ಪುತ್ತೂರು : ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 4 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ನಿವಾಸಿ ಮನೀಶ್, ಬನ್ನೂರು ಗ್ರಾಮದ ಕೃಷ್ಣನಗರ ನಿವಾಸಿ, ಬಸ್ ಚಾಲಕ ಚೇತನ್, ಪುತ್ತೂರು ಹೊರವಲಯದ ಪಡೀಲು ನಿವಾಸಿ ಕೇಶವ ಪಡೀಲುಹಾಗೂ ಮಂಜುನಾಥ ಯಾನೆ ಮಂಜು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಪುತ್ತೂರಿನ ನೆಹರುನಗರದಲ್ಲಿ ಸೋಮವಾರ ರಾತ್ರಿ ನಡೆದ ಅಪಘಾತಕ್ಕೆ ಸಂಬಂಧಿಸಿ ಅಕ್ಷಯ್ ಕಲ್ಲೇಗ ಹಾಗೂ ಆರೋಪಿಗಳ ಪೈಕಿ ಮನೀಶ್ ಮತ್ತು ಚೇತನ್ ನಡುವೆ ದೂರವಾಣಿ ಕರೆಯ ಮೂಲಕ ಮಾತಿನ ಚಕಮಕಿ ನಡೆದಿತ್ತು. ಈ ಘಟನೆಯ ಬಳಿಕ ಅಕ್ಷಯ್ ಕಲ್ಲೇಗ ತನ್ನ ಸ್ನೇಹಿತ ಚಿಕ್ಕಮುಡ್ನೂರಿನ ವಿಖ್ಯಾತ್ ಎಂಬವರ ಜತೆ ನೆಹರೂನಗರದ ಕೆನರಾ ಬ್ಯಾಂಕ್ ಎಟಿಎಂ ಬಳಿ ನಿಂತುಕೊಂಡಿದ್ದ ವೇಳೆ ಕಾರಿನಲ್ಲಿ ಬಂದಿದ್ದ ಆರೋಪಿಗಳಾದ ಮನೀಶ್, ಚೇತನ್, ಮಂಜುನಾಥ ಮತ್ತು ಕೇಶವ ಪಡೀಲು ಅವರು ಅಕ್ಷಯ್ ಕಲ್ಲೇಗ ಜೊತೆಗೆ ನಡೆದಿದ್ದ ಮಾತಿನ ಚಕಮಕಿಗೆ ಸಂಬಂಧಿಸಿ ತಕರಾರು ಎತ್ತಿ ತಲವಾರಿನಿಂದ ಕಡಿದು ಕೊಲೆ ಮಾಡಿರುವುದಾಗಿ ದೂರಲಾಗಿದೆ.
ಅಕ್ಷಯ್ ಮಾಣಿ-ಮೈಸೂರು ಹೆದ್ದಾರಿ ಬದಿಯ ಪೊದೆಯ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅಕ್ಷಯ್ ಜತೆಗಿದ್ದ ಅವರ ಸ್ನೇಹಿತ ಚಿಕ್ಕಮುಡ್ನೂರಿನ ವಿಖ್ಯಾತ್ ಈ ಸಂದರ್ಭ ತಪ್ಪಿಸಿಕೊಂಡು ಓಡಿಹೋಗಿ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ವಿಖ್ಯಾತ್ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ಪೈಕಿ ಪ್ರಮುಖ ಆರೋಪಿಗಳಾದ ಮನೀಶ್ ಹಾಗೂ ಚೇತನ್ ಕೊಲೆ ಮಾಡಿದ ಜಾಗದಿಂದ ನೇರವಾಗಿ ಪುತ್ತೂರು ನಗರ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದರು. ಇದೀಗ ಉಳಿದ ಇಬ್ಬರು ಆರೋಪಿಗಳಾದ ಕೇಶವ ಪಡೀಲು ಹಾಗೂ ಮಂಜುನಾಥ ಯಾನೆ ಮಂಜನನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
Discussion about this post