ಮಂಗಳೂರು, ಫೆ 11 ; ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಮಾರುತಿ ಯುವಕ ಮಂಡಲ ಉಳ್ಳಾಲ ಹಾಗೂ ಮಾರುತಿ ಕ್ರಿಕೆಟರ್ಸ್ ಉಳ್ಳಾಲ ಇದರ 35ನೇ ವಾರ್ಷಿಕೋತ್ಸವದ ಸಲುವಾಗಿ ಫೆಬ್ರವರಿ 15ರಿಂದ 19ರವರೆಗೆ ಮಂಗಳೂರು ನೆಹರೂ ಮೈದಾನದಲ್ಲಿ ಜರಗಲಿರುವ ಹೊನಲು ಬೆಳಕಿನ ರಾಷ್ಟ್ರ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ” ಮಾರುತಿ ಟ್ರೋಫಿ 2023 “ರ ಆಮಂತ್ರಣ ಪತ್ರಿಕೆ ಹಾಗೂ ಜೆರ್ಸಿ ಬಿಡುಗಡೆ ಕಾರ್ಯಕ್ರಮ ನಗರದ ಮಾಯಾ ಇಂಟರ್ ನ್ಯಾಶನಲ್ ಹೊಟೇಲ್ನಲ್ಲಿ ಜರಗಿತು.

ಆಹ್ವಾನ ಪತ್ರಿಕೆಯನ್ನು ದ.ಕ. ಹಾಗೂ ಉಡುಪಿ ಜಿಲ್ಲಾ ಮೀನುಗಾರಿಕಾ ಮಹಾಮಂಡಲದ ಅಧ್ಯಕ್ಷ ಯಶಪಾಲ್ ಸುವರ್ಣ ಬಿಡುಗಡೆಗೊಳಿಸಿ ಸಂಸ್ಥೆಯ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.

ಉದ್ಯಮಿ ಸಿಂಧೂರಾಮ್ ಸಮವಸ್ತ್ರವನ್ನು ಬಿಡುಗಡೆಗೊಳಿಸಿದರು.

ದಕ್ಷಿಣ ಕನ್ನಡ ಮೊಗವೀರ ವ್ಯವಸ್ಥಾಪಕ ಮಂಡಳಿ ಮತ್ತು ಮೊಗವೀರ ವ್ಯವಸ್ಥಾಪಕ ಮಂಡಳಿಯ ಕಾರ್ಯಾಧ್ಯಕ್ಷ ಹಾಗೂ ಪಂದ್ಯಾಟದ ಸಂಚಾಲಕ ಭರತ್ ಕುಮಾರ್ ಉಳ್ಳಾಲ್ ಪಂದ್ಯಾಟದ ವಿವರಗಳನ್ನು ನೀಡಿದರು.ಮಾರುತಿ ಯುವಕ ಮಂಡಲ ಮತ್ತು ಮಾರುತಿ ಕ್ರಿಕೆಟರ್ಸ್ ಮೊಗವೀರ ಪಟ್ಣ ಉಳ್ಳಾಲ ಇವರ ಆಶ್ರಯದಲ್ಲಿ ಫೆಬ್ರವರಿ15ರಿಂದ 19ರವರೆಗೆ 5 ದಿನಗಳ ಕಾಲ ಮಂಗಳೂರಿನ ನೆಹರೂ ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಟೊರ್ನಮೆಂಟ್ ” ಮಾರುತಿ ಟ್ರೋಫಿ 2023 ” ಆಯೋಜಿಸಲಾಗಿದ್ದು, ಫೆಬ್ರವರಿ 19 ರವಿವಾರ ನಡೆಯುವ ಬಹುಮಾನ ವಿತರಣಾ ಸಮಾರಂಭದ ವಿಶೇಷ ಅತಿಥಿಯಾಗಿ 1983 ವಿಶ್ವಕಪ್ ಕಪ್ ವಿಜೇತ ತಂಡದ ವಿಕೆಟ್ ಕೀಪರ್, ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ಸೈಯದ್ ಕೀರ್ಮಾನಿ ಆಗಮಿಸಲಿದ್ದಾರೆ.

ಸಂಸ್ಥೆಯ ಗೌರವಾಧ್ಯಕ್ಷ ಸುಧೀರ್ ವಿ. ಅಮೀನ್ ಪಂದ್ಯಾಟದ ಬಗ್ಗೆ ಮಾಹಿತಿ ನೀಡಿದರು. ಮಾರುತಿ ಟ್ರೋಫಿ ರಾಷ್ಟ್ರೀಯ ಮಟ್ಟದ ಪಂದ್ಯಾಟದ ಮೊದಲೆರಡು ದಿನ ಫೆಬ್ರವರಿ 15 ಮತ್ತು 16ರಂದು ಮೊಗವೀರ ಸಮುದಾಯದ ಹೊನಲು ಬೆಳಕಿನ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. 8 ಫ್ರಾಂಚೈಸಿಗಳು ಭಾಗವಹಿಸಲಿದ್ದು ಈಗಾಗಲೇ ಆಟಗಾರರ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ.
” ಮಾರುತಿ ಟ್ರೋಫಿ ” ಮೊಗವೀರ ಸಮುದಾಯದ ಈ ಕ್ರಿಕೆಟ್ ಪಂದ್ಯಾಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 2 ಲಕ್ಷ ರೂ ನಗದು, ದ್ವಿತೀಯ ಸ್ಥಾನಿ 1 ಲಕ್ಷ ರೂ. ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ. ವೈಯಕ್ತಿಕ ಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿದ ಆಟಗಾರರಿಗೆ ವಿಶೇಷ ಉಡುಗೊರೆಗಳನ್ನು ನೀಡಲಾಗುತ್ತಿದೆ.
ಮಾರುತಿ ಟ್ರೋಫಿ ರಾಷ್ಟ್ರೀಯ ಮಟ್ಟದ ಅದ್ಧೂರಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ; ಫೆಬ್ರವರಿ 17ರಿಂದ 19 ರವರೆಗೆ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ ಪ್ರಾರಂಭವಾಗಲಿದ್ದು, ವಿವಿಧ ರಾಜ್ಯ ಮತ್ತು ಕರ್ನಾಟಕ ಸೇರಿದಂತೆ ಒಟ್ಟು ಬಲಿಷ್ಠ 16 ತಂಡಗಳಾದ ಯುನೈಟೆಡ್ ಜಾಗ್ವಾರ್ ಸುರತ್ಕಲ್, ನ್ಯಾಶ್ ಬೆಂಗಳೂರು, ಆಜಾದ್ ಉಳ್ಳಾಲ, ಫ್ರೆಂಡ್ಸ್ ಬೆಂಗಳೂರು, ಸ್ಟಾರ್ ಮದ್ದೂರು ಮಂಡ್ಯ, ಜೈ ಕರ್ನಾಟಕ ಬೆಂಗಳೂರು, ರಿಯಲ್ ಫೈಟರ್ಸ್ ಮಲ್ಪೆ, ಡ್ರೀಮ್ ಇಲೆವೆನ್ ಚೆನ್ನೈ, ಅವಿಘ್ನ ಸೃಷ್ಟಿ, ರಾಮಾಂಜನೇಯ ಗುಡ್ಡೆ ಕೊಪ್ಲ,ಫ್ರೆಂಡ್ಸ್ ಕೋಡಿ ಉಳ್ಳಾಲ, ರಂಗ ಇಲೆವೆನ್ ಬೆಂಗಳೂರು, ಜೈ ಹಿಂದ್ ಶಿವಮೊಗ್ಗ, ದಾವಣಗೆರೆ ಇಲೆವೆನ್, ಗುರುಗಣೇಶ್ ನೇಜಾರು ಮತ್ತು ಜಾನ್ಸನ್ ಕುಂದಾಪುರ ಪ್ರಶಸ್ತಿಗಾಗಿ ಕಾದಾಡಲಿದೆ. ಈ ಪಂದ್ಯಾಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 4,00,004 ರೂ ಮತ್ತು ದ್ವಿತೀಯ ಸ್ಥಾನಿ 2,00,002 ರೂ , ಬಹುಮಾನ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ. ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರು ವಿಶೇಷ ಬಹುಮಾನಗಳನ್ನು ಮತ್ತು ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದ ಆಟಗಾರ ಆಕರ್ಷಕ ದ್ವಿಚಕ್ರ ವಾಹನವನ್ನು ತನ್ನದಾಗಿಸಿಕೊಳ್ಳಲಿದ್ದಾರೆ.
ತಂಡಗಳು : ರಿಯಲ್ ಫೈಟರ್ಸ್-ಐಕಾನ್ ಆಟಗಾರರು ಪ್ರದೀಪ್ ಕಿದಿಯೂರು ಮತ್ತು ಕಿರಣ್ ಮಟ್ಟು; ಟೀಮ್ ಯುನೈಟೆಡ್-ಐಕಾನ್ ಆಟಗಾರರು ನಂದನ್ ಮತ್ತು ಪವನ್ಮೊ; ಮೊಗವೀರ ಯುವಕೂಟ-ಐಕಾನ್ ಆಟಗಾರರು-ವಿತೇಶ್ ಮತ್ತು ರಾಕೇಶ್; ಜೈ ಬಲರಾಮ್-ಐಕಾನ್ ಆಟಗಾರರು-ಹರ್ಷಿತ್ ಮತ್ತು ಪ್ರಥ್ವೀ; ಸಾಯಿ ಸ್ಟ್ರೈಕರ್ಸ್ ಪೊಲಿಪು-ಐಕಾನ್ ಆಟಗಾರರು-ಜಶ್ವಂತ್ ಮತ್ತು ಪ್ರಶಾಂತ್; ಪ್ರಗತಿ ನಾರ್ತ್ ಸ್ಟಾರ್ ಬೆಂಗ್ರೆ-ಐಕಾನ್ ಆಟಗಾರರು-ಅನಿಲ್ ಬೆಂಗ್ರೆ ಮತ್ತು ಸುಚಿನ್; ಉಳ್ಳಾಲ ಮೊಗವೀರ ಇಲೆವೆನ್ ಕ್ರಿಕೆಟ್ ಕ್ಲಬ್-ಐಕಾನ್ ಆಟಗಾರರು-ವಿರಾಜ್ ಸಾಲ್ಯಾನ್ ಮತ್ತು ನಿಹಿತ್; ಮಾರುತಿ ಕ್ರಿಕೆಟರ್ಸ್ ಹೆಜಮಾಡಿ-ಐಕಾನ್ ಆಟಗಾರರು-ಗಣೇಶ್ ಬೀಜಾಡಿ ಮತ್ತು ಧರ್ಮೇಶ.
ಸಂಸ್ಥೆಯ ಅಧ್ಯಕ್ಷ ವರದರಾಜ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಮಾಜಿ ಅಧ್ಯಕ್ಷರಾದ ಸಂದೀಪ್ ಪುತ್ರನ್, ದಿನೇಶ್ ಕರ್ಕೇರ, ಉದ್ಯಮಿಗಳಾದ ಕಬೀರ್, ವಿನೋದ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಸಂತ್ ತಣ್ಣೀರುಬಾವಿ ನಿರ್ವಹಿಸಿದರು.
Discover more from Coastal Times Kannada
Subscribe to get the latest posts sent to your email.








Discussion about this post