ವಿಟ್ಲ : ಲವ್ ಲೇಟರ್ ವಿವಾದ ಸಂಬಂಧಿಸಿದಂತೆ ಇಲ್ಲಿನ ಖಾಸಗಿ ಪದವಿಪೂರ್ವ ಕಾಲೇಜಿನ 18 ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ವಾರ್ಷಿಕ ಪರೀಕ್ಷೆಯ ವರೆಗೆ ಕಾಲೇಜಿನಿಂದ ಅಮಾನತು ಮಾಡಿದ್ದಾರೆ. ‘ಕಾಲೇಜಿನಲ್ಲಿ ದ್ವಿತೀಯ ಪಿ.ಯು ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿ ಮತ್ತು ಹಿಂದೂ ವಿದ್ಯಾರ್ಥಿನಿ ನಡುವಿನ ಪ್ರೇಮ ಪತ್ರ ಪ್ರಕರಣವು ವಿವಾದದ ಸ್ವರೂಪ ಪಡೆದಿದೆ. ಹೀಗಾಗಿ ಪೋಷಕರ ಸಮ್ಮುಖದಲ್ಲಿ ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಮಾತುಕತೆ ನಡೆಸಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಕಾಲೇಜಿನ ಮೂಲಗಳು ತಿಳಿಸಿವೆ. ಅಮಾನತುಗೊಂಡ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮಾತ್ರ ಕಾಲೇಜಿಗೆ ಬರಬಹುದು ಎಂದು ಸೂಚನೆ ನೀಡಲಾಗಿದೆ.

‘ಪ್ರೀತಿಸುತ್ತಿದ್ದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯ ಪೋಷಕರನ್ನು ಕಾಲೇಜಿನ ಆಡಳಿತ ಮಂಡಳಿಯು ಈ ಮೊದಲೇ ಕಾಲೇಜಿಗೆ ಕರೆಯಿಸಿ, ಅವರಿಬ್ಬರ ಪ್ರೇಮದ ವಿಚಾರವನ್ನು ಗಮನಕ್ಕೆ ತಂದಿತ್ತು. ಆ ಬಳಿಕ ಯಾವುದೇ ಗೊಂದಲವಿಲ್ಲದೆ ತರಗತಿ ನಡೆಯುತ್ತಿತ್ತು. ಆದರೆ, ಈಚೆಗೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರೇಮ ಪ್ರಕರಣವು ಮತ್ತೆ ವಿವಾದ ಪಡೆದುಕೊಂಡಿದೆ. ತರಗತಿಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿದ್ದುದ್ದನ್ನು ಉಪನ್ಯಾಸಕರು ಪರಿಶೀಲಿಸಲು ಮುಂದಾದಾಗ, ವಿದ್ಯಾರ್ಥಿನಿಯ ಕೈಯಲ್ಲಿ ಲವ್ ಲೇಟರ್ ಪತ್ತೆಯಾಗಿದೆ. ಆದರೆ, ಅದನ್ನು ನೀಡಿದ ವಿದ್ಯಾರ್ಥಿ ಅಂದು ಕಾಲೇಜಿಗೆ ಬಂದಿರಲಿಲ್ಲ. ಯುವತಿಯ ಪೋಷಕರಿಗೆ ಈ ವಿಷಯ ತಿಳಿಸಿದ ಕಾಲೇಜು ಆಡಳಿತ ಮಂಡಳಿ, ಪರೀಕ್ಷೆಗೆ ಬರೆಯಲು ಮಾತ್ರ ವಿದ್ಯಾರ್ಥಿನಿಯನ್ನು ಕಾಲೇಜಿಗೆ ಕಳುಹಿಸುವಂತೆ ಸೂಚನೆ ನೀಡಿತ್ತು’ ಎಂಬುದು ಮೂಲಗಳ ಮಾಹಿತಿ.

ಲವ್ ಲೇಟರ್ ಬರೆದ ವಿದ್ಯಾರ್ಥಿಯು ಮರುದಿನ ತರಗತಿಗೆ ಹಾಜರಾದಾಗ, ಹಿಂದೂ ಸಮುದಾಯದ ವಿದ್ಯಾರ್ಥಿಗಳು ಅದನ್ನು ಪ್ರಶ್ನಿಸಿದ್ದರು. ವಿದ್ಯಾರ್ಥಿನಿಗೆ ಕಾಲೇಜಿಗೆ ಬರಬೇಡ ಎಂದು ಹೇಳಿ, ಈ ವಿದ್ಯಾರ್ಥಿಗೆ ಹೇಗೆ ಅವಕಾಶ ನೀಡಿದ್ದೀರಿ ಎಂದು ಕೇಳಿದರು. ವಿಷಯ ವಿವಾದ ಸ್ವರೂಪ ಪಡೆಯುತ್ತಿದ್ದಂತೆ, ಆ ವಿದ್ಯಾರ್ಥಿಯ ಬೆಂಬಲಕ್ಕೆ ನಿಂತವರನ್ನು ಹಾಗೂ ಪ್ರಶ್ನಿಸಲು ಹೋದ ವಿದ್ಯಾರ್ಥಿಗಳನ್ನು ಪೋಷಕರ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಗಿತ್ತು. ಎರಡೂ ಕಡೆಯ ಒಟ್ಟು 18 ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಮಾತ್ರ ಅವಕಾಶ ನೀಡುವ ನಿರ್ಧಾರವನ್ನು ಕಾಲೇಜಿನ ಆಡಳಿತ ಮಂಡಳಿ ತೆಗೆದುಕೊಂಡಿದೆ’ ಎಂದು ಮೂಲಗಳು
ತಿಳಿಸಿವೆ.
Discover more from Coastal Times Kannada
Subscribe to get the latest posts sent to your email.







Discussion about this post