತ್ತು. ಮೆಲ್ಲಗೆ ಕವರ್ ಹರಿದಾಗ, 500 ರೂ. ನೋಟುಗಳಿರುವ ಬಂಡಲ್ ಕಂಡು ಇಬ್ಬರೂ ಹೌಹಾರಿದರು. ಚೀಲ ಎತ್ತಿಕೊಂಡು ಎರಡು ನೋಟು ಹೊರಗೆ ತೆಗೆದು, ಮತ್ತೆ ಅದೇ ವೈನ್ ಶಾಪ್ ಗೆ ಹೋಗಿ ಇಬ್ಬರೂ ಕುಡಿದು, ಹೊರಗೆ ಬಂದು ಉಳ್ಳಾಲ ಕಡೆಯ ಸರ್ವಿಸ್ ರಸ್ತೆಯಲ್ಲಿ ಅರ್ಧ ಕಿ.ಮೀ. ನಡೆದುಕೊಂಡು ಹೋದರು.
ಅಷ್ಟರಲ್ಲಿ ‘ನನಗೇನೂ ಕೊಡುವುದಿಲ್ಲವೇ’ ? ಎಂದು ಕೂಲಿ ಕಾರ್ಮಿಕ ಕೇಳಿದಾಗ, 500 ಮತ್ತು 2000 ರೂ. ಮುಖಬೆಲೆಯ ಒಂದು ಬಂಡಲ್ ಆತನಿಗೆ ಕೊಡಲಾಯಿತು, ಆದರೆ ಶಿವರಾಜ್ ತನಗೆ ಐಶ್ವರ್ಯ ಸಿಕ್ತು ಎಂದು ಹಣದ ಕಂತೆಯನ್ನು ಮನೆಗೊಯ್ಯುವ ಬದಲು ಮತ್ತೆ ಅದೇ ವೈನ್ ಶಾಪ್ ಹೋಗಿ ಎಣ್ಣೆ ಹೀರಲು ಆರಂಭಿಸಿದ್ದ. ಪ್ಯಾಕೆಟ್ ಒಳಗಿನಿಂದ ಎರಡು ಸಾವಿರದ ನೋಟನ್ನು ತೆಗೆದು ವೈನ್ ಶಾಪ್ ಸಿಬಂದಿ ಕೈಗಿತ್ತಿದ್ದ. ಆನಂತರ, ಹಣದ ಕಂತೆಯನ್ನು ಹಿಡ್ಕೊಂಡು ಅಲ್ಲಿಂದ ಹೊರ ಬಂದಿದ್ದ .

ಆದರೆ ಟೈಟ್ ಆಗಿದ್ದ ಬಡ ಕೂಲಿ ಕಾರ್ಮಿಕನ ಕೈಯಲ್ಲಿ ಹಣದ ಕಂತೆ ಇರುವುದನ್ನು ನೋಡಿದ ಅಲ್ಲಿದ್ದವರು ಯಾರೋ ಪೊಲೀಸರ ಗಮನಕ್ಕೆ ತಂದಿದ್ದರು. ಮಾಹಿತಿಯಂತೆ ಗಸ್ತುನಿರತ ಪೊಲೀಸರು ಸ್ಥಳಕ್ಕೆ ಬಂದು ಟೈಟ್ ಆಗಿ ನಿಂತುಕೊಂಡಿದ್ದ ಶಿವರಾಜ್ ಅವರನ್ನು ನೇರವಾಗಿ ಕಂಕನಾಡಿ ನಗರ ಠಾಣೆಗೆ ಕರೆದೊಯ್ದಿದ್ದರು. ಅಲ್ಲಿ ಹೋದರೂ, ಶಿವರಾಜ್ ತಲೆಗೆ ಹತ್ತಿದ್ದ ನಶೆ ಇಳಿಯುವಾಗ ರಾತ್ರಿಯಾಗಿತ್ತು. ಪೊಲೀಸರು ದುಡ್ಡಿನ ಕಂತೆ ಬಗ್ಗೆ ಕೇಳಿದಾಗ, ನನಗೆ ದಾರಿಯಲ್ಲಿ ಬಿದ್ದು ಸಿಕ್ಕಿದ್ದು ಎಂದು ಉತ್ತರಿಸಿದ್ದಾನೆ. ಅಲ್ಲದೆ, ಒಂದು ಬಂಡಲ್ ಒಬ್ಬಾತನಿಗೆ ಕೊಟ್ಟಿರುವ ವಿಷಯವನ್ನೂ ತಿಳಿಸಿದ್ದಾನೆ.
ಪೊಲೀಸರು ಮರುದಿನ ಶಿವರಾಜ್ ಜೊತೆಗೆ ಬಂದು ಪಂಪ್ವೆಲ್ ಬಳಿಯ ವೈನ್ ಶಾಪ್ ಇರುವಲ್ಲಿಯೇ ಇನ್ನೊಬ್ಬ ಕೂಲಿ ಕಾರ್ಮಿನನ್ನು ಹುಡುಕಾಡಿದ್ದಾರೆ. ಆದರೆ ಹಣದ ಎರಡು ಕಂತೆ ಹಿಡಿದುಕೊಂಡು ಜಾಗ ಖಾಲಿ ಮಾಡಿದ್ದ ಕಾರ್ಮಿಕ ಮರಳಿ ಬಂದಿರಲಿಲ್ಲ. ಇತ್ತ ಶಿವರಾಜ್ ಬಳಿಯಿದ್ದ ಹಣದ ಕಂತೆಯನ್ನು ಕಂಕನಾಡಿ ನಗರ ಪೊಲೀಸರು ವಶಕ್ಕೆ ಪಡೆದಿದ್ದು ಆತನನ್ನು ಠಾಣೆಯಿಂದ ಬಿಟ್ಟು ಕಳುಹಿಸಿದ್ದಾರೆ.

ಆದರೆ ಘಟನೆ ನಡೆದು ವಾರ ಕಳೆದರೂ, ಯಾರು ಕೂಡ ಹಣ ಕಳಕೊಂಡ ಬಗ್ಗೆ ಪೊಲೀಸ್ ದೂರು ದಾಖಲಿಸಿಲ್ಲ. ಈ ನಡುವೆ, ತನಗೆ ಬಿದ್ದು ಸಿಕ್ಕ ಹಣ, ಹಿಂತಿರುಗಿಸಿ ಕೊಡುವಂತೆ ಶಿವರಾಜ್ ಪೊಲೀಸರ ಬಳಿ ಕೇಳಿದ್ದಾರೆ. ಪೊಲೀಸರು ಹಣ ನೀಡಲು ನಿರಾಕರಣೆ ಮಾಡಿದ್ದರು. ಪ್ಯಾಕೆಟ್ ನಲ್ಲಿ 5ರಿಂದ 10 ಲಕ್ಷ ಇರಬಹುದು ಎಂದು ಶಿವರಾಜ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರಿಂದ ಗುಟ್ಟು ರಟ್ಟಾಗಿದೆ. ಆದರೆ ತಮಗೆ ದೊರೆತ ಬಾಕ್ಸ್ನಲ್ಲಿ 49 ಸಾವಿರ ರೂ. ಮಾತ್ರ ಇತ್ತು ಎಂದು ಕಂಕನಾಡಿ ಪೊಲೀಸರು ತಿಳಿಸಿದ್ದಾರೆ. ಹಣ ಕಳಕೊಂಡ ಬಗ್ಗೆ ಯಾರು ಕೂಡ ದೂರು ದಾಖಲು ಮಾಡದೇ ಇರುವುದರಿಂದ ಆ ಹಣದ ಕಂತೆ ಹವಾಲಾ ಹಣವೇ ಆಗಿದ್ದಿರಬೇಕು ಎನ್ನುವ ಶಂಕೆ ಇದೆ. ಈ ನಡುವೆ, ಪ್ಯಾಕೆಟ್ ಒಳಗಿದ್ದ ಲಕ್ಷ ಲಕ್ಷ ರೂಪಾಯಿ ಯಾರ ಕೈಸೇರಿದೆ ಎನ್ನುವ ಸಂಶಯ ಎದುರಾಗಿದೆ.

Discover more from Coastal Times Kannada
Subscribe to get the latest posts sent to your email.







Discussion about this post