ಮಂಗಳೂರು: ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಎರಡು ದಿನಗಳ ಭೇಟಿಗೆ ಮಂಗಳೂರು ಸಜ್ಜಾಗಿದ್ದು, ನಗರಾದ್ಯಂತ ಭದ್ರತಾ ಸಿಬ್ಬಂದಿ ಸರ್ಪಗಾವಲು ಹಾಕಲಾಗಿದೆ.
ರಾಷ್ಟ್ರಪತಿಗಳು ಗುರುವಾರ ಸಂಜೆ ವಿಮಾನ ಮೂಲಕ ಆಗಮಿಸಲಿದ್ದು, ನಗರದ ಕದ್ರಿಯ ಸರ್ಕಿಟ್ ಹೌಸ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಶುಕ್ರವಾರ ಬೆಳಗ್ಗೆ ಶೃಂಗೇರಿಗೆ ತೆರಳಿ, ಸಾಯಂಕಾಲ ಇಲ್ಲಿಗೆ ವಾಪಸ್ ಬಂದು ದೆಹಲಿಗೆ ನಿರ್ಗಮಿಸಲಿದ್ದಾರೆ. ರಾಷ್ಟ್ರಪತಿಯವರೊಂದಿಗೆ ಅವರ ಪತ್ನಿ ಸವಿತಾ ಕೋವಿಂದ ಹಾಗೂ ಪುತ್ರಿ ಸ್ವಾತಿ ಕೋವಿಂದ ಕೂಡ ಆಗಮಿಸಲಿದ್ದಾರೆ.
ರಾಷ್ಟ್ರಪತಿ ವಾಸ್ತವ್ಯ ಹೂಡಲಿರುವ ಸರ್ಕಿಟ್ ಹೌಸ್ ಸುತ್ತಲೂ ಪೊಲೀಸರು ಬಿಗಿ ಬಂದೋಬಸ್ತ್ ಮಡಲಾಗಿದೆ. ರಾಷ್ಟ್ರಪತಿಗಳ ಭದ್ರತೆ ನೋಡಿಕೊಳ್ಳುವ ಎಸ್ಪಿಜಿ ಆಗಮಿಸಿದ್ದು, ಇಡೀ ಸರ್ಕಿಟ್ ಹೌಸ್ನ್ನು ತಮ್ಮ ವಶಕ್ಕೆ ತೆಗೆದುಕೊಂಡಿದೆ. ರಾಷ್ಟ್ರಪತಿಯವರ ಪ್ರಯಾಣ, ವಾಸ್ತವ್ಯ, ಆಹಾರ, ವಸತಿ ಹೀಗೆ ಪ್ರತಿಯೊಂದು ಭಾಗವನ್ನೂ ಎಸ್ಪಿಜಿಯೇ ನೋಡಿಕೊಳ್ಳುತ್ತದೆ.
ವಿಮಾನ ನಿಲ್ದಾಣದಿಂದ ಸರ್ಕಿಟ್ ಹೌಸ್ಗೆ ಬರುವಾಗಲೂ ದಾರಿಯುದ್ದಕ್ಕೂ ಇರುವ ಎಲ್ಲ ಹಂಪ್ಗಳನ್ನೂ ತೆರವು ಮಾಡಲಾಗುತ್ತದೆ. ಪ್ರಯಾಣದ ವೇಳೆ ಯಾವುದೇ ಅಡೆತಡೆ ಇರಬಾರದು, ಭದ್ರತೆಗೆ ಚ್ಯುತಿಯಾಗಬಾರದು ಎಂಬ ಉದ್ದೇಶದಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತದೆ.
ಸರ್ಕಾರಿ ಅಧಿಕಾರಿಗಳು ಸೇರಿದಂತೆ ರಾಷ್ಟ್ರಪತಿಗಳ ಪ್ರವಾಸದ ಕರ್ತವ್ಯದಲ್ಲಿರುವ ಯಾವುದೇ ಸಿಬ್ಬಂದಿಗೂ ಕಡ್ಡಾಯವಾಗಿ ತಪಾಸಣೆ, ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಾಗೂ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಹಲವು ಸುತ್ತುಗಳ ಸಭೆ ನಡೆಸಿದ್ದಾರೆ. ಬುಧವಾರವೂ ಸರ್ಕಿಟ್ ಹೌಸ್ನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ, ಸ್ವಚ್ಛತೆ, ಊಟೋಪಚಾರ ಇತ್ಯಾದಿಗಳ ಕುರಿತು ಕೊನೆಯ ಹಂತದ ಪರಿಶೀಲನೆ ಕೈಗೊಂಡರು.
ಈ ವೇಳೆ ಸಿದ್ಧತೆಗಳನ್ನು ಪರಿಶೀಲಿಸಿದ ಡಿಸಿ ಅಧಿಕಾರಿಗಳಿಗೆ ಬೇಕಾದ ಸಲಹೆ ಸೂಚನೆಗಳನ್ನೂ ನೀಡಿದರು.
ಪ್ರವಾಸ ವಿವರ: ಮೈಸೂರಿನಿಂದ ಅ.7ರಂದು ಸಂಜೆ 5.25ಕ್ಕೆ ವಿಮಾನದಲ್ಲಿ ಹೊರಟು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 6.15ಕ್ಕೆ ತಲುಪುವರು. ಅಲ್ಲಿಂದ ಸರ್ಕೀಟ್ ಹೌಸ್ಗೆ ಆಗಮಿಸಿ ವಾಸ್ತವ್ಯ. 8ರಂದು ಬೆಳಗ್ಗೆ ಉಪಾಹಾರ ಮುಗಿಸಿ ಬೆಳಗ್ಗೆ 10.30ಕ್ಕೆ ಮಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ, ಅಲ್ಲಿಂದ ಹೆಲಿಕಾಪ್ಟರಿನಲ್ಲಿ 10.55ಕ್ಕೆ ಶೃಂಗೇರಿ ಹೆಲಿಪ್ಯಾಡ್ಗೆ ಪ್ರಯಾಣ. ಶೃಂಗೇರಿಯಲ್ಲಿ ಕಾರ್ಯಕ್ರಮ ಮುಗಿಸಿ ಸಂಜೆ 4.20ಕ್ಕೆ ಹೊರಟು ಮಂಗಳೂರಿಗೆ 4.55ಕ್ಕೆ ತಲುಪುವರು. ಮಂಗಳೂರಿನಿಂದ ದೆಹಲಿಗೆ ಸಂಜೆ 5.10ಕ್ಕೆ ತೆರಳಲಿದ್ದಾರೆ.
Discussion about this post