ಮಂಗಳೂರು, ಎಪ್ರಿಲ್ 15: ನಗರದ ಮಹಾಕಾಳಿಪಡ್ಪು ಬಳಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ತಾಗಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ಮೂಲದ, ಪ್ರಸ್ತುತ ಮಹಾಕಾಳಿಪಡ್ಪುವಿನ ನಿರ್ಮಲ ನಗರದಲ್ಲಿ ವಾಸವಾಗಿರುವ ವರುಣ್ (15) ಮೃತಪಟ್ಟ ದುರ್ದೈವಿ.
ಮಹಾಕಾಳಿಪಡ್ಪು ಅಂಡರ್ಪಾಸ್ ಬಳಿಯ ಭಜನಾ ಮಂದಿರದ ಹತ್ತಿರ ವರುಣ್ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ. ಆಟದ ವೇಳೆ ಚೆಂಡು ಮಂದಿರದ ಛಾವಣಿಯ ಮೇಲೆ ಬಿದ್ದಿತ್ತು. ಚೆಂಡನ್ನು ಹೆಕ್ಕಲು ಛಾವಣಿ ಏರಿದಾಗ ಆಕಸ್ಮಿಕವಾಗಿ ಮೇಲಿದ್ದ ವಿದ್ಯುತ್ ತಂತಿ ವರುಣ್ಗೆ ತಾಗಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟರಲ್ಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ವರುಣ್ ತಂದೆ ಕಣ್ಣನ ಗೌಡ ಅವರು ಕಳೆದ 25 ವರ್ಷಗಳಿಂದ ಮಂಗಳೂರಿನಲ್ಲಿ ಸಣ್ಣ ಕ್ಯಾಂಟೀನ್ ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ. ವರುಣ್ ಇತ್ತೀಚೆಗಷ್ಟೇ ಎಸೆಸೆಲ್ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ. ರಜೆಯ ಸಂಭ್ರಮದಲ್ಲಿದ್ದ ಮಗ ವಿಧಿವಶನಾಗಿರುವುದು ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post