ಕಾರ್ಕಳ : ಉತ್ಸವ ಉದ್ಘಾಟಿಸಿ ಮಾತನಾಡಿದ ಸಚಿವ ಅಂಗಾರ, ದೀಪದಿಂದ ಬೆಳಕು ಬರಬಹುದು, ಆದರೆ ಮನುಷ್ಯನ ಬದುಕಿನಲ್ಲಿ ಬೆಳಕು ಬರಲು ಹೃದಯ ಶ್ರೀಮಂತಿಕೆ ಅಗತ್ಯ. ದೇಶಕ್ಕೆ ತನ್ನದೇ ಆದ ಪರಂಪರೆಯಿದೆ. ಉತ್ಸವದ ಕಲ್ಪನೆ ಹಿಂದೆ ರಾಜ್ಯದ ಅಭಿವೃದ್ದಿ ಅಡಗಿದೆ. ಅಭಿವೃದ್ಧಿಗೆ ಇಚ್ಛಾಶಕ್ತಿ ಇರಬೇಕು. ಕಲೆ, ಸಂಸ್ಕೃತಿಗಳಲ್ಲಿ ನೆಮ್ಮದಿ ಸಂತೃಪ್ತಿ ದೊರೆಯುತ್ತದೆ. ಇಂತಹ ಕಲ್ಪನೆಗೆ ಪೂರಕವಾಗಿ ಬೇರೆ ಬೇರೆ ಕಡೆಯಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಬೇಕು ಎಂದರು.
‘ಕಾರ್ಕಳ ಉತ್ಸವದ ಮೂಲಕ ಕಾರ್ಕಳ ಕೀರ್ತಿ ಇಡೀ ದೇಶಕ್ಕೆ ಪರಿಚಯ ಆಗಬೇಕು. ಜನರಲ್ಲಿ ಪ್ರೀತಿ ಅಭಿಮಾನ ಬೆಳೆಯಬೇಕು. ಕ್ಷೇತ್ರದ ಸಾಧನೆಗಳು ನಿಂತ ನೀರಾಗಬಾರದು. ಅದು ಮುಂದಿನ ಪೀಳಿಗೆಗೆ ವರ್ಗಾವಣೆಯಾಗಬೇಕು’ ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಗಾಂಧಿ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಕಳ ಉತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲ ಚಟುವಟಿಕೆಗಳಿಗೆ ಹೊಸ ತಲೆಮಾರಿಗೆ ಪ್ರೋತ್ಸಾಹ ಆಗಬೇಕು. ನನ್ನ ‘ಸ್ವರ್ಣ ಕಾರ್ಕಳ’ ಕಲ್ಪನೆಯು ಆರ್ಥಿಕ ಚಟುವಟಿಕೆ ಹಾಗೂ ಎಲ್ಲಾ ಆಯಾಮದಿಂದ ಅಭಿವೃದ್ಧಿ ಹೊಂದುವಂತೆ ಆಗಬೇಕು. ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಪರ ಕಾರ್ಯಗಳು ನಡೆದಿವೆ. ಪ್ರತಿ ಗ್ರಾಮದಲ್ಲಿಯೂ ಆತ್ಮನಿರ್ಭರ ಭಾರತದ ಪರಿಕಲ್ಪನೆ ಸಾಕಾರಗೊಳ್ಳಬೇಕು. ಮುಂದಿನ ಕೆಲ ವರ್ಷಗಳಲ್ಲಿ ಸ್ವರ್ಣ ಕಾರ್ಕಳ ಕಲ್ಪನೆಗೆ ಅಭಿವೃದ್ಧಿ ಗರಿಗಳು ಮೂಡಿ ಬರಲಿದ್ದು, ಇದು ಎಲ್ಲರ ಉತ್ಸವ ಆಗಬೇಕು. ಕಾರ್ಕಳ ಉತ್ಸವಕ್ಕೆ ಎಲ್ಲರೂ ಧ್ವನಿಯಾಗಬೇಕು. ಯಾವುದೇ ರಾಜ್ಯದಿಂದ ಬರುವವರಿಗೆ ಸಂತೋಷ ಉಂಟು ಮಾಡಬೇಕು ಎಂದರು.
ಈಜು ಸ್ಪರ್ಧೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ವಿದ್ಯಾ ಪೈ ಅಜೆಕಾರು ಹಾಗೂ ಅಂತರರಾಷ್ಟ್ರೀಯ ಕ್ರೀಡಾ ಪಟು ರೋಹಿತ್ ಕುಮಾರ್ ಕಟೀಲು ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಮಣಿರಾಜ್ ಶೆಟ್ಟಿ, ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಸಹಾಯಕ ಅಯುಕ್ತ ರಾಜು, ಪುರಸಭೆ ಅಧ್ಯಕ್ಷೆ ಸುಮಾಕೇಶವ್ , ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಕನ್ನಡ ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್ ಮಲ್ಲಿಕಾರ್ಜುನಸ್ವಾಮಿ ಉಪಸ್ಥಿತರಿದ್ದರು.
Discussion about this post